ಡಿವೈಎಫ್ಐ ನೂತನ ಘಟಕ ರಚನೆ; ಯುವಜನರ ಹಕ್ಕಿಗಾಗಿ ಹೋರಾಟಕ್ಕೆ ನಿರ್ಧಾರ
ವಿರಾಜಪೇಟೆ: ಜಿಲ್ಲೆಯ ಗಡಿ ಪ್ರದೇಶವಾದ ಕರಿಕೆಯಲ್ಲಿ ಡಿವೈಎಫ್ಐ ಸಂಘಟನೆಯ ನೂತನ ಘಟಕವನ್ನು ರಚಿಸಲಾಯಿತು. ಡಿವೈಎಫ್ಐ ಕೊಡಗು ಜಿಲ್ಲಾ ಖಜಾಂಜಿ ಸಾದಿಕ್ ಎ.ಹೆಚ್ ಅವರ ನೇತೃತ್ವದಲ್ಲಿ ಈ ಘಟಕ ರಚನಾ ಸಭೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಮಾಜಿ ಮುಖಂಡರಾದ ರಾಘವನ್ ವಹಿಸಿದ್ದರು. ಮುಖಂಡರಾದ ಸತ್ಯನಾಥನ್, ಕೇಶವನ್ ಮತ್ತು ಜಿಲ್ಲಾ ಸಮಿತಿ ಸದಸ್ಯ ಶಂಸೀರ್ ಸೋಮವಾರಪೇಟೆ ಅವರು ಸಭೆಯಲ್ಲಿ ಪಾಲ್ಗೊಂಡು ಯುವ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಘಟಕದ ನೂತನ ಅಧ್ಯಕ್ಷರಾಗಿ ಹರೀಶ್, ಉಪಾಧ್ಯಕ್ಷರಾಗಿ ಮುಕೇಶ್, ಕಾರ್ಯದರ್ಶಿಯಾಗಿ ಕವನ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ನಿಖಿಲ್ ಕೆ.ಡಿ ಮತ್ತು ಖಜಾಂಜಿಯಾಗಿ ವಿನೀಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮುಂಬರುವ ದಿನಗಳಲ್ಲಿ ಕರಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸಾಮಾನ್ಯರ ಮೂಲಭೂತ ಸೌಕರ್ಯಗಳಿಗಾಗಿ ಮತ್ತು ಯುವಜನರ ವಿವಿಧ ಹಕ್ಕುಗಳಿಗಾಗಿ ಬಲಿಷ್ಠವಾದ ಹೋರಾಟಗಳನ್ನು ಸಂಘಟಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕೊಡಗು ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಘಟಕದ ರಚನೆ ಪ್ರಮುಖ ಮೈಲಿಗಲ್ಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.