ಶ್ರೀ ದಕ್ಷಿಣಾ ಮಾರಿಯಮ್ಮ ದೇವಸ್ಥಾನದಲ್ಲಿ ಕುಂಭಾಭಿಷೇಕಕ್ಕೆ ಚಾಲನೆ
ವಿರಾಜಪೇಟೆ:ವಿರಾಜಪೇಟೆಯ ಮುಕುಟಮಣಿಯಂತೆ ಇರುವ ಶ್ರೀ ದಕ್ಷಿಣಾ ಮಾರಿಯಮ್ಮ ದೇವಸ್ಥಾನದಲ್ಲಿ ಮಹಾ ಕುಂಭಾಭಿಷೇಕದ ಪೂಜಾ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಗಿದೆ. ಶ್ರೀ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್, ಸಾಧುಶೆಟ್ಟಿ 24 ಮನೆ ತೆಲುಗು ಶೆಟ್ಟಿ ಸಂಘ, ತೆಲುಗು ಶೆಟ್ಟರ ಬೀದಿ ವಿರಾಜಪೇಟೆ ಇವರ ವತಿಯಿಂದ ಶ್ರೀ ದಕ್ಷಿಣ ಮಾರಿಯಮ್ಮ ದೇವಿಯ ಮಹಾ ಕುಂಭಾಭಿಷೇಕದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಗಣಪತಿ ಪೂಜೆ ಮಾಡುವ ಮೂಲಕ ಕುಂಭಾಭಿಷೇಕದ ಕೈಂಕರ್ಯಗಳಿಗೆ ಚಾಲನೆ ನೀಡಲಾಯಿತು.
ಬಳಿಕ ವಾಸ್ತುಶಾಂತಿ, ಮೃತ್ ಸಂಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ಪ್ರಥಮ ಕಾಲಯಾ ಪೂಜೆ, ಪ್ರಥಮ ಕಾಲ ಯಾಗಶಾಲಾ ಪ್ರವೇಶ, ಪೂರ್ಣಾಹುತಿ, ಮಹಾ ಮಂಗಳಾರತಿ ನಡೆದು ನೆರೆದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಎರಡನೆ ದಿನ ಬೆಳಿಗ್ಗೆಯಿಂದಲೇ ವಿಘ್ನೇಶ್ವರ ಪೂಜೆ, ಶಿವಸೂರ್ಯ ಪೂಜೆ, ವಿಶೇಷ ಸಂಧಿ, ಎರಡನೇ ಕಾಲ ಯಾಗಪೂಜೆ, ಮೂಲ ಮಂತ್ರ, ಅಸ್ತ್ರಮಂತ್ರ ಹೋಮ, ದ್ರವ್ಯಾಹುತಿ, ಮಹಾಮಂಗಳಾರತಿ ನಡೆದು ಸಂಜೆ ವಿನಾಯಕ ಪೂಜೆ, ಸೋಮಕುಂಭ ಪೂಜೆ, ದ್ರವ್ಯಾಹುತಿ, ಲಲಿತ ತ್ರಿಶದಿ ಪಾರಾಯಣ, ಮಹಾಪೂರ್ಣಾಹುತಿ, ಮಹಾ ಮಂಗಳಾರತಿ, ಯಂತ್ರ ಸ್ಥಾಪನೆ, ಅಷ್ಟಬಂಧನ ಪೂಜೆ, ಅನ್ನ ಸಂತರ್ಪಣೆ ನಡೆಯಿತು.
20 ರಂದು ಸೋಮವಾರ ಬೆಳಿಗ್ಗೆ 7.30 ಗಂಟೆಗೆ ಗಣಪತಿ ಪೂಜೆ, ಸೂರ್ಯಪೂಜೆ, ತತ್ವರ್ಚನ, ಶಡದ್ವ ಹೋಮ, ಬಿಂಬಶುದ್ಧಿ, ಸ್ಪರ್ಶಾಹುತಿ, ನಾಡಿಸಂದಾನ, ದ್ರವ್ಯಾಹುತಿ, ಪೂರ್ಣಾಹುತಿ, ಮಹಾಪೂರ್ಣಾಹುತಿ, ಯಾತ್ರಾದಾನ, ಮಹಾಮಂಗಳಾರತಿ, ಬೆಳಿಗ್ಗೆ 9:15 ರಿಂದ 10.15 ಗಂಟೆಗೆ ರೋಹಿಣಿ ನಕ್ಷತ್ರ ಮಿಥುನ ಲಗ್ನದಲ್ಲಿ ಗೋಪುರ ಕಲಶ ಕುಂಭಾಭಿಷೇಕ , ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಮಾರಿಯಮ್ಮ ದೇವಿಗೆ ಕುಂಭಾಭಿಷೇಕ, ತದನಂತರ ಗೋಪೂಜೆ, ಮಹಾಭಿಷೇಕ, ಅಲಂಕಾರ ಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.