ಮಡಿಕೇರಿ: ನಕ್ಷತ್ರ ಆಮೆ ಕಳ್ಳಸಾಗಣೆ,ಇಬ್ಬರ ಬಂಧನ
ಮಡಿಕೇರಿ, ಜೂನ್ 17: ಸಂರಕ್ಷಿತ ಪ್ರಾಣಿ ನಕ್ಷತ್ರ ಆಮೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಜೂನ್ 16ರಂದು ಸಂಜೆ 6:30ರ ಸುಮಾರಿಗೆ ಮಡಿಕೇರಿ ನಗರದ ಕನ್ನಂಡ ಪಡುಬೀರ ವೃತ್ತದ ಬಸ್ ತಂಗುದಾಣದಲ್ಲಿ ಇಬ್ಬರು ವ್ಯಕ್ತಿಗಳು ನಕ್ಷತ್ರ ಆಮೆ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆರೋಪಿಗಳು ಹಾಗೂ ವನ್ಯಜೀವಿಯನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗುರುವನಂ ರಸ್ತೆ ನಿವಾಸಿ ಶ್ರೀಧರನ್ ಸಿ.ಕೆ. (70) ಹಾಗೂ ಜಿ.ಕೆ. ನಗರ ನಿವಾಸಿ ವಿಷ್ಣು ಆಚಾರ್ಯ (68) ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮಾನ್ಯ ಪೊಲೀಸ್ ಉಪ ಮಹಾನಿರೀಕ್ಷಕರಾದ ಶ್ರೀಮತಿ ಸಂಗೀತಾ. ಜಿ. ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್ ನೆಟ್ಟೂರು ಐಪಿಎಸ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಶಿವಶಂಕರ್ ಹಾಗೂ ಸಿಬ್ಬಂದಿಗಳಾದ ಉಮೇಶ್ ಎನ್.ಕೆ, ಶನಂತ ಕೆ.ಪಿ. ದಿವ್ಯಶ್ರೀ ಹೆಚ್.ಎಸ್ ಮತ್ತು ಸ್ವಾಮಿ ಎಂ ರವರು ಪಾಲ್ಗೊಂಡಿದ್ದರು.

