ಸೋಮವಾರಪೇಟೆ ತಾಲ್ಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಚಾಲನೆ

ಸೋಮವಾರಪೇಟೆ: ತಾಲ್ಲೂಕಿನ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ರಾಜ್ಯ ಸರಕಾರ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು. ರಸ್ತೆ ಕಾಮಗಾರಿಯ ಸಂದರ್ಭ ಕಳಪೆ ಕಾಮಗಾರಿ ನಡೆಯದಂತೆ ಎಚ್ಚರ ವಹಿಸಬೇಕು. ಕಾಮಗಾರಿಯನ್ನು ಗ್ರಾಮಸ್ಥರು ಖುದ್ದು ಪರಿಶೀಲಿಸಿ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಹೀಗೆ ಮಾಡುವುದರಿಂದ ಅಭಿವೃದ್ಧಿ ಹೊಂದಿದ ರಸ್ತೆಗಳು ಸುದೀರ್ಘ ಕಾಲ ಹದಗೆಡದೆ ಉಳಿದುಕೊಳ್ಳಲಿವೆ ಎಂದು ತಿಳಿಸಿದರು.
ವಿವಿಧೆಡೆ ಕಾಮಗಾರಿ:
ರೂ.1 ಕೋಟಿ ವೆಚ್ಚದಲ್ಲಿ ಐಗೂರು-ಕಿರಗಂದೂರು-ಕೂಡೆಗದ್ದೆ ರಸ್ತೆ ಕಾಂಕ್ರಿಟೀಕರಣ, ರೂ.50 ಲಕ್ಷ ವೆಚ್ಚದಲ್ಲಿ ತಾಕೇರಿ-ಹರಗ ರಸ್ತೆ ಮರು ಡಾಂಬರೀಕರಣ, ರೂ.15 ಲಕ್ಷ ವೆಚ್ಚದಲ್ಲಿ ಕಿರಗಂದೂರು-ಡಿಬಿಡಿ ರಸ್ತೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ರಸ್ತೆ ನಿರ್ಮಾಣ, ರೂ.25 ಲಕ್ಷ ವೆಚ್ಚದಲ್ಲಿ ಕಿರಗಂದೂರು ದುರ್ಗಾ ಕಾಲೋನಿ ರಸ್ತೆ ಕಾಂಕ್ರಿಟೀಕರಣ ಹಾಗೂ ರೂ.50 ಲಕ್ಷ ವೆಚ್ಚದಲ್ಲಿ ಕಿರಗಂದೂರು ಗ್ರಾಮದ ವಿವಿಧ ಗ್ರಾಮಾಂತರ ರಸ್ತೆಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿತು.
ಈ ಸಂದರ್ಭ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಸೋಮವಾರಪೇಟೆ ಸರಕಾರಿ ಜ್ಯೂನಿಯರ್ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎ.ಲಾರೆನ್ಸ್,ಬ್ಲಾಕ್ ಕಾಂಗ್ರೆಸ್ ಖಜಾಂಜಿ ಚೇತನ್, ಕಿರಗಂದೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಎಸ್.ಬಿ.ಸುರೇಂದ್ರ, ಐಗೂರು ಪ್ಯಾಕ್ಸ್ ನಿರ್ದೇಶಕ ಕೆ.ಪಿ.ರೋಷನ್, ಕಿರಗಂದೂರು ಗ್ರಾಮಾಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಪಿ.ಗೋಪಾಲ್, ತಾ.ಪಂ ಮಾಜಿ ಸದಸ್ಯೆ ಸಬಿತಾ ಚೆನ್ನಕೇಶವ, ಗ್ರಾಮದ ಹಿರಿಯರಾದ ಎಸ್.ಎಂ.ಕೃಷ್ಣಕಾಂತ್ ಹಾಗೂ ಗ್ರಾಮಸ್ಥರು ಹಾಜರಿದ್ದರು.