ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ
ಸಿದ್ದಾಪುರ : ಫೆ10.ಇತ್ತೀಚೆಗೆ ಗ್ರಾ.ಪಂ ಕಟ್ಟಡಗಳು ಅಭಿವೃದ್ಧಿ ಹೊಂದುವುದರೊಂದಿಗೆ ಸದಸ್ಯರುಗಳ ಮನಸ್ಥಿತಿಗಳು ಒಳ್ಳೆಯದಾಗಬೇಕಾಗಿದೆ.ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ನೆಲ್ಯಹುದಿಕೇರಿಯ ನೂತನ ಗ್ರಾ.ಪಂ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ನೆಲ್ಯಹುದಿಕೇರಿ ಗ್ರಾಮಕ್ಕೆ ಅನುದಾನ ನೀಡುವುದು ನನ್ನ ಋಣವಾಗಿದೆ ಎಂದರು.ಸಾರ್ವಜನಿಕ ಸೇವೆಯಲ್ಲಿ ಕತ್ತು ಬಗ್ಗಿಸಿಸೇವೆ ಮಾಡುವ ಮೂಲಕ ಪ್ರಾಮಾಣಿಕ ಸೇವೆ ನೀಡಬೇಕೆಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಕಚೇರಿಯ ಸಾಂತ್ವನ ಕೇಂದ್ರದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಬೇಕೆಂದರು.
ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕೆಂದು ಕಿವಿಮಾತು ಹೇಳಿದರು.ಸರಕಾರಿ ಕಟ್ಟಡಗಳಲ್ಲಿ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆಯನ್ನು ಕಡಿಮೆಗೊಳಿಸುವಲ್ಲಿ ಕ್ರಮ ವಹಿಸಬೇಕು. ಕಾವೇರಿ ನದಿಗೆ ನೇರವಾಗಿ ತ್ಯಾಜ್ಯಗಳನ್ನು ಹರಿಸುತ್ತಿರುವ ಹಿನ್ನೆಲೆಯಲ್ಲಿ ನೆಲ್ಯಹುದಿಕೇರಿ ಗ್ರಾ.ಪಂ ಗೆ ಮಾಲಿನ್ಯ ಮಂಡಳಿಯಿಂದ ನೋಟೀಸ್ ನೀಡುವ ಸಾಧ್ಯತೆ ಇದ್ದು ಗ್ರಾ.ಪಂ ಸೂಕ್ತ ಕ್ರಮವಹಿಸಬೇಕೆಂದು ಕರೆ ನೀಡಿದರು. ಗ್ರಾ.ಪಂ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಲ್ಲಿ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ಮಡಿಕೇರಿ ಕ್ಷೇತ್ರದ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ತರುವ ಮೂಲಕ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.ನೆಲ್ಯಹುದಿಕೇರಿ ಗ್ರಾಮದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಈಗಾಗಲೇ ಎರಡು ಕೋಟಿ ಹಣವನ್ನು ಅನುದಾನವಾಗಿ ನೀಡಿರುವುದು ಗಮನಾರ್ಹ. ಎಂದ ಅವರು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಮುಂದಾಗಿದ್ದಾರೆ.ಸರಕಾರವು ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತನ್ನು ಉಳೊಸಿಕೊಂಡಿದೆ ಎಂದರು.
ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ ಪಿ ಶಶಿದರ್ ಮಾತನಾಡಿ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಎರಡು ಕೋಟಿ ಅನುಧಾನವನ್ನು ನೀಡಿರುವ ಮಡಿಕೇರಿ ಶಾಸಕರು ಬಿಡುವಿಲ್ಲದೆ ದುಡಿಯುತ್ತಿದ್ದಾರೆ.ಗ್ರಾಮದ ಪಕ್ಷದ ಕಾರ್ಯಕರ್ತರನ್ನು ವಿವಿಧ ಕ್ಷೇತ್ರಗಳಿಗೆ ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ.
ಮತ ನೀಡಿದ ಮತದಾರರಿಗೆ ಘನತೆ ನೀಡುವ ಕೆಲಸವನ್ನು ಶಾಸಕರು ಮಾಡುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಜಿಲ್ಲಾ ಕೆ .ಡಿ. ಪಿ. ಸದಸ್ಯೆ ಸುನಿತಾ ಮಂಜುನಾಥ್, ಮಾಜಿ ಗ್ರಾ.ಪಂ ಅಧ್ಯಕ್ಷರುಗಳಾದ ಸಾಬು ವರ್ಗೀಸ್, ಧನಲಕ್ಷ್ಮೀ, ಮಾಜಿ ಗ್ರಾ.ಪಂ ಉಪಾಧ್ಯಕ್ಷೆ ಪ್ರಮಿಳ, ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಕೆ. ಎಂ. ಬಶೀರ್, ಯುವ ಕಾಂಗ್ರೆಸ್ ಮುಖಂಡ ಸಂಶುದ್ದಿನ್, ಹಾಗೂ ಗ್ರಾ.ಪಂ ಮಾಜಿ ಸದಸ್ಯರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ಆಶಾ ಕಾರ್ಯಕ್ರಮ ನಿರೂಪಿಸಿದರು. ಕೆ.ಪಿ.ಎಸ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ತಡವಾಗಿ ಆಗಮಿಸಿದ ಶಾಸಕರು
20 ಲಕ್ಷ ವೆಚ್ಚದಲ್ಲಿನಿರ್ಮಾಣವಾದ ನೆಲ್ಯಹುದಿಕೇರಿ ಗ್ರಾ.ಪಂ ನೂತನ ಕಟ್ಟಡ ಉದ್ಘಾಟನೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂತರ್ ಗೌಡರವರು ನೆರವೇರಿಸುವುದರಿಂದ ಬೆಳಗ್ಗೆ 11:30 ಕ್ಕೆ ನಡೆಯಬೇಕಾದ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಗ್ರಾ.ಪಂ ಏರ್ಪಡಿಸಿತ್ತು. ಶಾಸಕರನ್ನು ಬರಮಾಡಲು ಆಗಮಿಸಿದ್ದ ಗ್ರಾಮಸ್ಥರು 2 ಗಂಟೆಯಾದರೂ ಬಾರದೆ ಇದ್ದ ಹಿನ್ನೆಲೆಯಲ್ಲಿ ಬಳಲಿದ್ದರು. ಇತ್ತ ಗ್ರಾ.ಪಂ ಸದಸ್ಯರುಗಳು ,ಕಾರ್ಯಕರ್ತರು ಕೂಡ ಶಾಸಕರ ಆಗಮನಕ್ಕೆ ಕಾದು ಕುಳಿತಿದ್ದರು.