ಆಗಸ್ಟ್ 15 ರಂದು ಕೊಡ್ಲಿಪೇಟೆಯಲ್ಲಿ ಎಸ್.ವೈ.ಎಸ್ ವತಿಯಿಂದ ‌ರಾಷ್ಟ್ರ ರಕ್ಷಾ ಸಂಗಮ

ಆಗಸ್ಟ್ 15 ರಂದು ಕೊಡ್ಲಿಪೇಟೆಯಲ್ಲಿ ಎಸ್.ವೈ.ಎಸ್ ವತಿಯಿಂದ ‌ರಾಷ್ಟ್ರ ರಕ್ಷಾ ಸಂಗಮ

ಮಡಿಕೇರಿ: ಸುನ್ನಿ ಯುವಜನ ಸಂಘ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆ.೧೫ರಂದು ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮ ಕೊಡ್ಲಿಪೇಟೆಯ ನೂರ್ ಮಹಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಎಸ್‌ವೈಎಸ್ ಕಾರ್ಯದರ್ಶಿ ಹಮೀದ್ ಮೌಲವಿ ಮಾಹಿತಿ ನೀಡಿದರು.

 ಭಾರತದಲ್ಲಿ ಅದೆಷ್ಟೋ ಧರ್ಮಗಳಿವೆ. ಪ್ರತಿಯೊಂದು ಧರ್ಮಕ್ಕೂ ಅವರವರ ಆಚಾರ ವಿಚಾರ ಅನುಷ್ಠಾನಗಳನ್ನು ವಿವರಿಸಿಸುವ ಪುಣ್ಯ ಗ್ರಂಥಗಳಿವೆ. ಆದರೆ, ಭಾರತದ ಶ್ರೇಷ್ಠ ಗ್ರಂಥ ಅದು ಈ ದೇಶದ ಸಂವಿಧಾನ. ಈ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನು ಅನುಸರಿಸಬೇಕು. ಈ ವಿಚಾರವನ್ನು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಬಿತ್ತನೆ ಮಾಡುವ ಆಗ್ರಹವಾಗಿದೆ. ಈ ಹಿನ್ನೆಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಸ್‌ವೈಎಸ್ ಉಪಾಧ್ಯಕ್ಷ ಕೆ.ಎ.ಯಾಕುಬ್ ಮಾತನಾಡಿ, ಅಂದು ಸಂಜೆ ೪ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಅಬ್ದುಲ್ಲ ಫೈಜಿ ಉಪಕಾಜಿ ಅವರು ಉದ್ಘಾಟಿಸಲಿದ್ದಾರೆ. ಎಸ್‌ವೈಎಸ್ ಅಧ್ಯಕ್ಷ ಬಶೀರ್ ಹಾಜಿ ಅಧ್ಯಕ್ಷತೆ ವಹಿಸಲಿದ್ದು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕ ಡಾ.ಮಂತರ್ ಗೌಡ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಕೊಡ್ಲಿಪೇಟೆ ಚರ್ಚ್ ಫ್ರೆಡ್ಲಿ ಫಾದರ್, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಕಿರಿಕೊಡ್ಲಿಮಠ ಕ್ಷೇತ್ರದ ಮಠಾಧೀಶರಾದ ಸದಾಶಿವ ಸ್ವಾಮೀಜಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಕೆ.ಜೆ.ಯು ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಫೈಝಿ, ಎಸ್‌ವೈಎಸ್ ಜಿಲ್ಲಾ ಕೋಶಾಧಿಕಾರಿ ರಫಿಕ್ ಹಾಜಿ, ಎಸ್‌ವೈಎಸ್‌ನ ಸುಂಟಿಕೊಪ್ಪ ಶಾಖೆ ಅಧ್ಯಕ್ಷ ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಸಿ.ಎಂ.ಮೊಹಮ್ಮದ್ ಶರೀಫ್ ಹಾಜರಿದ್ದರು.