ಪೊನ್ನಂಪೇಟೆ: ಕಾಣೆಯಾಗಿದ್ದ ಮಹಿಳೆ ತೋಡಿನಲ್ಲಿ ಶವವಾಗಿ ಪತ್ತೆ
ಪೊನ್ನಂಪೇಟೆ : ಪೊನ್ನಂಪೇಟೆ ತಾಲೂಕಿನ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದ ಗದ್ದೆ ಬದಿಯ ತೋಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವಳ ಶವ ಪತ್ತೆಯಾಗಿದ್ದು, ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ ನಲ್ಲೂರು ಗ್ರಾಮದ ದೂಪದಕೊಲ್ಲಿ ಪೈಸಾರಿ ನಿವಾಸಿ ಪಂಜಿರಿ ಎರವರ ಮಂಜುಳ (40) ಎಂಬ ಮಹಿಳೆಯ ಮೃತದೇಹ ಎಂದು ಗುರುತಿಸಲಾಗಿದೆ.
ನಲ್ಲೂರು ಗ್ರಾಮದ ಪುಚ್ಚಿಮಾಡ ಮುತ್ತಪ್ಪ ಅವರ ಕಾಫಿ ತೋಟದ ರೈಟರ್ ತಾ. 16 ರಂದು ಬೆಳಿಗ್ಗೆ ಎಂದಿನಂತೆ ತೋಟಕ್ಕೆ ಹೋಗುತ್ತಿದ್ದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯ ತಾಯಿ ಪಂಜಿರಿ ಎರವರ ಸುಬ್ಬಿ ತನ್ನ ಮಗಳು ವಿಪರೀತ ಮದ್ಯ ಸೇವನೆ ಮಾಡಿ ಜೀವನದಲ್ಲಿ ಜಿಗುಪ್ಪೆಗೊಂಡು ಮೃತಪಟ್ಟಿರುತ್ತಾಳೆಂದು ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಜಿ, ಎಎಸ್ಐ ಬಿ.ಎಂ.ಪ್ರಮೋದ್ ಕುಮಾರ್, ಸಿಬ್ಬಂದಿ ಕೆ.ಆರ್. ಸಂತೋಷ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಗೋಣಿಕೊಪ್ಪ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.