ಕೊಡವರ ಐತಿಹಾಸಿಕ ಪರಂಪರೆ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಜೀವಂತವಾಗಿರಿಸುವಲ್ಲಿ ಕೊಡವ ಸಮಾಜಗಳ ವಿಶೇಷ ಪಾತ್ರ: ಶಾಸಕ ಎ.ಎಸ್ ಪೊನ್ನಣ್ಣ ಅಭಿಪ್ರಾಯ

ಕೊಡವರ ಐತಿಹಾಸಿಕ ಪರಂಪರೆ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಜೀವಂತವಾಗಿರಿಸುವಲ್ಲಿ ಕೊಡವ ಸಮಾಜಗಳ ವಿಶೇಷ ಪಾತ್ರ: ಶಾಸಕ ಎ.ಎಸ್ ಪೊನ್ನಣ್ಣ ಅಭಿಪ್ರಾಯ

ಕುಶಾಲನಗರ: ತಾಲೂಕು ಕೊಡವ ಸಮಾಜದವರು ಆಯೋಜಿಸಿದ ಕೈಲ್ ಪೊಳ್ದ್ ಸಂತೋಷಕೂಟ ಕಾರ್ಯಕ್ರಮದಲ್ಲಿ, ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

 ಕುಶಾಲನಗರದ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಸಾಂಸ್ಕೃತಿಕ ಹಾಗೂ ವಿವಿಧ ಸಾಂಪ್ರದಾಯಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಶಾಸಕರು, ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕೊಡಗಿನ ಹಾಗೂ ವಿಶೇಷವಾಗಿ ಕೊಡವರ ಐತಿಹಾಸಿಕ ಪರಂಪರೆ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಜೀವಂತವಾಗಿರಿಸುವಲ್ಲಿ ಕೊಡವ ಸಮಾಜಗಳು ವಿಶೇಷ ಪಾತ್ರ ನಿಭಾಯಿಸುತ್ತಾ ಬಂದಿವೆ. ಸಮಾಜದ ಬಾಂಧವರಲ್ಲಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ನಮ್ಮ ಸಂಸ್ಕೃತಿ ಹಾಗೂ ಆಚರಣೆಗಳನ್ನು ಅನುಸರಿಸುತ್ತಾ ಬೆಳೆಸುವ ಗುರುತರ ಜವಾಬ್ದಾರಿಯನ್ನು ಕೊಡವ ಸಮಾಜದವರು ವಹಿಸಿಕೊಳ್ಳಬೇಕು.

ಒಂದು ಸಮಾಜ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲು ಅದರ ಸಂಸ್ಕೃತಿ, ಭಾಷೆ ಹಾಗೂ ಆಚರಣೆಗಳನ್ನು ಪೋಷಿಸಿ ಬೆಳೆಸುವುದು ಅತ್ಯಂತ ಅವಶ್ಯಕ ವಿಷಯವಾಗಿದೆ. ಆಧುನಿಕ ಜಗತ್ತಿಗೆ ಹೊಂದಿಕೊಳ್ಳುತ್ತಾ ನಮ್ಮ ಆಚರಣೆಗಳನ್ನು ಜಗತ್ತಿಗೆ ಪರಿಚಯಿಸುವುದರಲ್ಲಿ ನಾವು ಇಂದಿಗೂ ಹಿಂದೆ ಬೀಳಬಾರದು ಎಂದು ಕರೆ ನೀಡಿದರು.

ಮುಂದುವರೆದು ಮಾತನಾಡಿದ ಶಾಸಕರು, ತಾನು ಹಾಗೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ 'ಕೊಡಗರು' ಎಂದು ಸಂಬೋಧಿಸಲ್ಪಡುತ್ತಿದ್ದ ಶಬ್ದವನ್ನು "ಕೊಡವ" ಎಂಬುದಾಗಿ ತಿದ್ದುಪಡಿ ಮಾಡಿಸಿರುವುದು, ಕೋವಿ ಹಕ್ಕಿನ ಬಗ್ಗೆ ನಿರ್ದಿಷ್ಟವಾದ ನಿರ್ಧಾರ ಕೈಗೊಳ್ಳಲು ಕ್ರಮ ಕೈಗೊಂಡಿರುವುದು, ನಮ್ಮನ್ನು ದಶಕಗಳಿಂದ ಕಾಡುತ್ತಿರುವ ಜಮ್ಮಾ ಬಾಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ಮಾತ್ರವಲ್ಲದೆ, ಕೊಡವ ಜನಾಂಗದವರು ಹಾಗೂ ಈ ನಾಡಿನ ಎಲ್ಲಾ ಜನಾಂಗದವರ ಅಭಿವೃದ್ಧಿಗೆ ವಿಶೇಷ ಅನುದಾನ ಗಳನ್ನು ತಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಜನರು ನನಗೆ ನೀಡಿದ ಅಧಿಕಾರದ ಸದ್ಬಳಕೆಗಾಗಿ ಹಾಗೂ ನಾಡಿನ ಏಳಿಗೆಗಾಗಿ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಕೊಡವ ಸಮಾಜ ಅಧ್ಯಕ್ಷರು ಶ್ರೀ ವಾಂಚೀರ ಮನು ನಂಜುಂಡ, ಕುಶಾಲನಗರ ಕೊಡವಾಮೆರ ಕೊಂಡಾಟ ಕೊರವುಕಾರರು ಹಾಗೂ ಸಂಪಾದಕರು ನಡುಬಾಡೆ ಇ-ನ್ಯೂಸ್ ಶ್ರೀ ಚಾಮೆರ ದಿನೇಶ್ ಬೆಳ್ಯಪ್ಪ, ಕೊಡವ ಸಮಾಜದ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.