ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ಕನಕದಾಸರ ಜಯಂತಿ: ಕನಕದಾಸರ ಕೀರ್ತನೆಗಳು ಸಮಾಜಕ್ಕೆ ಸ್ಪೂರ್ತಿ: ಗೋಪಾಲಕೃಷ್ಣ
ಕುಶಾಲನಗರ: ದಾಸಶ್ರೇಷ್ಠರೆಂದೇ ಕರೆಯಲಾಗುವ ಭಕ್ತ ಕನಕದಾಸರು ಓರ್ವ ಮಹಾನ್ ಹರಿದಾಸ ಸಂತ, ತತ್ವಜ್ಞಾನಿ ಹಾಗೂ ಕೀರ್ತನಾಗಾರರಾಗಿದ್ದರು. ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿದೆ. ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಕೆ.ಗೋಪಾಲಕೃಷ್ಣ ಹೇಳಿದರು.
ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಕನ್ನಡ ಭಾಷಾ ಸಂಘದ ವತಿಯಿಂದ ಶಾಲೆಯ ಎನ್ನೆಸ್ಸೆಸ್ ಮತ್ತು ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಘಟಕದ ಸಹಯೋಗದೊಂದಿಗೆ ಶನಿವಾರ ( ನ.8 ರಂದು ) ಏರ್ಪಡಿಸಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಜೀವನ ಮತ್ತು ಅವರ ವಿಚಾರಧಾರೆಗಳ ಕುರಿತು ಮಾತನಾಡಿದರು.
ಭಕ್ತ ಕನಕದಾಸರು ಕರ್ನಾಟಕದಲ್ಲಿ ಭಕ್ತಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರಗಳಿಗೆ ವಹಿಸಿದ್ದಾರೆ. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಜರ ಬೋಧನೆಗಳಿಂದ ಪ್ರೇರಿತರಾದ ಕನಕದಾಸರು ತಮ್ಮ ಎಲ್ಲಾ ಭೌತಿಕ ಅನ್ವೇಷಣೆಗಳನ್ನು ತೊರೆದು ಭಕ್ತಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಗೋಪಾಲಕೃಷ್ಣ ಬಣ್ಣಿಸಿದರು.
ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಸಂತ ಶ್ರೇಷ್ಠ, ತತ್ವಜ್ಞಾನಿಯಾದ ಭಕ್ತ ಕನಕದಾಸರು ಕೇವಲ ಒಂದು ಜಾತಿಗೇ ಸೀಮಿತವಾದ ಭಕ್ತರಲ್ಲ. ಅವರು ಎಲ್ಲಾ ಜಾತಿಗಳಿಗೆ ಬೇಕಾದವರು ಎಂದರು. ಕನಕದಾಸರ ಕೀರ್ತನೆಗಳು ಎಂದು ಕರೆಯಲ್ಪಡುವ ಅವರ ಕೀರ್ತನೆಗಳು, ಭಕ್ತಿ ಸಂಯೋಜನೆಗಳು ಸಮಾಜವನ್ನು ಪ್ರೇರೇಪಿಸುತ್ತಿವೆ ಮತ್ತು ಉನ್ನತಿಗೊಳಿಸುತ್ತಿವೆ ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಶಿಕ್ಷಕರಾದ ಬಿ.ಡಿ.ರಮ್ಯ, ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿ ಕನಕದಾಸರ ಜೀವನ ಕುರಿತು ಭಾಷಣ ಮಾಡಿದರೆ,ವಿದ್ಯಾರ್ಥಿನಿ ಕೆ.ಐ.ನಿಹಾನ ದಾಸರ ಕೀರ್ತನೆಗಳನ್ನು ಹಾಡಿದರು.
