ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮ
ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಡಿ ಹಿರಿಯ ಪತ್ರಕರ್ತರ, ಬ್ರಹ್ಮಗಿರಿ ಕೊಡವ ವಾರಪತ್ರಿಕೆ ಸಂಪಾದಕ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಉಳ್ಳಿಯಡ ಎಂ ಪೂವಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ನೇತೃತ್ವದಲ್ಲಿ ಆಡಳಿತ ಮಂಡಳಿಯವರು ಹಾಗೂ ಸದಸ್ಯರು ಪೂವಯ್ಯ ಅವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂವಯ್ಯ ಅವರು, ಕೊನೆಯ ಉಸಿರು ಇರುವವರೆಗೂ ಪತ್ರಿಕೋದ್ಯಮ ಬಿಡುವ ಪ್ರಶ್ನೆಯೇ ಇಲ್ಲ. ಪತ್ರಕರ್ತನಾಗಿ ಕೆಲಸ ಮಾಡುತ್ತಿರುವುದು ತೃಪ್ತಿ ತಂದಿದೆ. ದಿನಕ್ಕೆ 12 ರಿಂದ 16 ಗಂಟೆಗಳ ಕಾಲ ಪತ್ರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದು. ಬ್ರಹ್ಮಗಿರಿ ಪತ್ರಿಕೆ 47 ವರ್ಷ ಪೂರೈಸಿದೆ ಎಂದು ಮಾಹಿತಿಯಿತ್ತರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡಿದ ಈ ಗೌರವ ಅವಿಸ್ಮರಣೀಯವಾಗಿರುತ್ತದೆ. ನನ್ನ ಜೀವನವನ್ನು ಪತ್ರಿಕೆಗಾಗಿ ಮುಡಿಪಾಗಿಟ್ಟಿದ್ದೇನೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ಕೊಡವ ಪತ್ರಿಕೆಯೊಂದು 47 ವರ್ಷ ಪೂರೈಸಿರುವುದು ನಿಜಕ್ಕೂ ಶ್ಲಾಘನೀಯ. ನೇರ ನಡೆನುಡಿಯ ವ್ಯಕ್ತಿ ಯು.ಎಂ. ಪೂವಯ್ಯ ಸಂಘದ ಅಧ್ಯಕ್ಷರಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದರು. ಅವರ ಹಿರಿತನ ಹಾಗೂ ಉತ್ಸಾಹವನ್ನು ಗುರುತಿಸಿ ಸಂಘದಿಂದ ಗೌರವಿಸಲಾಗಿದೆ. ಬ್ರಹ್ಮಗಿರಿ ಪತ್ರಿಕೆ ಕೊಡಗು ಮಾತ್ರವಲ್ಲದೆ ಹೊರ ಜಿಲ್ಲೆ, ರಾಜ್ಯ, ಹೊರ ದೇಶದಲ್ಲಿ ನೆಲೆಸಿರುವ ಕೊಡಗಿನವರು ಓದುತ್ತಿದ್ದಾರೆ. ಇದಕ್ಕೆ ಪೂವಯ್ಯ ಹಾಗೂ ಡಾಟಿ ಪೂವಯ್ಯ ಅವರ ಶ್ರಮ ಕಾರಣ ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮಾತನಾಡಿ, ಕೊಡವ ಭಾಷೆಯಲ್ಲಿ ಪತ್ರಿಕೆಯನ್ನು ಕಳೆದ 47 ವರ್ಷದಿಂದ ಹೊರತರುತ್ತಿರುವುದು ಸಾಹಸದ ಕೆಲಸವಾಗಿದೆ. ಸಾಕಷ್ಟು ಸಾಹಿತಿಗಳನ್ನು, ಬರಹಗಾರರನ್ನು ಪೂವಯ್ಯ ಅವರು ಹುಟ್ಟುಹಾಕಿದ್ದಾರೆ. ಪೂವಯ್ಯ ದಂಪತಿ ಇದಕ್ಕಾಗಿ ಹಾಕಿರುವ ಶ್ರಮ ಗಮನಾರ್ಹ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಹಿರಿಯ ಪತ್ರಕರ್ತರ ನೋವು-ನಲಿವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮ ಪೂರಕವಾಗಿದೆ. ಹಿರಿಯರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ನಮಗೂ ತೃಪ್ತಿ ತಂದಿದೆ ಎಂದರು.
ಇದೇ ಸಂದರ್ಭ ಮಾತನಾಡಿದ ಬ್ರಹ್ಮಗಿರಿ ಪತ್ರಿಕೆಯ ಉಪಸಂಪಾದಕಿ ಡಾಟಿ ಪೂವಯ್ಯ, ಸಂಘ ಹಿರಿಯರನ್ನು ಗುರುತಿಸಿ ಗೌರವಿಸುತ್ತಿರುವುದು ಖುಷಿ ನೀಡಿದೆ. ಸಮಾಜ ನಮ್ಮನ್ನು ಗುರುತಿಸಲು ಪತ್ರಿಕೆ ಕಾರಣವಾಗಿದೆ. ನಮಗೆ ಮೊದಲ ಮಗು ಪತ್ರಿಕೆ ಆಗಿದೆ ಎಂದು ಹೇಳಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ನವೀನ್ ಸುವರ್ಣ, ಖಜಾಂಚಿ ಸುನಿಲ್ ಪೊನ್ನೆಟ್ಟಿ, ನಿರ್ದೇಶಕರಾದ ಚಿತನ್,ಅಬ್ದುಲ್ಲಾ ಸದಸ್ಯರಾದ ಮಂಜು ಸುವರ್ಣ, ಲೋಹಿತ್ ಎಂ.ಆರ್ ಹಾಜರಿದ್ದರು.