ಕುಶಾಲನಗರ : ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ; ಸಹಕಾರ ಸಂಘಗಳ ಮೂಲಕ ಆರ್ಥಿಕ ಬಲವರ್ಧನೆ ಸಾಧ್ಯ : ವಿ.ಪಿ.ಶಶಿಧರ್

ಕುಶಾಲನಗರ : ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ;  ಸಹಕಾರ ಸಂಘಗಳ ಮೂಲಕ ಆರ್ಥಿಕ ಬಲವರ್ಧನೆ ಸಾಧ್ಯ : ವಿ.ಪಿ.ಶಶಿಧರ್

ಕುಶಾಲನಗರ : ಸಹಕಾರ ಸಂಘಗಳ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಸಾಧ್ಯ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.

 ಇಲ್ಲಿಮ ಕಲಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ನೂತನ ಸಂಘಕ್ಕೆ ಉದ್ಘಾಟಿಸಿ ಅವರು ಮಾತನಾಡಿದರು.

 ರೈತರು, ವ್ಯಾಪಾರಿಗಳು ಹಾಗೂ ಉದ್ಯಮಿಗಳ ಪಾಲಿಗೆ ಸಹಕಾರ ಸಂಘಗಳು ವರದಾನವಾಗಿವೆ. ಹಿಂದೆ ಸಾಲ ಸೌಲಭ್ಯ ಪಡೆಯಲು ರಾಷ್ಟ್ರೀಕೃತ ಬ್ಯಾಂಕುಗಳನ್ನು ಅವಲಂಬಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಆದರೆ ಇತ್ತೀಚಿನ ದಶಕಗಳಲ್ಲಿ ಸಹಕಾರ ಕ್ಷೇತ್ರ ವಿಶಾಲವಾಗಿ ಬೆಳವಣಿಗೆ ಹೊಂದಿದ್ದು, ಸಣ್ಣ ಸಣ್ಣ ವರ್ತಕರು, ರೈತರು ಹಾಗೂ ಇನ್ನಿತರೆ ಸಾರ್ವಜನಿಕರು ಆರ್ಥಿಕ ಸ್ವಾವಲಂಬನೆಗೆ ಹೆಚ್ಚು ಅನುಕೂಲ ಉಂಟಾಗಿದೆ ಎಂದು ಶಶಿಧರ್ ಹೇಳಿದರು.

 ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಎನ್. ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತೆ ವಾಲ್ಮೀಕಿ ಪತ್ತಿನ ಸಹಕಾರ ಸಂಘವನ್ನು ಆರಂಭಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ವಾಲ್ಮೀಕಿ ನಾಯಕ ಜನಾಂಗ ಬಾಂಧವರಿದ್ದು ಸಹಕಾರ ಸಂಘದ ಸದಸ್ಯತ್ವವನ್ನು ಹೆಚ್ಚಾಗಿ ಹೊಂದುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.

 ಸಂಘದ ಮೂಲಕ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಸಕಾಲದಲ್ಲಿ ಮರುಪಾವತಿಸುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಅಶೋಕ್ ಸಲಹೆ ನೀಡಿದರು.ಇದೀಗ ಸಂಘದಲ್ಲಿ ಆರಂಭಿಕವಾಗಿ 400 ಮಂದಿ ಸದಸ್ಯರು ಸೇರ್ಪಡೆಯಾಗಿರುವ ಬಗ್ಗೆ ಅಶೋಕ್ ವಿವರಣೆ ನೀಡಿದರು.ಮೈಸೂರು ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜು ಟಿ. ಕಾಟೂರ ಮಾತನಾಡಿದರು.

  ಸಂಘದ ಉಪಾಧ್ಯಕ್ಷ ಪಿ.ಟಿ.ಸುರೇಶ್, ನಿರ್ದೇಶಕರಾದ ಎಂ.ಜಿ.ಕರಿಯಪ್ಪ, ಸಿದ್ದಲಿಂಗಯ್ಯ, ವೈ.ಟಿ.ಪರಮೇಶ್, ಚಂದನ ಕುಮಾರ್, ಆರ್. ಕೃಷ್ಣ, ಶ್ರೀನಿವಾಸ್ ಕುಮಾರ್, ಎಸ್.ಎಸ್. ಮಂಜುನಾಥ್, ಲಕ್ಷ್ಮಣ ನಾಯಕ, ಪಿ.ಪಿ. ಸುರೇಶ್, ನಾರಾಯಣಸ್ವಾಮಿ, ಮುತ್ತುರಾಜು, ಚೈತ್ರ, ಸೌಂದರ್ಯ, ಶೋಭಾ, ಮಮತಾ, ಕೂಡಿಗೆ ಡಯಟ್ ಉಪನ್ಯಾಸಕಿ ಬಿ.ಎನ್.ಪುಷ್ಪ ಪಾಲ್ಗೊಂಡಿದ್ದರು.

ಶಿಕ್ಷಕ ಬಿ.ಎನ್. ವಸಂತ ಕುಮಾರ್ ನಿರೂಪಿಸಿದರು.ಸಂಘದ ನಿರ್ದೇಶಕ ಚಂದನ ಕುಮಾರ್ ವಂದಿಸಿದರು. ಕಲಾವಿದ ವಿಜಯಕುಮಾರ್ ತಂಡ ಪ್ರಾರ್ಥಿಸಿದರು.

ಕುಶಾಲನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭವನ್ನು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಉದ್ಘಾಟಿಸಿದರು.