ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಮಾದಂಡ ತಿಮ್ಮಯ್ಯ ಆಗ್ರಹ

ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಮಾದಂಡ ತಿಮ್ಮಯ್ಯ ಆಗ್ರಹ
ಮಾದಂಡ ತಿಮ್ಮಯ್ಯ

ವಿರಾಜಪೇಟೆ; ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಡಿಕೆ ಶಿವಕುಮಾರ್ ಅವರ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕೆಂದು ವಿರಾಜಪೇಟೆ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮಾಜಿ ಅಂತರಾಷ್ಟ್ರೀಯ ರಗ್ಬಿ ಆಟಗಾರ, ಹಾಗೂ ವಿರಾಜಪೇಟೆ ಪ್ರಗತಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಮಾದಂಡ ತಿಮ್ಮಯ್ಯ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಎಎಸ್ ಪೊನ್ನಣ್ಣ ಅವರು ರಾಜ್ಯದ ಅತ್ಯಂತ ಕ್ರಿಯಾಶೀಲ ಹಾಗೂ ಜನಪ್ರಿಯ ಶಾಸಕರಲ್ಲಿ ಒಬ್ಬರು.ಕಳೆದ ಮೂರು ವರ್ಷಗಳ ಕಾಲ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿ,ಸರ್ಕಾರದ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದೊಂದಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.ಕಳೆದ ಒಂದು ದಶಕಗಳಿಂದ ಕೊಡಗು ಜಿಲ್ಲೆ ಮಂತ್ರಿ ಸ್ಥಾನದಿಂದ ವಂಚಿತವಾಗಿದೆ.ಈ ಬಾರಿ ಕಾಂಗ್ರೆಸ್ ಸರ್ಕಾರ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವ ವಿಶ್ವಾಸ ಹೊಂದಿದ್ದೇವೆ.

ಎಎಸ್ ಪೊನ್ನಣ್ಣ ಅವರು ವಿರಾಜಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.ರಾಜ್ಯದಲ್ಲಿ ಅತ್ಯಂತ ಪ್ರತಿಭಾವಂತ ಹಾಗೂ ಕ್ರಿಯಾಶೀಲ ಶಾಸಕರಲ್ಲಿ ಒಬ್ಬರು. ಕೊಡಗು ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯಲ್ಲಿ ಕೂಡ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ.ಕಡಿಮೆ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಅತ್ಯಂತ ಪ್ರಭಾವಿ ಶಾಸಕರಲ್ಲಿ ಒಬ್ಬರಾಗಿರುವ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ರಾಜ್ಯದಲ್ಲಿ ಕೊಡಗು ಜಿಲ್ಲೆಯನ್ನು ಪರಿಗಣಿಸಬೇಕಾಗಿದೆ.

ರಾಜ್ಯದ ಏಕೈಕ ಕೊಡವ ಸಮುದಾಯದ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ರಾಜ್ಯದಲ್ಲಿ ಕೊಡವರಿಗೆ ಕಾಂಗ್ರೆಸ್ ಮತ್ತಷ್ಟು ಪ್ರಾತಿನಿತ್ಯ ನೀಡುವ ವಿಶ್ವಾಸ ಹೊಂದಿದ್ದೇವೆ.ರಾಜ್ಯದಲ್ಲಿ ಎಎಸ್ ಪೊನ್ನಣ್ಣ ಅವರು,ಸಚಿವ ಸ್ಥಾನ ಸೂಕ್ತ ವ್ಯಕ್ತಿ ಎಂದು ಮಾದಂಡ ತಿಮ್ಮಯ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.