ಸೋಮವಾರಪೇಟೆಯಲ್ಲಿ ಬೃಹತ್ ಇಫ್ತಾರ್ ಕೂಟ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಅವರಿಂದ‌ 96ಲಕ್ಷ ಅನುದಾನ

ಸೋಮವಾರಪೇಟೆಯಲ್ಲಿ ಬೃಹತ್ ಇಫ್ತಾರ್ ಕೂಟ:  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಶಾಸಕ ಡಾ.ಮಂತರ್ ಗೌಡ ಅವರಿಂದ‌ 96ಲಕ್ಷ ಅನುದಾನ

ಸೋಮವಾರಪೇಟೆ, ಮಾ.15: ಪವಿತ್ರ ರಂಜಾನ್ ತಿಂಗಳ ಅಂಗವಾಗಿ ಸೋಮವಾರಪೇಟೆಯ ಜಲಾಲಿಯಾ ಜುಮಾ ಮಸೀದಿಯ ವತಿಯಿಂದ ಭವ್ಯ ಇಫ್ತಾರ್ ಕೂಟ ಆಯೋಜಿಸಲಾಯಿತು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್ ಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಉಪವಾಸದಲ್ಲಿದ್ದ ಭಕ್ತರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗಿಯಾದರು.

ಇದೇ ವೇಳೆ ಮಸೀದಿಗೆ ಶಾಸಕರ ನಿಧಿ ಹಾಗೂ ಸರ್ಕಾರದಿಂದ ಮಂಜೂರಾದ 96 ಲಕ್ಷ ರೂ ಅನುದಾನದ ನಾಮಫಲಕವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ರಂಜಾನ್ ತಿಂಗಳು ಮಾನವೀಯತೆ, ಸಹಾನುಭೂತಿ ಮತ್ತು ಸಹೋದರತ್ವದ ಸಂಕೇತವಾಗಿದ್ದು, ಎಲ್ಲ ಧರ್ಮದ ಜನರು ಪರಸ್ಪರ ಗೌರವದಿಂದ ಬದುಕುವುದು ನಮ್ಮ ಸಂಸ್ಕೃತಿ ಎಂದು ಹೇಳಿದರು. ಬಡವರು ಹಸಿದಿರಬಾರದು ಎಂಬ ಸಂದೇಶ ನೀಡಿದ ಅವರು, ರಂಜಾನ್ ಹಬ್ಬವನ್ನು ಎಲ್ಲರೂ ಸಂತೋಷದಿಂದ ಆಚರಿಸಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಶಾಲನಗರ, ಸೋಮವಾರಪೇಟೆ, ವಿರಾಜಪೇಟೆ, ಸಿದ್ದಾಪುರ ಹಾಗೂ ನಲ್ಲಿಹುದಿಕೇರಿ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎ. ಆದಮ್, ಉಪಾಧ್ಯಕ್ಷರು ಅಶ್ರಫ್ ಎಂ.ಇ ಹಾಗೂ ಸುಲೇಮಾನ್ ಹಾಜಿ, ಪ್ರಧಾನ ಕಾರ್ಯದರ್ಶಿ ಆಸಿಫ್ ಎಸ್.ಎ, ಕಾರ್ಯದರ್ಶಿ ಕಬೀರ್ ಕೆ.ಎಚ್, ಖಜಾಂಜಿ ಸಂಶುದ್ದೀನ್ ಸೇರಿದಂತೆ ಸದಸ್ಯರಾದ ಮಹಮ್ಮದ್ ಎಂ.ಬಿ, ಮಹಮ್ಮದ್ ಕೆ.ಐ, ರೌಫ್, ಇಸಾಕ್ ಕೆ.ಎಂ ಹಾಗೂ ಸಲಾತ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಇಫ್ತಾರ್ ಕೂಟದ ಅಂಗವಾಗಿ ನೆರೆದಿದ್ದ ಭಕ್ತರು ಹಾಗೂ ಸಾರ್ವಜನಿಕರೆಲ್ಲರಿಗೂ ಅನ್ನದಾನವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಇದರಿಗಾಗಿ ಜಲಾಲಿಯಾ ಮಸೀದಿಯ ಎಲ್ಲಾ ಸಮಿತಿ ಸದಸ್ಯರ ಪರಿಶ್ರಮವನ್ನು ನಾಗರಿಕರು ಶ್ಲಾಘಿಸಿ ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮವನ್ನು ಮಸೀದಿ ಪದಾಧಿಕಾರಿಗಳು ಸಮರ್ಪಕವಾಗಿ ಆಯೋಜಿಸಿದ್ದು, ಧಾರ್ಮಿಕ ಸೌಹಾರ್ದ ಮತ್ತು ಸಾಮಾಜಿಕ ಏಕತೆಯ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು.