ನಾಪೋಕ್ಲು: ಕೆಪಿಎಸ್ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ಮೊದಲದಿನದ ಎಸ್ ಎಸ್ ಎಲ್ ಸಿ ಪರೀಕ್ಷೆ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2025 -26 ನೇ ಸಾಲಿನ 10ನೇ ತರಗತಿಯ ಮೊದಲ ದಿನದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಪರೀಕ್ಷಾ ಕೇಂದ್ರದಲ್ಲಿ ನಾಪೋಕ್ಲು ವಿಭಾಗದ ಆಂಗ್ಲ ಮಾಧ್ಯಮ ಸೇರಿದಂತೆ ಒಟ್ಟು 11 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ 193ಗಂಡು178ಹೆಣ್ಣುಮಕ್ಕಳು ಸೇರಿದಂತೆ ಒಟ್ಟು371 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಇದರಲ್ಲಿ ಮೊದಲ ದಿನದ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 3ಖಾಸಗಿ ವಿದ್ಯಾರ್ಥಿಗಳು ಗೈರಾಗಿದ್ದು.ಉಳಿದ 368 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಯನ್ನು ಬರೆಯಲು ಹಾಜರಾಗಿದ್ದಾರೆ. ಶಾಲೆಯ ಸಿವಿಲ್ ಕಾಮಗಾರಿ ಮೇಲುಸ್ತುವಾರಿ ಉಪ ಸಮಿತಿ ಅಧ್ಯಕ್ಷ ಕೆ.ಎ.ಹಾರಿಸ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ತೇರ್ಗಡೆಯಾಗಲು ನಿರಂತರ ಶ್ರಮಪಟ್ಟು ಎಲ್ಲಾ ರೀತಿಯ ತಯಾರಿ ನಡೆಸಿ ಶಿಕ್ಷಕರ ಹಾಗೂ ಪೋಷಕರ ಸಲಹೆ ಸೂಚನೆಗಳೊಂದಿಗೆ ಪರೀಕ್ಷೆಗೆ ಹಾಜರಾಗಿದ್ದೀರ, ವಿದ್ಯಾರ್ಥಿಗಳು ಯಾವುದೇ ಭಯ ಆತಂಕ ಪಡದೆ ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಬರೆದು ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿ ತಮ್ಮ ಶಾಲೆಗೂ,ಶಿಕ್ಷಕರಿಗೂ ಊರಿಗೂ ಕೀರ್ತಿಯನ್ನು ತರುವುದರೊಂದಿಗೆ ಉತ್ತಮ ಅಂಕಪಡೆದು ತೇರ್ಗಡೆಯಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಶಾಲೆಯ ಪ್ರಭಾರ ಉಪ ಪ್ರಾಂಶುಪಾಲರಾದ ಎಂ. ಎಸ್. ಶಿವಣ್ಣ ಅವರು ಮಾತನಾಡಿ ಶಿಕ್ಷಣ ಇಲಾಖೆಯ ಪೂರ್ವ ತಯಾರಿಯೊಂದಿಗೆ ನಮ್ಮ ಶಾಲೆಯ ಪರೀಕ್ಷಾ ಕೇಂದ್ರದ 17 ಕೊಠಡಿಗಳಲ್ಲಿ ಸಂಪೂರ್ಣ ಸಿ ಸಿ ಕ್ಯಾಮರಾ ಕಣ್ಗಾವಲಿನೊಂದಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರದಲ್ಲಿ 25 ಪರೀಕ್ಷಾ ಮೇಲುಸ್ತುವಾರಿ ಸಿಬ್ಬಂದಿಗಳೊಂದಿಗೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.
ಪ್ರತಿ ಕೊಠಡಿಗಳಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದ ನೇರ ದೃಶ್ಯಾವಳಿಗಳನ್ನು ಜಿಲ್ಲಾ ಮತ್ತು ರಾಜ್ಯ ಹಂತದಲ್ಲಿ ಅಧಿಕಾರಿಗಳು ವೀಕ್ಷಣೆ ಮಾಡಬಹುದಾಗಿದೆ. ಈ ಸಾಲಿನಲ್ಲಿ ಕಟ್ಟುನಿಟ್ಟಿನ ಕ್ರಮದೊಂದಿಗೆ ಯಾವುದೇ ಗೊಂದಲ, ಭಯವಿಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆಯಲಿದೆ ಎಂದು ಶಿವಣ್ಣ ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರದ ಉಪ ಅಧೀಕ್ಷಕಿ ಕೆ. ಬಿ.ಉಷಾರಾಣಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರಕ್ಕೆ ಉತ್ಸಾಹದಿಂದ ಹಾಜರಾದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪೂರ್ವತಯಾರಿ ನಡೆಸಿರುವ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿತ್ತು.ನಾಪೋಕ್ಲು ಪೊಲೀಸ್ ಠಾಣಾ ಸಿಬ್ಬಂದಿಗಳು ಪರೀಕ್ಷಾ ಕೇಂದ್ರದ ಸುತ್ತಲೂ ಸೂಕ್ತ ಬಂದೊಬಸ್ತ್ ಕಲ್ಪಿಸಿದರು.
ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಅರೋಗ್ಯ ಪರಿಕರಗಳೊಂದಿಗೆ ಕಾರ್ಯನಿರ್ವಹಿಸಿದರು. ಈ ಸಂದರ್ಭ ಪರೀಕ್ಷಾ ಕೇಂದ್ರದ ಪ್ರಶ್ನೆ ಪತ್ರಿಕೆ ಕಸ್ಟೋಡಿಯನ್ ಸಿ. ಎಸ್.ಸುರೇಶ್ ,ಮೊಬೈಲ್ ಸ್ವಾಧೀನಾಧಿಕಾರಿ ಯತೀಶ್ ಕುಮಾರ್, ಸ್ಥಾನಿಕಜಾಗೃತ ದಳದ ಗಾರ್ಡ್ವಿನ್ ರೊನಾಲ್ಡೊ ಸೇರಿದಂತೆ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾದ ಎಲ್ಲಾ ಶಿಕ್ಷಕ ವೃಂದದವರು ಮತ್ತಿತರರು ಹಾಜರಿದ್ದರು.