ನಾಪೋಕ್ಲು :ವಿಷ ಸೇವಿಸಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಆತ್ಮಹತ್ಯೆ

ನಾಪೋಕ್ಲು :ವಿಷ ಸೇವಿಸಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಆತ್ಮಹತ್ಯೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ಕಾಲೇಜು ವಿದ್ಯಾರ್ಥಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನೆಲಜಿ,ಬಲ್ಲಮಾವಟಿ ಗ್ರಾಮದಲ್ಲಿ ನಡೆದಿದೆ. ನೆಲಜಿ ಗ್ರಾಮದ ನಿವಾಸಿ ಚೆಟ್ಟಿಯಾರಂಡ ತನು ತಮಯ್ಯ ಎಂಬುವರ ಪುತ್ರಿ ಹರ್ಷಿಣಿ (17)ಹಾಗೂ ಬಲ್ಲಮಾವಟಿ ಗ್ರಾಮದ ನಿವಾಸಿ ಮಲೆಯಂಡ ಪ್ರಶಾಂತ್ ಎಂಬುವವರ ಪುತ್ರ ಪ್ರತೀಕ್ ಪೊನ್ನಣ್ಣ(17) ಮೃತದುರ್ದೈವಿಗಳಾಗಿದ್ದಾರೆ.

 ಮೂರ್ನಾಡು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಇಬ್ಬರು ಸ್ನೇಹಿತರಾಗಿದ್ದರು ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿಣಿ ಬುಧವಾರ ರಾತ್ರಿ ಮೃತಪಟ್ಟರೆ, ಪ್ರತೀಕ್ ಪೊನ್ನಣ್ಣ ಗುರುವಾರ ಮುಂಜಾನೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.