ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಜು.6ಕ್ಕೆ ಬಿಜೆಪಿ ಬೃಹತ್ ಪ್ರತಿಭಟನೆ
ಮಡಿಕೇರಿ: ತಲೆಮಾರುಗಳಿಂದ ಕೃಷಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಸರ್ಕಾರದ ಆದೇಶದ ವಿರುದ್ಧ ಹಾಗೂ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕೋರಿ ಜು. ೬ರಂದು ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಜಿಲ್ಲಾಧ್ಯಕ್ಷ ನಾಂಪಡ ರವಿಕಾಳಪ್ಪ ತಿಳಿಸಿದರು.
೪-೫ ತಲೆಮಾರುಗಳಿಂದ ಬದುಕುತ್ತಿರುವ ರೈತರಿಗೆ ಹಕ್ಕುಪತ್ರ ನೀಡದೆ, ಜಮೀನನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಲು ಸರ್ಕಾರ ಆದೇಶಿಸಿದೆ. ಇದನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಕಾಡಾನೆ, ಹುಲಿ ದಾಳಿಗೆ ರೈತರು, ಕಾರ್ಮಿಕರು, ಜಾನುವಾರು ಬಲಿಯಾಗುತ್ತಿದ್ದು, ಸರ್ಕಾರ ನಾಮಕಾವಸ್ತೆ ಪರಿಹಾರ ನೀಡುತ್ತಿದೆ ಎಂದು ದೂರಿದರು.
ಜು. ೬ರಂದು ಭಾಗಮಂಡಲ, ಸೋಮವಾರಪೇಟೆ, ಕುಟ್ಟ, ಸಿದ್ದಾಪುರ, ತೊರೆನೂರಿನಿಂದ ವಾಹನ ಜಾಥಾ ಹೊರಟು ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡು ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ಭಾಗವಹಿಸಲಿದ್ದಾರೆ. ಎಂಎಲ್ಸಿ ಸುಜಾಕುಶಾಲಪ್ಪ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಪ್ರಮುಖರಾದ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್, ವಿ.ಕೆ.ಲೋಕೇಶ್, ಇದ್ದರು.

