ಕುಶಾಲನಗರ:ಹನುಮ ಜಯಂತಿ ಹಿನ್ನೆಲೆ,ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಡಾ.ಮಂತರ್ ಗೌಡ

ಕುಶಾಲನಗರ:ಹನುಮ ಜಯಂತಿ ಹಿನ್ನೆಲೆ,ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ  ಡಾ.ಮಂತರ್ ಗೌಡ

ಕುಶಾಲನಗರ, ನ 12: ಕುಶಾಲನಗರದಲ್ಲಿ ಡಿಸೆಂಬರ್ 2 ರಂದು ನಡೆಯಲಿರುವ ಹನುಮ ಜಯಂತಿ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರ ಶಾಸಕರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವ ಭಾವಿ ಸಭೆ ಹೆಚ್.ಆರ್.ಪಿ.ಕಾಲನಿಯ ರಾಮಮಂದಿರ ಸಭಾಂಗಣದಲ್ಲಿ ನಡೆಯಿತು.

ದೇಶ ಮಂಟಪ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಹನುಮ ಜಯಂತಿ ಸುಸೂತ್ರವಾಗಿ ಆಚರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಹಕಾರ ಅತ್ಯಗತ್ಯ. ಆಯಾ ಗ್ರಾಮಗಳ ಮಂಟಪಗಳಿಗೆ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ತಮ್ಮ ಇಲಾಖೆ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ನಿವಾರಿಸಲು ಈ ಸಭೆ ಮೂಲಕ ಕೋರಲಾಗುತ್ತಿದೆ ಎಂದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕುಶಾಲನಗರದ ಹನುಮ ಜಯಂತಿಗೆ ಹೆಬ್ಬಾಲೆ, ಶಿರಂಗಾಲ ಕೂಡಿಗೆಣ ಗುಡ್ಡೆಹೊಸೂರು ಪಕ್ಕದ ಹಾಸನ, ಮೈಸೂರು ಭಾಗಗಳಿಂದಲೂ ಕೂಡ ಸಾವಿರಾರು ಜನರು ಆಗಮಿಸುತ್ತಾರೆ. ಯಾವುದೇ ರೀತಿಯ ಅಹಿತಕರ ಘಟನೆ, ದುರ್ಘಟನೆ ಸಂಭವಿಸದಂತೆ ಎಚ್ಚರವಹಿಸಿ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲು ಸೂಚನೆ ನೀಡಿದರು.

 ಮಂಟಪಗಳು ಆಗಮಿಸುವ ಮಾರ್ಗದಲ್ಲಿ ರಸ್ತೆ ಹೊಂಡ ಮುಚ್ಚುವುದು, ಅಡ್ಡಿಯಾಗಿರುವ ಮರಗಳ ರೆಂಬೆಗಳ ತೆರವು ಸೇರಿದಂತೆ ಪ್ರತಿ ಮಂಟಪಗಳಿಗೆ ಚೆಸ್ಕಾಂ ಮೂಲಕ ಇಬ್ಬರು ಸಿಬ್ಬಂದಿಗಳು ನಿಯೋಜಿಸುವಂತೆ ಶಾಸಕರು ಸೂಚಿಸಿದರು.

 ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ವಿವಿಧ ಗ್ರಾಮಗಳ ಸಮಿತಿ ಯವರು ಕೂಡ ಅಗತ್ಯ ಸಹಕಾರ ನೀಡಬೇಕಿದೆ ಎಂದರು. ಈ ಸಂದರ್ಭ ಕುಶಾಲನಗರ ದಂಡಾಧಿಕಾರಿ ಕಿರಣ್ ಡಿ ಗೌರಯ್ಯ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಡಿವೈಎಸ್ಪಿ ಚಂದ್ರಶೇಖರ್, ಚೆಸ್ಕಾಂ ಅಧಿಕಾರಿ ಮಂಜುನಾಥ್, ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಲೋಕೋಪಯೋಗಿ ‌ಇಲಾಖೆ ಅಭಿಯಂತರ ಅರ್ಬಾಜ್ ಅಹಮ್ಮದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್, ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಮತ್ತಿತರರು ಇದ್ದರು.