ಎಮ್ಮೆಮಾಡುವಿನಲ್ಲಿ ಉರೂಸ್ ಕಾರ್ಯಕ್ರಮದ ವೇಳೆ ಸುರಿದ ಧಾರಾಕಾರ ಮಳೆ; ಗದ್ದೆಯ ಕೆಸರಲ್ಲಿ ಸಿಲುಕಿದ ಭಕ್ತಾಧಿಗಳ ವಾಹನಗಳು
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಎಮ್ಮೆಮಾಡುವಿನಲ್ಲಿ ಸೋಮವಾರ ಮಧ್ಯಾಹ್ನದ ನಂತರ ಧಾರಾಕಾರ ಮಳೆ ಸುರಿದಿದ್ದು ಉರೂಸ್ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆ ರಾಜ್ಯಗಳಿಂದ ಬಂದ ಭಕ್ತಾದಿಗಳು ಕೆಲಕಾಲ ನಡೆದಾಡಲು ಸಮಸ್ಯೆ ಎದುರಿಸುವಂತಾಯಿತು.
ಎಮ್ಮೆಮಾಡು ಗ್ರಾಮದಲ್ಲಿ ಒಂದುವರೆ ಇಂಚಿಗೂ ಅಧಿಕ ಮಳೆ ಸುರಿದಿದ್ದು ಹೊರ ರಾಜ್ಯ ಜಿಲ್ಲೆಗಳಿಂದ ಬಂದ ಭಕ್ತಾಧಿಗಳ ವಾಹನಗಳಿಗೆ ಗದ್ದೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಧಾರಾಕಾರ ಸುರಿದ ಮಳೆಯಿಂದ ಗದ್ದೆ ಕೆಸರು ಮಯವಾಗಿ ನಿಲ್ಲಿಸಿದ್ದ ವಾಹನಗಳನ್ನು ಹೊರತೆಗೆಯಲು ಚಾಲಕರು ಪರದಾಡಿದ ಘಟನೆ ನಡೆಯಿತು.
ಇದನ್ನು ಗಮನಿಸಿದ ಸ್ಥಳಿಯ ಯುವಕರತಂಡ ಗದ್ದೆಯ ಕೆಸರಿನಲ್ಲಿ ಸಿಲುಕಿದ್ದ ಹಲವಾರು ವಾಹನಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಯಿತು.ನಾಪೋಕ್ಲು ಪಟ್ಟಣ ವ್ಯಾಪ್ತಿಯಲ್ಲೂ ಕೂಡ ಸೋಮವಾರದಂದು ಧಾರಾಕಾರವಾಗಿ ಗಾಳಿ ಮಳೆ ಸುರಿದು ಜನರು ಸಮಸ್ಯೆ ಎದುರಿಸುವಂತಾಯಿತು.