ಮಡಿಕೇರಿ; ಪಾನಮತ್ತನಾಗಿದ್ದ ಪಶ್ಚಿಮ ಬಂಗಾಳದ ವ್ಯಕ್ತಿ ಸಾವು

ಮಡಿಕೇರಿ; ಪಾನಮತ್ತನಾಗಿದ್ದ ಪಶ್ಚಿಮ ಬಂಗಾಳದ ವ್ಯಕ್ತಿ ಸಾವು

ಮಡಿಕೇರಿ, ಏ. 19: ಪಾನಮತ್ತನಾಗಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಗರದ ಓಂಕಾರೇಶ್ವರ ದೇವಾಲಯ ಬಳಿ ನಡೆದಿದೆ. ಮೂಲತಃ ಪಶ್ಚಿಮ ಬಂಗಾಳದ ಜಲಪೈಗುರಿ ನಿವಾಸಿ, ಮಡಿಕೇರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬಂಧನ್ ಉರಾವ್ (40) ಮೃತಪಟ್ಟ ದುರ್ದೈವಿ.

ಶುಕ್ರವಾರದಂದು ನಗರದ ಬಾರ್‌ವೊಂದರಲ್ಲಿ ವಿಪರೀತ ಮದ್ಯ ಸೇವಿಸಿ ಅಮಲಿನಲ್ಲಿ ಬಂಧನ್ ಊರಾವನನ್ನು ಕಂಡ ಆತನ ಸ್ನೇಹಿತ ತನ್ನ ಓಂಕಾರೇಶ್ವರ ಬಳಿಯ ಬಾಡಿಗೆ ಮನೆಗೆ ಕರೆದೊಯ್ದು ಮಲಗಿಸಿದ್ದಾನೆ. ಬೆಳಿಗ್ಗೆ ಎದ್ದು ನೋಡಿದಾಗ ಬಂಧನ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ವೃತ್ತ ನಿರೀಕ್ಷಕ ಪಿ.ಕೆ. ರಾಜು ಹಾಗೂ ಇತರ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.