ಫೀಲ್ಡ್ ಮಾರ್ಷಲ್ ಕೆ.ಎಂ‌ ಕಾರ್ಯಪ್ಪ ಅವರ ಹುಟ್ಟೂರು ಶನಿವಾರಸಂತೆಯಲ್ಲಿ ಜನ್ಮದಿನ ಆಚರಣೆ

ಫೀಲ್ಡ್ ಮಾರ್ಷಲ್ ಕೆ.ಎಂ‌ ಕಾರ್ಯಪ್ಪ ಅವರ ಹುಟ್ಟೂರು ಶನಿವಾರಸಂತೆಯಲ್ಲಿ ಜನ್ಮದಿನ ಆಚರಣೆ

ಶನಿವಾರಸಂತೆ:ಜ28:-ಫಿಲ್ಡ್ ಮಾರ್ಷಲ್‌ ಜನರಲ್ ಕಾರ್ಯಪ್ಪ ಅವರು ದೇಶಕಂಡ ವೀರಸೇನಾನಿ, ಸಮಯ ಪಾಲಕ, ಅತ್ಯುನ್ನತ್ತ ದೇಶಪ್ರೇಮಿಯಾಗಿದ್ದರು ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್ ಶ್ಲಾಘಿಸಿದರು.

ಅವರು ಮಂಗಳವಾರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 127ನೇ ಜನ್ಮ ದಿನವನ್ನು ಅವರು ಜನಿಸಿದ ಶನಿವಾರಸಂತೆಯಲ್ಲಿ ಜನಿಸಿದ ನಿವಾಸದಲ್ಲಿ [ಈಗ ಸಾರ್ವಜನಿಕ ಗ್ರಂಥಾಲಯ] ಆಚರಿಸಿದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ತಂದೆ ಕೋದಂಡೆರ ಮಾದಪ್ಪ ಅವರು ಶನಿವಾರಸಂತೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಜನಿಸುತ್ತಾರೆ.

ಕೆಲವು ವರ್ಷ ಇಲ್ಲಿನ ಪರಿಸರದಲ್ಲಿ ಬಾಲ್ಯವನ್ನು ಕಳೆಯುತ್ತಾರೆ. ನಂತರ ಕಾರ್ಯಪ್ಪ ಅವರ ಪೋಷಕರು ಬೇರೆಕಡೆಗೆ ವರ್ಗಾವಣೆಗೊಳ್ಳುತ್ತಾರೆ ಎಂದ ಅವರು ವಿದ್ಯಾಭ್ಯಾಸ ಪೂರೈಸಿದ ನಂತರ ಕಾರ್ಯಪ್ಪ ಅವರು ಸೇನೆಗೆ ಸೇರುತ್ತಾರೆ ಹಂತಹಂತವಾಗಿ ಸೇನೆ ಅತ್ಯುನತ್ತ ಹುದ್ದೆಗೇರುತ್ತಾರೆ ಎಂದರು. ಕಾರ್ಯಪ್ಪ ಅವರು 1948ರ ಪಾಕ್ ಜೊತೆಗಿನ ಯುದ್ಧದಲ್ಲಿ ಸೈನ್ಯದ ಮುಂದಾಳತ್ವವನ್ನು ವಹಿಸುತ್ತಾರೆ ಈ ಮೂಲಕ ಯುದ್ದದಲ್ಲಿ ದೇಶಕ್ಕೆ ಜಯವನ್ನು ತಂದುಕೊಟ್ಟಿದ್ದಾರೆ 1962ರಲ್ಲಿ ನಡೆದ ಚೀನಾ ಮೇಲಿನ ಯುದ್ದದಲ್ಲಿ ಅವರು ನಿವೃತ್ತರಾಗಿದ್ದರೂ ಸಹ ದೇಶಕ್ಕೆ ಸೇವೆ ಸಲ್ಲಿಸಲು ಮತ್ತೆ ಅವಕಾಶ ಕೊಡುವಂತೆ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು ಎಂದರು.

 ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ವೀರ ಸೇನಾನಿ ಕಾರ್ಯಪ್ಪ ಅವರಲ್ಲಿದ್ದ ದೇಶಪ್ರೇಮ, ಶಿಸ್ತು ನಿಯಮ, ಸಮಯ ಪಾಲನೆ ಇವುಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುವುದರ ಜೊತೆಯಲ್ಲಿ ದೇಶಾಭಿಮಾನ ಮತ್ತು ಹಗಳಿರುಳು ರಾಷ್ಟçವನ್ನು ಹಾಗೂ ನಮ್ಮನ್ನು ರಕ್ಷಣೆ ಮಾಡುತ್ತಿರುವ ನಮ್ಮ ಸೈನಿಕರ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತ ಹರೀಶ್ ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಗೀತ ಹರೀಶ್, ಸದಸ್ಯ ಎಸ್.ಸಿ.ಶರತ್‌ಶೇಖರ್, ಶನಿವಾರಸಂತೆ ಉಪ ತಾಹಶೀಲ್ದಾರ ಮಧುಸೂದನ್, ಆರ್‌ಐ ಮಂಜುನಾಥ್, ಲೆಕ್ಕಾಧಿಕಾರಿ ಚಂದನ್, ಪ್ರಮುಖರಾದ ಮಹಮ್ಮದ್ ಖನ್ನ, ಕಾರ್ಯಪ್ಪ ಅಭಿಮಾನ ಬಳಗದ ಬಿಲಾಲ್, ರಕ್ಷಿತ್ ಮುಂತಾದವರು ಭಾಗವಹಿಸಿದ್ದರು. ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಕಾರ್ಯಪ್ಪ ಅವರು ಜನಿಸಿದ ಮನೆಯ ಸುತ್ತಮುತ್ತ ಸ್ವಚ್ಚಗೊಳಿಸಿ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.