ಡಿ.5ರಿಂದ ಹುದವಿ ಬಿರುದು ಪ್ರದಾನ ಕಾರ್ಯಕ್ರಮ

ಡಿ.5ರಿಂದ ಹುದವಿ ಬಿರುದು ಪ್ರದಾನ ಕಾರ್ಯಕ್ರಮ

ಮಡಿಕೇರಿ: ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪುತ್ತೂರು ತಾಲೂಕಿನ ಮಾಡನ್ನೂರ್‌ನಲ್ಲಿರುವ ನೂರುಲ್ ಹುದಾ ಶಿಕ್ಷಣ ಸಂಸ್ಥೆ ದಶಮಾನೋತ್ಸವದ ಸಂಭ್ರಮದಲ್ಲಿದ್ದು, ೧೦ನೇ ವಾರ್ಷಿಕೋತ್ಸವದ ಅಂಗವಾಗಿ ಡಿ.೫, ೬ ಮತ್ತು ೭ ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹುದವಿ ಬಿರುದು ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಶಿಕ್ಷಣ ಸಂಸ್ಥೆಯ ಸದಸ್ಯ ಸಿ.ಎಂ.ಹಮೀದ್ ಮೌಲಾವಿ ತಿಳಿಸಿದರು.

ಸಂಸ್ಥೆಯ ಆಡಳಿತದಲ್ಲಿ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಎಕ್ಸಿಕ್ಯೂಟಿವ್ ಸಮಿತಿ, ಒಂಭತ್ತು ವಲಯ ಸಮಿತಿಗಳು ಹಾಗೂ ಯುಎಇ, ಕೆಎಸ್‌ಎ, ಕತಾರ್ ಮೊದಲಾದ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸಮಿತಿಗಳು ಅಸ್ತಿತ್ವದಲ್ಲಿವೆ. ಈ ಸಂಸ್ಥೆಯ ೧೦ನೇ ವಾರ್ಷಿಕೋತ್ಸವದ ಅಂಗವಾಗಿ ಪುತ್ತೂರಿನ ಮಾಡನ್ನೂರ್‌ನಲ್ಲಿ ಸುಮಾರು ೩೫ ವಿದ್ಯಾರ್ಥಿಗಳಿಗೆ ಹುದವಿ ಬಿರುದು ಪ್ರದಾನ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಡಿ.೫ ರಂದು ಸಂಜೆ ೪ ಗಂಟೆಗೆ ಅಸ್ಸಯ್ಯಿದ್ ಅಹ್ಮದ್ ಪೊಕೋಯ ತಂಗಳ್ ಅವರ ನೇತೃತ್ವದಲ್ಲಿ ಸಮಸ್ತದ ನೂರು ಧ್ವಜಗಳನ್ನು ಹಾರಿಸಿ ದಶಮಾನೋತ್ಸವ ಧ್ವಜಾರೋಹಣ ನೆರವೇರಿಸಲಾಗುವುದು. ೪.೩೦ ಗಂಟೆಗೆ ಉದ್ಘಾಟನಾ ಮಹಾಸಮ್ಮೇಳನ ನಡೆಯಲಿದ್ದು, ಅತಿಥಿಗಳಾಗಿ ಪಾಣಕ್ಕಾಡ್ ಮುನವ್ವರ್ ಅಲಿ ಶಿಹಾಬ್ ತಂಗಳ್, ಕರ್ನಾಟಕ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಸೈಯ್ಯಿದ್ ಝೈನುಲ್ ಆಬಿದೀನ್ ತಂಗಳ್ ಕುನ್ನಂಗೈ, ಸಮಸ್ತ ಕೇರಳ ಜಂಇಯ್ಯುತ್ತುಲ್ ಉಲಮಾ ಮುಶಾವರ ಸದಸ್ಯ ಶೈಖುನಾ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ಉಸ್ತಾದ್ ಉಸ್ಮಾನ್ ಫೈಝಿ ತೋಡಾರ್ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ರಾತ್ರಿ ಅಂತರಾಷ್ಟ್ರೀಯ ಖ್ಯಾತಿಯ ಬಹು ಸಿಂಸಾರುಲ್ ಹಕ್ ಹುದವಿ ಅಬುಧಾಬಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು. ಡಿ.೬ ರಂದು ಬೆಳಿಗ್ಗೆ ೯ ಗಂಟೆಗೆ ಕರ್ಮಶಾಸ್ತ್ರ ಸೆಮಿನಾರ್ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ೨ ಗಂಟೆಗೆ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಶರೀಫ್ ಕಾವು ಅವರ ಅಧ್ಯಕ್ಷತೆಯಲ್ಲಿ ಗಲ್ಫ್ ಮೀಟ್, ಸಂಜೆ ೪.೩೦ ಗಂಟೆಗೆ ಕರ್ನಾಟಕದ ಪ್ರಸಿದ್ಧ ದಫ್ ತಂಡಗಳಿಂದ ದಫ್ ಪ್ರದರ್ಶನ, ೬.೩೦ ಗಂಟೆಗೆ ಅಂತರಾಷ್ಟ್ರೀಯ ಇಶ್ಕ್ ಮಜ್ಲಿಸ್ ನಡೆಯಲಿದೆ.

 ರಾತ್ರಿ ೮.೩೦ ಗಂಟೆಗೆ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಮಹಾಸಂಗಮ ನಡೆಯಲಿದ್ದು, ಅಲವಿ ಫೈಝಿ ಕುಳಪ್ಪರಂಬ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸೈಯ್ಯಿದ್ ಅಬ್ದುಲ್ ರಶೀದ್ ಅಲಿ ಶಿಹಾಬ್ ತಂಗಳ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ದಶಮಾನೋತ್ಸವ ಸ್ವಾಗತ ಸಮಿತಿಯ ಸಂಚಾಲಕ ಕೆ.ಎ.ಯಾಕುಬ್ ಅವರು ಮಾತನಾಡಿ, ಡಿ.೭ ರಂದು ಬೆಳಿಗ್ಗೆ ೯ ಗಂಟೆಗೆ ಯುವಜನ ಸಮ್ಮೇಳನ ನಡೆಯಲಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಭಾಷಕರಾಗಿ ಬೆಂಗಳೂರಿನ ಪಾಲ್ಕನ್ ಶಿಕ್ಷಣ ಸಂಸ್ಥೆಯ ಡಾ.ಸುಭಾನ್, ವಕೀಲ ಮುಹಮ್ಮದ್ ಫೈಝಿ ಓನಂಹಳ್ಳಿ, ಮುಜ್ತಬಾ ಫೈಝಿ ಆನಕ್ಕರ ಭಾಗವಹಿಸಲಿದ್ದಾರೆ. ಸಂಜೆ ೪.೩೦ ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಪದವಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಸೈಯ್ಯಿದುಲ್ ಉಲಮಾ ಸೈಯ್ಯಿದ್ ಮುಹಮ್ಮದ್ ಜಿಫ್ತಿ ತಂಗಳ್ ಉದ್ಘಾಟಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಂಸ್ಥೆಯ ಸದಸ್ಯ ಪಿ.ಎಂ.ಅಬ್ದುಲ್ಲ ಹಾಗೂ ಸ್ವಾಗತ ಸಮಿತಿಯ ಸದಸ್ಯ ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು.