ವಿರೋಧ ಪಕ್ಷವಾಗಿ ಕೊಡಗು ಬಿಜೆಪಿ ನಡೆದುಕೊಳ್ಳುವ ಬದಲಿಗೆ ಈಗ ಜೋಕರ್ ಗಳಾಗಿ ವರ್ತಿಸುತ್ತಿದ್ದಾರೆ; ಕೊಡಗು ಕಾಂಗ್ರೆಸ್

ವಿರೋಧ ಪಕ್ಷವಾಗಿ ಕೊಡಗು ಬಿಜೆಪಿ ನಡೆದುಕೊಳ್ಳುವ ಬದಲಿಗೆ ಈಗ ಜೋಕರ್ ಗಳಾಗಿ ವರ್ತಿಸುತ್ತಿದ್ದಾರೆ; ಕೊಡಗು ಕಾಂಗ್ರೆಸ್
ತೆನ್ನಿರಾ ಮೈನಾ

ಮಡಿಕೇರಿ; ಇತ್ತೀಚಿನ ದಿನಗಳಲ್ಲಿ ಕೊಡಗು ಬಿಜೆಪಿ ಅತ್ಯಂತ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಆರೋಪಿಸಿದ್ದಾರೆ.

 ವನ್ಯಜೀವಿ ಹಾವಳಿ ಬಗ್ಗೆ ವಿರಾಜಪೇಟೆಯಲ್ಲಿ ಕೊಡಗು ಬಿಜೆಪಿ ಯವರು ಪ್ರತಿಭಟನೆ ನಡೆಸಿದ ಸಂಧರ್ಭದಲ್ಲಿ ಆನೆಗಳನ್ನು ಶಾಸಕ ಎ.ಎಸ್.ಪೊನ್ನಣ್ಣ ನವರು ಛೂ ಬಿಟ್ಟು ಜನರ ಕೊಲೆ ಮಾಡಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆನೆಗಳನ್ನು ಛೂ ಬಿಟ್ಟು ಹಿಂದುಗಳನ್ನು ಕೊಲೆ ಮಾಡಿಸುತ್ತಿದ್ದಾರೆ ಎಂದು ಮತಿಭ್ರಂಶ ಘೋಷಣೆ ಕೂಗಿದ್ದಾರೆ. ಈ ಘೋಷಣೆಯ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಪ್ರಜ್ಞಾವಂತರ ನಾಡು ಎಂದು ಕರೆಸಿಕೊಂಡಿರುವ ಕೊಡಗಿನ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ವಿರೋಧ ಪಕ್ಷವಾಗಿ ಕೊಡಗು ಬಿಜೆಪಿ ನಡೆದುಕೊಳ್ಳುವ ಬದಲಿಗೆ ಈಗ ಜೋಕರ್ ಗಳಾಗಿ ವರ್ತಿಸುತ್ತಿದ್ದಾರೆ. ಅವರ ಜೊತೆ ಸೇರಿ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯನವರು ಕೂಡಾ ತಮ್ಮ ನೈತಿಕತೆಯನ್ನು ಕಳೆದುಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರು ನಾ ಭೂತೋ ನಾ ಭವಿಷ್ಯತಿ ಎಂಬ ರೀತಿಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಿದ್ದು ಇದರಿಂದ ಕೊಡಗು ಬಿಜೆಪಿಗರು ಮತ್ತು ಮಾಜಿ ಶಾಸಕದ್ವಯರು ಹತಾಶರಾಗಿ ಜನರ ದಿಕ್ಕು ತಪ್ಪಿಸುವ ಕೆಲಸಕ್ಕೆ ಕೈ ಹಾಕಿ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ತೆನ್ನಿರ ಮೈನಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗ ಪೊನ್ನಣ್ಣ ನವರು ಆನೆಗಳನ್ನು ಛೂ ಬಿಟ್ಟು ಜನರನ್ನು ಕೊಲ್ಲಿಸಿದ್ದಾರೆ ಎಂದು ಹೇಳುವವರು ಕಳೆದ 20 ವರ್ಷಗಳಲ್ಲಿ ಗಳಲ್ಲಿ ಆದ ಪ್ರಾಣ ಹಾನಿಗಳನ್ನು ಕೆ.ಜಿ.ಬೋಪಯ್ಯ ನವರು ಮತ್ತು ಅಪ್ಪಚ್ಚು ನವರು ಆನೆಗಳನ್ನು ಛೂ ಬಿಟ್ಟು ಮಾಡಿಸಿದರು ಎಂದು ಒಪ್ಪಿಕೊಳ್ಳುವರೇ ಎಂದು ತೆನ್ನಿರ ಮೈನಾ ಮಾರ್ಮಿಕವಾಗಿ ಪ್ರಶ್ನೆ ಮಾಡಿದ್ದಾರೆ.