ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನ ಪಲ್ಟಿ
ಸೋಮವಾರಪೇಟೆ: ತಾಲ್ಲೂಕಿನ ಶನಿವಾರಸಂತೆ ರಸ್ತೆಯಲ್ಲಿನ ಕಾಗಡಿಕಟ್ಟೆ ಬಳಿ ಇಂದು ಬೆಳಗ್ಗಿನ ಜಾವ 2:30 ಗಂಟೆ ಸುಮಾರಿಗೆ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಸಂಖ್ಯೆ KA13-B 3078 ರಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾಗ ಆರೋಪಿ ಚಾಲಕನ ಹತೋಟಿ ತಪ್ಪಿ ವಾಹನವು ಪಲ್ಟಿಯಾಗಿದ್ದು ವಾಹನದಲ್ಲಿದ್ದ 3 ಗೋವುಗಳು ಗಾಯಗೊಂಡಿವೆ. ವಾಹನದಲ್ಲಿದ್ದ ಗಾಯಗೊಂಡಿರುವ ಇಬ್ಬರೂ ಆರೋಪಿಗಳನ್ನು ತಡರಾತ್ರಿಯೇ ಆರೋಪಿಗಳ ಕಡೆಯವರು ಎನ್ನಲಾದವರು ಇನ್ನೋವ ಕಾರ್ ನಲ್ಲಿ ಬೇರೆಡೆಗೆ ಸಾಗಿಸಿರುವುದಾಗಿ ಹೇಳಲಾಗಿದೆ.
ರಾತ್ರಿ ಗೋವುಗಳ ಸಾಗಾಟಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ.ಮಾತ್ರವಲ್ಲದೇ ಕೊಡಗು ಜಿಲ್ಲೆಯಲ್ಲಿ ಗೋಹತ್ಯೆ ಗೋಮಾಂಸ ಮಾರಾಟಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲ. ಗೋವುಗಳನ್ನು ಪೂಜಿಸುವ ಹಿಂದೂಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುವುದಕ್ಕಾಗಿಯೆ ಮತಾಂಧರು ಗೋಹತ್ಯೆ ನಡೆಸುತ್ತಿದ್ದಾರೆ. ಕೊಡಗಿನಲ್ಲಿ ಪದೇ ಪದೇ ಗೋವುಕಳ್ಳತನ, ಅಕ್ರಮ ಗೋಸಾಗಾಟ, ಗೋಮಾಂಸ ಮಾರಾಟ ನಿರಂತರವಾಗಿ ನಡೆಯುತ್ತಿದ್ದು ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಲ್ಲಿ ಈ ಕಾನೂನು ಬಾಹಿರ ಚಟುವಟಿಕೆ ಮಟ್ಟ ಹಾಕುವುದು ಕಷ್ಟವೇನಲ್ಲ.
ಇದೀಗ ಅಪಘಾತದ ಮೂಲಕ ಗಮನಕ್ಕೆ ಬಂದಿರುವ ಪ್ರಕರಣವನ್ನೂ ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮಾತ್ರವಲ್ಲದೇ ಕೊಡಗಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಟ ಗೋಹತ್ಯೆ ಗೋಮಾಂಸ ಮಾರಾಟದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಈ ಎಲ್ಲ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ಖಂಡಿಸಿ ಜಿಲ್ಲೆಯ ಸಮಸ್ತ ಸಂಘಟಿತ ಹಿಂದೂ ಸಮಾಜದ ನೇತೃತ್ವದಲ್ಲಿ ಹಿಂದು ಜಾಗರಣ ವೇದಿಕೆ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಬೋಜೆಗೌಡ ಎಚ್ಚ ರಿಸಿದ್ದಾರೆ.