ಶಾಂತಿಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಭಗವಾನ್ ಬುದ್ಧನ ಸಂದೇಶಗಳು ಮಾರ್ಗದರ್ಶಿ; ಉಪವಿಭಾಗಾಧಿಕಾರಿ ನಿತಿನ್ ಚಿಕ್ಕಿ
ಮಡಿಕೇರಿ ಮೇ 1 : ಶಾಂತಿಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಭಗವಾನ್ ಬುದ್ಧನ ಸಂದೇಶಗಳು ಮಾರ್ಗದರ್ಶಿಯಾಗಿದೆ ಎಂದು ಉಪವಿಭಾಗಾಧಿಕಾರಿ ನಿತಿನ್ ಚಿಕ್ಕಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಗರದ ಗಾಂಧಿ ಭವನದಲ್ಲಿ ನಡೆದ ಭಗವಾನ್ ಬುದ್ಧ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘರ್ಷ, ಪರಿಸರ ಸಮಸ್ಯೆ, ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಬುದ್ಧನ ಸಂದೇಶಗಳು ಪ್ರಸ್ತುತವಾಗಿದೆ. ಅಹಿಂಸೆ, ದಯೆ, ಆತ್ಮನಿಗ್ರಹ ಹಾಗೂ ಸಕಲ ಜೀವಿಗಳ ಗೌರವಯುತ ತತ್ವಗಳು ಶಾಂತಿಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿಯಾಗಿದೆ ಎಂದು ಉಪ ವಿಭಾಗಾಧಿಕಾರಿ ಅವರು ಹೇಳಿದರು.
ಭಗವಾನ್ ಬುದ್ಧನ ಜೀವನ ಮತ್ತು ಉಪದೇಶಗಳಿಗೆ ಸಂಬಂಧಿಸಿದ ಪವಿತ್ರ ಭೂಮಿಯಾಗಿರುವ ಭಾರತ ದೇಶವು ಧನ್ಯವಾಗಿದೆ. ಗೌತಮ ಬುದ್ಧನ ಜೀವನ ಮತ್ತು ಬೋಧನೆಗಳಲ್ಲಿ ಸಾರನಾಥ ಮತ್ತು ಕುಶಿನಗರ ಅತ್ಯಂತ ಪ್ರಮುಖವಾದ, ಪವಿತ್ರವಾದ ಎರಡು ಸ್ಥಳಗಳಾಗಿದ್ದು, ವಿಶ್ವದಾದ್ಯಂತ ಭಕ್ತರನ್ನು ಆಕರ್ಷಿಸುತ್ತಿದೆ. ಈ ಸಂದರ್ಭ ಬುದ್ಧನ ಆದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ನಿತಿನ್ ಚಿಕ್ಕಿ ಅವರು ಕರೆ ನೀಡಿದರು.
ಶನಿವಾರಸಂತೆ ವಿಘ್ನೇಶ್ವರ ಬಾಲಕ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಕೆ.ಪಿ.ಜಯಕುಮಾರ್ ಅವರು ಉಪನ್ಯಾಸ ನೀಡಿ, ಭಗವಾನ್ ಬುದ್ಧರ ಜನ್ಮ ದಿನಾಚರಣೆಯನ್ನು ಭಾರತವಲ್ಲದೆ ಥೈಲಾಂಡ್, ಚೀನಾ, ನೇಪಾಳ, ಶ್ರೀಲಂಕಾ, ಜಪಾನ್, ಟಿಬೆಟ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ಬುದ್ಧನ ಸಂದೇಶಗಳು ಇಂದಿಗೂ ಸಹ ಪ್ರಸ್ತುತವಾಗಿದ್ದು, ಸ್ಫೂರ್ತಿದಾಯಕವಾಗಿದೆ ಎಂದರು.
ಗೌತಮ ಬುದ್ಧರು ದೇಶದ ಮೊಟ್ಟ ಮೊದಲ ಸಮಾನತೆಯ ಹರಿಕಾರ. ಜಗತ್ತಿನ ಮೂಲೆ ಮೂಲೆಯಲ್ಲಿಯೂ ಜೀವಂತವಾಗಿರುವ ಮಹಾಚೇತನರು. ಇಡೀ ವಿಶ್ವಕ್ಕೆ ಶಾಂತಿ, ಸಹನೆ, ಸಹಭಾಳ್ವೆ, ಸಹೋದರತೆಯನ್ನು ಬಿತ್ತಿದರು. ಭಾರತದಲ್ಲಿ ಹುಟ್ಟಿ ಬೆಳೆದ ಗೌತಮ ಬುದ್ಧರು ಮಹಾನ್ ದಾರ್ಶನಿಕ, ಸಿದ್ದಾರ್ಥ ಎನ್ನುವ ರಾಜವಂಶದ ಕುಡಿಯಾಗಿದ್ದು, ಸಕಲ ವೈಬೋಗಗಳನ್ನು ತ್ಯಜಿಸಿ, ಜ್ಞಾನೋದಯ ಪಡೆದು ಗೌತಮ ಬುದ್ಧನಾಗುತ್ತಾನೆ ಎಂದರು.
ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವವನ್ನು ಬೋಧಿಸಿದ್ದಾರೆ. ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯ ದಿನವನ್ನು ಸ್ಮರಿಸಲು ಪ್ರತೀ ವರ್ಷ ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ. ಬೌದ್ಧ ಧರ್ಮವು ಈ ನೆಲದಲ್ಲಿ ಹುಟ್ಟಿ ವಿಶ್ವದೆಲ್ಲೆಡೆ ಪಸರಿಸಿದೆ. ಸತ್ಯ, ಸಮಾನತೆ, ಭ್ರಾತೃತ್ವ ಬೌದ್ಧ ಧರ್ಮದ ಮೂಲ ಮಂತ್ರವಾಗಿದೆ ಎಂದರು.
ಆಸೆಯೇ ದುಃಖಕ್ಕೆ ಮೂಲ ಎಂಬುದನ್ನು ಬುದ್ಧ ಸಾರಿದ್ದಾರೆ. ಸಾಮ್ರಾಟ್ ಅಶೋಕ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಬುದ್ಧನ ಶಾಂತಿ ಸಂದೇಶಗಳನ್ನು ಅನುಸರಿಸುತ್ತಾರೆ. ಶಾಂತಿ ದೂತರಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಎಲ್ಲರೂ ಸಮಾನವಾಗಿ ಸಹೋದರತೆಯಿಂದ ಬದುಕು ನಡೆಸಬೇಕು ಎಂಬುದು ಗೌತಮ ಬುದ್ಧರ ಆಶಯವಾಗಿತ್ತು. ಬುದ್ಧರ ಸಂದೇಶಗಳು ಸಾರ್ವಕಾಲೀಕವಾಗಿದ್ದು, ಬುದ್ಧನ ಮಾರ್ಗದಲ್ಲಿ ನಡೆದರೆ ಜೀವನ ನೆಮ್ಮದಿ ಎಂದರು.
ಜಗತ್ತಿಗೆ ಮಾನವತಾವಾದಿ ಸಂದೇಶವನ್ನು ಸಾರಿದ ಭಗವಾನ್ ಬುದ್ಧರ ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ನಮ್ಮ ಯುವ ಪೀಳಿಗೆಯವರು ಪಾಲಿಸುವಂತಾಗಬೇಕು. ಬುದ್ಧನ ಪ್ರಮುಖ ಬೋಧನೆಗಳಲ್ಲಿ ಸಕಲ ಜೀವಿಗಳಿಗೂ ಸಹಾನುಭೂತಿ ತೋರಿಸಬೇಕು ಎಂದು ಜಯಕುಮಾರ್ ಅವರು ಹೇಳಿದರು.
ವಿದ್ಯಾರ್ಥಿಗಳು ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್, ಬಸವೇಶ್ವರರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪುಸ್ತಕಗಳನ್ನು ಹೆಚ್ಚು ಓದಬೇಕು. ದೊಡ್ಡ ದೊಡ್ಡ ಸಾಧಕರ ಸಣ್ಣ ಸಣ್ಣ ಪುಸ್ತಕಗಳನ್ನು ಓದುವ ಮೂಲಕ ಅದರಲ್ಲಿನ ಅಂಶಗಳನ್ನು ತಿಳಿದುಕೊಂಡು ಬದುಕನ್ನು ಸಕಾರಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೈಲುಕುಪ್ಪ ಸೆರಾ ಮಠದ ಗುರು ಕಾಂಗ್ ಗೆಶೆ ನ್ಗ್ವಾಂಗ್ ಜಂಗ್ನಿ ಅವರು ಮಾತನಾಡಿ, ಭಗವಾನ್ ಗೌತಮ ಬುದ್ಧರು ನಾಡಿಗೆ ಸಮಾನತೆಯನ್ನು ಸಾರಿದ್ದಾರೆ. ಎಲ್ಲರು ಕುಡಿಯುವ ನೀರು, ತಿನ್ನುವ ಆಹಾರ, ನಡೆಯುವ ನೆಲ ಒಂದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಅವರ ಸಂದೇಶವನ್ನು ಜೀವನಲದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನುಲ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಸ್ವಾಭಿಮಾನಿ ಸಂಘಟನೆಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ, ದಲಿತ ಸಂಘರ್ಷ ಸಮಿತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಗೌತಮ ಬುದ್ಧರ ಜಯಂತಿಯನ್ನು ಆಚರಿಸುವಂತಾಗಬೇಕು. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ನ್ಯಾಯಯುತವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಿಕ್ಷಣ ಸುದಾರಣ ಸಮಿತಿ ಸದಸ್ಯರಾದ ಸಿ.ಜೆ.ಮೋಹನ್ ಮೌರ್ಯ ಅವರು ಮಾತನಾಡಿ, ಪ್ರಪಂಚಕ್ಕೆ ಬೆಳಕು ಚೆಲ್ಲಿದ ಭಗವಾನ್ ಗೌತಮ ಬುದ್ಧರ ಜಯಂತಿಯನ್ನು ಸರ್ಕಾರದ ಮೂಲಕ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ. ಇದರಿಂದ ಹಳ್ಳಿ ಹಳ್ಳಿಗೂ ಭಗವಾನ್ ಬುದ್ಧರ ತತ್ವ, ಆಚಾರ, ವಿಚಾರ ಪಸರಿಸಲಿದೆ ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಮಾರ್ಗ ಮತ್ತು ಬೌದ್ಧ ದರ್ಮ ಪ್ರಚಾರಕರಾದ ಕೆ.ಪಿ.ರಾಜು ಮಾತನಾಡಿ, ಭಗವಾನ್ ಬುದ್ಧರ ಜಯಂತಿಯನ್ನು ಪ್ರತಿ ಮನೆಯಲ್ಲಿ ಆಚರಿಸುವಂತಾಗಬೇಕು. ವಿದ್ಯಾರ್ಥಿಗಳು ಅವರ ಆಚಾರ, ವಿಚಾರ, ತತ್ವವನ್ನು ಓದಿ ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭೆ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ಸೆರಾ ಮಠದ ಗುರು ನವಂಗ ಡಕ್ಪ, ಕುಶಾಲನಗರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ಅಧ್ಯಕ್ಷೆ ಸುಶೀಲ ತ್ಯಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಬಾಲಕೃಷ್ಣ ರೈ, ಪಿ.ಎಲ್.ದೇವರಾಜು, ಸೆರಾ ಮಠದ ಗುರುಗಳು, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ವಾನ್ ಬಿ.ಸಿ.ಶಂಕರಯ್ಯ ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.
ಸೆರಾ ಮಠದ ಗುರುಗಳು ಗಣ್ಯರಿಗೆ ಸಾಲು ಹೊದಿಸಿ ಗೌರವಿಸಿದರು. ಅಲ್ಲದೇ ವಿಶೇಷ ಪ್ರಾರ್ಥನೆ ಸಲ್ಲಿಸಿದರು.