ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮಹಿಳೆಯರಲ್ಲಿ ಮುಕ್ಕಾಟಿರ (ಹರಿಹರ) ಹಾಗೂ ಪುರುಷರಲ್ಲಿ ಚೆಕ್ಕೇರ ಚಾಂಪಿಯನ್

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮಹಿಳೆಯರಲ್ಲಿ ಮುಕ್ಕಾಟಿರ (ಹರಿಹರ) ಹಾಗೂ ಪುರುಷರಲ್ಲಿ ಚೆಕ್ಕೇರ ಚಾಂಪಿಯನ್

ಮಡಿಕೇರಿ ಮೇ 1 : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಕೊಡವ ಕುಟುಂಬಗಳ ನಡುವೆ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿತ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ'ಯ ಫೈನಲ್ಸ್ ಪಂದ್ಯದಲ್ಲಿ ಚೆಕ್ಕೇರ ತಂಡ ಸತತ 9ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಹರಿಹರ ಮುಕ್ಕಾಟಿರ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇದೇ ಮೊದಲ ಬಾರಿಗೆ ಫೈನಲ್ ಹಂತ ಪ್ರವೇಶಿಸಿದ ಕೆದಮಳ್ಳೂರು ಮಾಳೇಟಿರ ಕುಟುಂಬದ ಪುರುಷರ ತಂಡ ಹಾಗೂ ಮಣವಟ್ಟಿರ ಕುಟುಂಬದ ಮಹಿಳಾ ತಂಡ ರನ್ನರ್ಸ್ ಸ್ಥಾನವನ್ನು ತಮ್ಮದಾಗಿಸಿಕೊಂಡವು.

*lರೋಚಕ ಪಂದ್ಯಾಟ

ಬೆಳಗೆ ನಡೆದ ಮಹಿಳಾ ತಂಡದ ಫೈನಲ್ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದ ಮಣವಟ್ಟಿರ ತಂಡ ಬ್ಯಾಟಿಂಗ್ ಅಯ್ದುಕೊಂಡಿತು. ಆರಂಭದಲ್ಲೇ ಅತ್ಯುತ್ತಮ ಹೋರಾಟಕ್ಕೆ ಇಳಿದ ಮಣವಟ್ಟಿರ ಮಹಿಳಾ ಆಟಗಾರರು ನಿಗಧಿತ 6 ಓವರ್ ಮುಕ್ತಾಯಕ್ಕೆ ರನ್ ಔಟ್‌ನಲ್ಲಿ 1 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿ, ಎದುರಾಳಿ ಹರಿಹರ ಮುಕ್ಕಾಟಿರ ತಂಡಕ್ಕೆ 42 ರನ್‌ಗಳ ಅಂತಿಮ ಗುರಿ ನೀಡಿದರು.

ರನ್ ಗುರಿಯ ಬೆನ್ನು ಹತ್ತಿದ ಹರಿಹರ ಮುಕ್ಕಾಟಿರ ತಂಡ ಆರಂಭದಲ್ಲಿ ನಿಧಾನ ಆಟದ ತಂತ್ರಗಾರಿಕೆ ನಡೆಸಿತು. 3ನೇ ಓವರ್‌ನಲ್ಲಿ 1 ವಿಕೆಟ್ ಪತನವಾದ ಬಳಿಕ ಹರಿಹರ ಮುಕ್ಕಾಟಿರ ತಂಡ ಅತ್ಯಂತ ಬಿರುಸಿನ ದಾಳಿ ನಡೆಸಲು ಮುಂದಾಯಿತು. ‘ಮಾಡು ಇಲ್ಲವೇ ಮಡಿ’ ಎಂಬತಿದ್ದ ಪಂದ್ಯದ ಕೊನೆ ಓವರ್ ನೆರೆದಿದ್ದ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ‘ಬಾಲ್ ಟು ಬಾಲ್’ ರನ್ ಅಗತ್ಯ ಎದುರಾದರೂ ಎದೆಗುಂದದ ಹರಿಹರ ಮುಕ್ಕಾಟಿರ ತಂಡ ರಣ ರೋಚಕ ಬ್ಯಾಟಿಂಗ್ ದಾಳಿ ನಡೆಸುವ ಮೂಲಕ 5.3 ಓವರ್‌ನಲ್ಲಿಯೇ 42 ರನ್ ಬಾರಿಸಿತು. ಆ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸುವ ಕನಸು ಕಂಡಿದ್ದ ಮಣವಟ್ಟಿರ ತಂಡಕ್ಕೆ ಸೋಲಿನ ರುಚಿ ತೋರಿಸಿತು. 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕ್ರಿಕೆಟ್ ನಮ್ಮೆಯ ಬಲಿಷ್ಟ ಮಹಿಳಾ ತಂಡವಾಗಿ ಹರಿಹರ ಮುಕ್ಕಾಟಿರ ತಂಡ ಹೊರ ಹೊಮ್ಮಿತು.

ಮಣವಟ್ಟಿರ ತಂಡದ ಪರವಾಗಿ ಸಂಗೀತ 22 ಹಾಗೂ ಅರ್ಪಿತ 12 ರನ್ ಗಳಿಸಿದರು. ಹರಿಹರ ಮುಕ್ಕಾಟಿರ ತಂಡದ ಪರವಾಗಿ ಭಾರತಿ ಶುಭ 12, ಅಂಜನ 12 ಹಾಗೂ ಪ್ರಮಿ ಬಿದ್ದಪ್ಪ ಅವರು 11 ರನ್ ಗಳಿಸಿದರು. ಹರಿಹರ ಮುಕ್ಕಾಟಿರ ತಂಡದ ಭಾರತಿ ಶುಭ ‘ವುಮೆನ್ ಆಫ್ ದ ಮ್ಯಾಚ್’ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಸೋತ ತಂಡದ ಪರವಾಗಿ ಉತ್ತಮ ಪ್ರದರ್ಶನಕ್ಕೆ ಮಣವಟ್ಟಿರ ಸಂಗೀತ ‘ವುಮೆನ್ ಮ್ಯಾಚ್ ಆಫ್’ ಸ್ಥಾನಕ್ಕೆ ಪಾತ್ರರಾದರು.

ಚಾಂಪಿಯನ್ ಪಟ್ಟ ಆಬಾಧಿತ

ಕೊಡವ ಕ್ರಿಕೆಟ್ ನಮ್ಮೆಯಲ್ಲಿಯೇ ಅತೀ ಹೆಚ್ಚು 8 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಬಲಿಷ್ಟ ಚೆಕ್ಕೇರ ತಂಡ ಮತ್ತು ಕೆದಮಳ್ಳೂರು ಮಾಳೇಟಿರ ತಂಡಗಳು ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟಕ್ಕಿಳಿದವು. ಮಾಳೇಟಿರ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡು ಬೃಹತ್ ಮೊತ್ತದ ರನ್ ಪೇರಿಸಲು ಮುಂದಾಯಿತು. ಪಂದ್ಯದ ಆರಂಭದಲ್ಲೇ ಬ್ಯಾಟ್ಸ್ಮೆನ್‌ಗಳು ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಚಾಂಪಿಯನ್ ಚೆಕ್ಕೇರ ತಂಡದ ಬೌಲರ್‌ಗಳು ಮಾಳೇಟಿರ ತಂಡದ ಬ್ಯಾಟ್ಸ್ ಮೆನ್‌ಗಳನ್ನು ಕಠಿಣ ಬಾಲಿಂಗ್ ಮೂಲಕ ಕಟ್ಟಿಹಾಕುವ ಎಲ್ಲಾ ಪ್ರಯತ್ನ ನಡೆಸಿದರು. ಅಂತಿಮವಾಗಿ 10 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 101 ರನ್ ಗಳಿಸಿದ ಮಾಳೇಟಿರ ತಂಡ ಎದುರಾಳಿ ತಂಡಕ್ಕೆ 102 ರನ್‌ಗಳ ಗುರಿ ನೀಡಿತು. ಸಮಬಲದ ಹೋರಾಟಕ್ಕೆ ಮುಂದಾದ ಚೆಕ್ಕೇರ ತಂಡದ ಬ್ಯಾಟ್ಸ್ ಮೆನ್‌ಗಳು ಕೇವಲ 8 ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡು ಒಟ್ಟು 106 ರನ್ ಗಳಿಸಿ ಮಾಳೇಟಿರ ತಂಡವನ್ನು ಪರಾಭವಗೊಳಿಸುವ ಮೂಲಕ 9ನೇ ಬಾರಿಗೆ ಚಾಂಪಿಯನ್ ತಂಡದ ಪಟ್ಟವನ್ನು ಮುಡಿಗೇರಿಸಿಕೊಂಡಿತು.

ಮಾಳೇಟಿರ ತಂಡದ ಪರವಾಗಿ ರಾನೆ ಕರುಂಬಯ್ಯ 64, ರಿತೇಶ್ ಕುಟ್ಟಪ್ಪ 16, ರಿಶಬ್ ಬೋಪಯ್ಯ 13 ರನ್ ಗಳಿಸಿದರು. ಕಾರ್ಯಪ್ಪ ಹಾಗೂ ಸಜನ್ ಸೋಮಯ್ಯ ತಲಾ 3 ವಿಕೆಟ್ ಹಾಗೂ ಆಕಾಶ್ 1 ವಿಕೆಟ್ ಪಡೆದರು. ಚೆಕ್ಕೇರ ತಂಡದ ಪರವಾಗಿ ಕಾರ್ಯಪ್ಪ 52, ಆಕಾಶ್ 11, ಸಜನ್ ಸೋಮಯ್ಯ 35 ರನ್ ಬಾರಿಸಿದರು. ವಿಕಾಶ್ ಮುದ್ದಪ್ಪ 2, ನವೀನ್ ನಂಜಪ್ಪ ಹಾಗೂ ರಾನೆ ಕರುಂಬಯ್ಯ ತಲಾ 1 ವಿಕೆಟ್ ಪಡೆದರು. ಚಕ್ಕೇರ ಕಾರ್ಯಪ್ಪ ಮ್ಯಾನ್ ಆಫ್ ದ ಮ್ಯಾಚ್ ಸ್ಥಾನ ಅಲಂಕರಿಸಿದರೆ, ಸೋತ ತಂಡದ ಪರವಾಗಿ ಉತ್ತಮ ಪ್ರದರ್ಶನಕ್ಕಾಗಿ ಮಾಳೇಟಿರ ರಾನೆ ಕರುಂಬಯ್ಯ ಮ್ಯಾನ್ ಆಫ್ ಮ್ಯಾಚ್ ಸ್ಥಾನ ಪಡೆದರು.

ಬಹುಮಾನ ವಿತರಣೆ:

ಕೊಟ್ಟಂಗಡ ಆತಿಥ್ಯ

2027ರಲ್ಲಿ ನಡೆಯಲಿರುವ ಕೊಡವ ಕುಟುಂಬಗಳ ನಡುವಿನ 25ನೇ ವರ್ಷದ ಕ್ರಿಕೆಟ್ ಪಂದ್ಯಾಟದ ಆತಿಥ್ಯವನ್ನು ಕೊಟ್ಟಂಗಡ ಕುಟುಂಬ ವಹಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೂರ್ನಾಡು ಪಟ್ಟಣದಲ್ಲಿ ಕೊಟ್ಟಂಗಡ ಕುಟುಂಬದ ಬ್ಯಾನರ್ ಹಿಡಿದು ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆ ನಡೆಸಿದರು. ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣಕ್ಕೆ ಆಗಮಿಸಿದ ಮೆರವಣಿಗೆಯನ್ನು ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಆತ್ಮೀಯವಾಗಿ ಸ್ವಾಗತಿಸಿದರು. ಮೈದಾನದಲ್ಲಿ ಒಂದು ಸುತ್ತು ಸಾಗಿದ ಕೊಟ್ಟಂಗಡ ಕುಟುಂಬಸ್ಥರು ಮುಂದಿನ ವರ್ಷ ಬಾಳಲೆಯಲ್ಲಿ ನಡೆಯುವ ಕೊಟ್ಟಂಗಡ ಕ್ರಿಕೆಟ್ ನಮ್ಮೆಗೆ ಎಲ್ಲರೂ ಬೆಂಬಲ ನೀಡಬೇಕೆಂದು ಕೋರಿದರು. ಫೈನ್‌ಲ್ ಪಂದಾಟದ ಸಭಾ ಕಾರ್ಯಕ್ರಮದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಧ್ವಜ ಹಸ್ತಾಂತರ ಮಾಡುವ ಮೂಲಕ 2027ರ ಅಧಿಕೃತ ಆತಿಥ್ಯ ಹಸ್ತಾಂತರಿಸಿತು.

ಕ್ರೀಡಾ ಪರಂಪರೆ ಮುಂದುವರೆಯಲಿ

ಫೈನಲ್ ಪಂದ್ಯಕ್ಕೆ ಮುಖ್ಯ ಅತಿಥಿಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಮೊದಲಿಗೆ ಆಟಗಾರರನ್ನು ಪರಿಚಯಿಸಿಕೊಂಡು ಪಂದ್ಯಾಟಕ್ಕೆ ಶುಭ ಕೋರಿದರು. ಕೊಡಗು ಜಿಲ್ಲೆ ಹಾಕಿ ಕ್ರೀಡಾ ಪರಂಪರೆಗೆ ಹೆಸರುವಾಸಿಯಾಗಿದೆ. ಇದರ ನಡುವೆಯೇ ಕುಟುಂಬಗಳ ನಡುವೆ ಕ್ರಿಕೆಟ್ ಆಯೋಜನೆ ಮಾಡುತ್ತಿರುವುದು ಮತ್ತೊಂದು ಹೆಮ್ಮೆಯ ಸಂಗತಿ. ನೂರಾರು ಕುಟುಂಬಗಳು ಹಾಕಿ ಮತ್ತು ಕ್ರಿಕೆಟ್ ಕ್ರೀಡೆಯಲ್ಲಿ ಪಾಲ್ಗೊಂಡಿವೆ. ಜಿಲ್ಲೆಯಲ್ಲಿರುವ ಎಲ್ಲಾ ಕುಟುಂಬಗಳು ಕೂಡ ಕ್ರೀಡಾ ಕೂಟಗಳನ್ನು ಅದ್ದೂರಿಯಿಂದ ಆಯೋಜಿಸುವಂತಾಗಲಿ. ಜಿಲ್ಲೆಯ ಈ ಕ್ರೀಡಾ ಪರಂಪರೆ ಹೀಗೆ ಮುಂದುವರೆಯಲಿ ಎಂದು ಆಶಿಸಿದರು. ಕೊಡಗು ಜಿಲ್ಲೆ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ನೀರುಣಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ತಾಯಿ ಕಾವೇರಿಯ ಆಶೀರ್ವಾದ ಜಿಲ್ಲೆಯೆ ಮೇಲೆ ಸದಾ ಇರಲಿ ಎಂದು ಹಾರೈಸಿದರು. 2018ರಲ್ಲಿ ಜಿಲ್ಲೆಯಲ್ಲಿ ಘಟಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ತಾವು ಇಲ್ಲಯೇ ವಾಸ್ತವ ಹೂಡಿ, ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರ ಮೂಲಕ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಿದ್ದನ್ನು ಇದೇ ಸಂದರ್ಭ ಸ್ಮರಿಸಿದರು.

ಕೊಡಗಿನ ಕೊಡುಗೆ ಅಪಾರ

ಒಲಂಪಿಕ್ಸ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಕೊಡಗಿನ ಕ್ರೀಡಾಪಟುಗಳು ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕೊಡವ ಸಮುದಾಯ ಚಿಕ್ಕದಾದರೂ ಕೂಡ ಕ್ರೀಡಾ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಇಡೀ ದೇಶದಲ್ಲಿಯೇ ಕೊಡಗು ಮಾತ್ರವೇ ಕ್ರೀಡೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕ್ರೀಡಾಪಟುಗಳನ್ನು ನೀಡಿದೆ ಎಂದು ಅವರು ಹೇಳಿದರು. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಈ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಇಂತಹ ಕ್ರೀಡಾಕೂಟಗಳು ಅವಶ್ಯವಾಗಿವೆ. ಬಾಳುಗೋಡು ಬಳಿ ಕ್ರೀಡಾ ಸಮುಚ್ಚಯ ನಿರ್ಮಾಣದ ಕಾಮಗಾರಿ ಆರಂಭವಾಗಿದೆ. ಮುಂದಿನ 3 ವರ್ಷಗಳಲ್ಲಿ ಇದು ಪೂರ್ಣಗೊಳ್ಳಲಿದ್ದು, ಜಿಲ್ಲೆಗೆ ಕೀರ್ತಿ ತಂದ ಎಲ್ಲಾ ಕ್ರೀಡಾಪಟುಗಳ ಹೆಸರಿಗೆ ಅರ್ಪಿಸಲಾಗುತ್ತದೆ ಎಂದು ಹೇಳಿದರು.

ಬೇತ್ರಿ ಮುಕ್ಕಾಟಿರ ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಸುರೇಶ್ ಪೆಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಕ್ಕಾಟಿರ ರವಿ ಚೀಯಣ್ಣ ಅತಿಥಿಗಳನ್ನು ಸ್ವಾಗತಿಸಿದರು. ಉದ್ಯಮಿಗಳಾದ ಮಾಚೆಟ್ಟಿರ ಜೆನಿತ್ ಅಯ್ಯಪ್ಪ, ಮಣವಟ್ಟಿರ ಮಧು ಬೋಪಣ್ಣ, ಎಸ್.ಬಾಲಚಂದ್ರ, ಕೊಡವ ಕ್ರಿಕೆಟ್ ಅಕಾಡೆಮಿ ಉಪಾಧ್ಯಕ್ಷ ಚೇರಂಡ ಕಿಶನ್, ಹಿರಿಯ ಆರ್‌ಟಿಓ ಅಧಿಕಾರಿ ನಂದೇಟಿರ ಸುಬ್ಬಯ್ಯ, ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಬೋಪಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.