ಕುಶಾಲನಗರ : ಪರಿಸರ ಮಾಲಿನ್ಯ ತಡೆಗಟ್ಟಲು ಮೂಲದಲ್ಲಿಯೇ ತ್ಯಾಜ್ಯ ವಿಗಂಡಣೆ ಮಾಡಿ : ಶಾಸಕ ಮಂತರ್ ಗೌಡ
ಕುಶಾಲನಗರ : ಪ್ರತಿಯೊಬ್ಬ ತ್ಯಾಜ್ಯತ್ಪಾದಕರು ಘನ ತ್ಯಾಜ್ಯದಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಮತ್ತು ಕಡಿಮೆ ಮಾಡಲು ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಣೆ ಮಾಡಿ ಕಸದ ವಾಹನಕ್ಕೆ ಹಾಕಬೇಕು ಎಂದು ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಕರಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಹಸಿ ತ್ಯಾಜ್ಯ, ಒಣತ್ಯಾಜ್ಯ, ವಿಶೇಷ ಕಾಳಜಿ ತ್ಯಾಜ್ಯ ಮತ್ತು ಸ್ಯಾನಿಟರಿ ತಾಜ್ಯಗಳಿಗೆ ಪ್ರತ್ಯೇಕ ಡಬ್ಬಿಗಳನ್ನು ಇಟ್ಟುಕೊಂಡು ವಿಂಗಡಿಸಿ ತ್ಯಾಜ್ಯವನ್ನು ಪುರಸಭೆ ವಾಹನಕ್ಕೆ ಹಸ್ತಾಂತರಿಸಬೇಕು ಎಂದರು.
ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಮಾತನಾಡಿ, ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ಅಂದರೆ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ಮತ್ತು ವಿಶೇಷ ಕಾಳಜಿ ತ್ಯಾಜ್ಯ ಎಂದು ವಿಂಗಡಿಸಿ, ಸಂಗ್ರಹಿಸಿ ಮನೆ ಮನೆಗೆ ಬರುವ ಪುರಸಭೆ ಕಸ ಸಂಗ್ರಹ ವಾಹನಕ್ಕೆ ಹಸ್ತಾಂತರಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಕ ಉದಯಕುಮಾರ್ ಮಾತನಾಡಿ,
ಘನ ತ್ಯಾಜ್ಯವನ್ನು ರಸ್ತೆ, ಸಾರ್ವಜನಿಕ ಸ್ಥಳ, ಚರಂಡಿ ಅಥವಾ ಜಲಮೂಲಗಳಲ್ಲಿ ಎಸೆಯುವುದು, ಸುಡುವುದು ಅಥವಾ ಹೂಳುವುದನ್ನು ನಿಷೇಧಿಸಲಾಗಿದೆ.
ಪ್ರತಿಯೊಬ್ಬ ಬೀದಿ ವ್ಯಾಪಾರಿಯೂ ತನ್ನ ಚಟುವಟಿಕೆಯಿಂದ ಉಂಟಾಗುವ ಆಹಾರ ತ್ಯಾಜ್ಯ ಬಳಸಿ ತ್ಯಜಿಸುವ ತಟ್ಟೆ, ಕಪ್, ಡಬ್ಬಿ, ಹೊದಿಕೆ. ತೆಂಗಿನ ಚಿಪ್ಪು ಉಳಿದ ಆಹಾರ ತರಕಾರಿ ಹಣ್ಣು ಮುಂತಾದ ತ್ಯಾಜ್ಯಗಳನ್ನು ಸಂಗ್ರಹಿಸಲು ಸೂಕ್ತ ಡಬ್ಬಿಗಳನ್ನು ಇಟ್ಟುಕೊಂಡು ವಿಂಗಡಿಸಿದ ತ್ಯಾಜ್ಯವನ್ನು ಪುರಸಭೆಯ ಮನೆ ಮನೆಯ ಸಂಗ್ರಹ ವಾಹನದಲ್ಲಿ ಹಾಕಬೇಕು ಎಂದು ಸಲಹೆ ನೀಡಿದರು. ಬಳಸಿದ ಡೈಪರ್, ಸ್ಯಾನಿಟರಿ ಪ್ಯಾಡ್ ಮುಂತಾದ ಸ್ಯಾನಿಟರಿ ತ್ಯಾಜ್ಯಗಳನ್ನು ಉತ್ಪಾದಕರಿಂದ ಒದಗಿಸಲಾದ ಕವರ್ಗಗಳಲ್ಲಿ ಅಥವಾ ಸೂಕ್ತ ಹೊದಿಕೆ ಸಾಮಗ್ರಿಯಲ್ಲಿ ಸುರಕ್ಷಿತವಾಗಿ ಹೋದಿಸಿ ಪ್ರತ್ಯೇಕ ತ್ಯಾಜ್ಯ ಡಬ್ಬಿಯಲ್ಲಿ ಹಾಕಿ ಕಸದ ವಾಹನಕ್ಕೆ ನೀಡಬೇಕು ಎಂದರು.
ಈ ಸಂದರ್ಭ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ,ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಪುರಸಭೆ ಕಂದಾಯ ಅಧಿಕಾರಿ ರಾಮು,ಮೇಸ್ತ್ರಿ ಕುಮಾರ್,ಸ್ಥಳೀಯ ಮುಖಂಡರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

