ಕುಶಾಲನಗರ : ಡಿಸೆಂಬರ್ ನಲ್ಲಿ ಫಾತಿಮಾ ಕಾನ್ವೆಂಟ್ ಶಾಲೆಯ ಸುವರ್ಣ ಮಹೋತ್ಸವ ಆಚರಣೆಗೆ ತೀರ್ಮಾನ

ಕುಶಾಲನಗರ : ಡಿಸೆಂಬರ್ ನಲ್ಲಿ ಫಾತಿಮಾ ಕಾನ್ವೆಂಟ್ ಶಾಲೆಯ ಸುವರ್ಣ ಮಹೋತ್ಸವ ಆಚರಣೆಗೆ ತೀರ್ಮಾನ

ಕುಶಾಲನಗರ : ಪಟ್ಟಣದಲ್ಲಿ ಕಳೆದ ಐದು ದಶಕಗಳ ಹಿಂದೆ ಆರಂಭಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಭವಿಷ್ಯ ರೂಪಿಸಿದ ಫಾತಿಮಾ ಕಾನ್ವೆಂಟ್ ಶಾಲೆ ಇದೀಗ ಐವತ್ತು ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಶಾಲಾ ಸುವರ್ಣ ಮಹೋತ್ಸವ ಸಮಾರಂಭವನ್ನು ಡಿಸೆಂಬರ್ ನಲ್ಲಿ ಆಚರಿಸಲಾಯಿತು ತೀರ್ಮಾನಿಸಲಾಯಿತು.

 ಶಾಲೆಯ ಸಭಾಂಗಣದಲ್ಲಿ ಈಚೆಗೆ ನಡೆದ ಪೋಷಕರು, ಹಿರಿಯ ವಿಧ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿಯ ಸಭೆಯಲ್ಲಿ ಸುವರ್ಣ ಮಹೋತ್ಸವ ಆಚರಣೆ ಹಾಗೂ ವಿವಿಧ ಕಾರ್ಯಗಳನ್ನು ನಡೆಸುವ ಕುರಿತು ಚರ್ಚೆ ನಡೆಸಿ ರೂಪುರೇಷೆಯನ್ನು ಸಿದ್ಧಪಡಿಸಲಾಯಿತು.

 1976ನೇ ಇಸವಿಯಲ್ಲಿ ಆರಂಭಗೊಂಡ ಫಾತಿಮಾ ಕಾನ್ವೆಂಟ್ ಶಾಲೆಯು ವಿಶಿಷ್ಟ ಸ್ಥಾನವನ್ನು ಹೊಂದಿದ್ದು, 2026ನೇ ಇಸವಿಗೆ ಐವತ್ತು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ, ಹಳೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ಸುವರ್ಣ ಮಹೋತ್ಸವವನ್ಮು ಅದ್ದೂರಿಯಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಸುವರ್ಣ ಮಹೋತ್ಸವ ಅಂಗವಾಗಿ ಜೂನ್ ನಲ್ಲಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ, ಪಾಲಕರಿಗೆ, ಶಾಲೆಯ ಸಿಬ್ಬಂದಿಗಳಿಗೆ ಜಾಗೃತಿ ಸಭೆ.ಜುಲೈ ನಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ,ಆಗಸ್ಟ್ ನಲ್ಲಿ ಅಂತರ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ,ಸೆಪ್ಟೆಂಬರ್ ನಲ್ಲಿ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಕಾರ್ಯಕ್ರಮ, ಮ್ಯಾರಥಾನ್, ಯುವ ಜನಾಂಗದಲ್ಲಿ ಆಚಾರ ವಿಚಾರಗಳನ್ನು ತಿಳಿಸುವ ಪ್ರಯತ್ನವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸಾಂಪ್ರದಾಯಿಕ ದಿನವನ್ನು ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವುದು.

ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವ ಮತ್ತು ಹಿರಿಯ ವಿಧ್ಯಾರ್ಥಿಗಳ ಸಮ್ಮಿಲನ ಸಂಭ್ರಮ ವಿಶೇಷ ಕಾರ್ಯಕ್ರಮ ನಡೆಯಲಿದ್ದು,ಡಿಸೆಂಬರ್ ನಲ್ಲಿ ಸುವರ್ಣ ಮಹೋತ್ಸವ ಆಚರಣೆ ಸಮಾರೋಪ ಸಮಾರಂಭ ನಡೆಸಿ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಶಾಲೆಯ ಹಿರಿಯ ವಿಧ್ಯಾರ್ಥಿಗಳನ್ನು ಗೌರವಿಸುವುದು, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.

 ಸಮಾರಂಭಕ್ಕೆ ರಾಜ್ಯದ ಹಿರಿಯ ಅಧಿಕಾರಿಗಳು, ರಾಜಕಾರಣಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಆಗ್ನೆಸ್, ಶಾಲೆಯ ಪ್ರತಿನಿಧಿ ಸಿಸ್ಟರ್ ಪ್ಲೋರೆಟ್, ಆಡಳಿತಾಧಿಕಾರಿ ಸಿಸ್ಟರ್ ಅರ್ಪಿತಾ, ಸಹಾಯಕ ಪ್ರತಿನಿಧಿ ಸಿಸ್ಟರ್ ಸೋಫಿಯಾ ಮೇರಿ, ಪೋಷಕರ ಪ್ರತಿನಿಧಿ ಕೆ.ಎಸ್.ನಾಗೇಶ್ ಮತ್ತು ಆಶ್ರಪ್, ಹಿರಿಯ ವಿಧ್ಯಾರ್ಥಿಗಳ ಪ್ರತಿನಿಧಿ ಮಂಜುನಾಥ್ ಗುಂಡೂರಾವ್, ಅಪ್ಪಯ್ಯ, ನಾಗರಾಜ್, ಶಾಲೆಯ ಸಲಹಾ ಸಮಿತಿಯ ಡಾ.ರಾಮ ಭಟ್ ಮತ್ತು ಪಿಎಸ್ಐ ಗೀತಾ, ಶಿಕ್ಷಕರಾದ ಗಾಯತ್ರಿ, ಉಷಾ, ಸ್ಮಿತಾ, ದೀಪ್ತಿ ಪಾಲ್ಗೊಂಡಿದ್ದರು. ಶಿಕ್ಷಕರಾದ ಗಂಗಮ್ಮ ನಿರೂಪಿಸಿದರು. ಭಾರತಿದೇವಯ್ಯ ಸ್ವಾಗತಿಸಿದರು. ಸುನೀತಾ ವಂದಿಸಿದರು.