ಅರಣ್ಯ ಇಲಾಖೆ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ : ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಎಸ್ ಪೊನ್ನಣ್ಣ
ಗೋಣಿಕೊಪ್ಪ; ಕೊಡಗಿನ ಕೆಲವು ಭಾಗಗಳಲ್ಲಿ ಆನೆ ದಾಳಿಯಿಂದ ಜೀವ ಹಾನಿ ಆಗುತ್ತಿರುವುದನ್ನು ಅರಣ್ಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿ, ರೈತ ಸಂಘದ ವತಿಯಿಂದ ಇತಿಮತಿಯಲ್ಲಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ವಿಷಯ ತಿಳಿದ ಮಾನ್ಯ ಶಾಸಕರಾದ ಎ ಎಸ್ ಪೊನ್ನಣ್ಣರವರು ತಮ್ಮ ಬೆಂಗಳೂರು ಕಾರ್ಯಕ್ರಮವನ್ನು ಮುಂದೂಡಿ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಮಾತನಾಡಿಸಿದರು.
ಶಾಸಕ ಪೊನ್ನಣ್ಣ ರವರು ಅರಣ್ಯ ಸಚಿವರಾಗಲಿ ಎಂದು ಇಚ್ಚಿಸಿದ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಹಾಗೂ ಪ್ರತಿಭಟನಾಕಾರರು;
ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯನವರು ಪ್ರತಿಭಟನೆ ಉದ್ದೇಶವನ್ನು ವಿವರಿಸುತ್ತಾ, ಶಾಸಕ ಪೊನ್ನಣ್ಣ ರವರು ಅರಣ್ಯ ಸಚಿವರಾಗಿ ಬಂದಲ್ಲಿ ತಮ್ಮ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಹೇಳಿದರು. ಆಗ ಪ್ರತಿಭಟನಾಕಾರರು ಜೋರಾಗಿ ಚಪ್ಪಾಳೆ ಹೊಡೆಯುವ ಮೂಲಕ ತಮ್ಮ ಬೆಂಬಲವನ್ನು ಸಾರಿದರು.
ಮುಂದುವರಿದ ಮನುಸೋಮಯ್ಯ ರವರು, ಪ್ರತಿಭಟನಾಕಾರರ ಪರವಾಗಿ ಶಾಸಕರಲ್ಲಿ, ಪದೇ ಪದೇ ಅರಣ್ಯ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಬರಲೇಬೇಕೆಂದು ಹಠ ಹಿಡಿದರು. ಕೂಡಲೇ ಶಾಸಕರು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಕರೆ ಮೂಲಕ ಸಂಪರ್ಕಿಸಿ, ಕೂಡಲೇ ಸಿಸಿಎಫ್ ರವರನ್ನು ಸ್ಥಳಕ್ಕೆ ಬರುವಂತೆ ಸೂಚಿಸಲು ತಿಳಿಸಿದರಲ್ಲದೆ, ಸಮಸ್ಯೆಯನ್ನು ಬಗೆಹರಿಸಿ ತನಗೆ ವರದಿ ನೀಡುವಂತೆ ಸೂಚಿಸಿದರು.
