ತಿತಿಮತಿಯಲ್ಲಿ ಕ್ರೀಡೋತ್ಸವ; ಕ್ರೀಡೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನಕ್ಕೆ ಅತ್ಯಂತ ಅಗತ್ಯ;ಶಾಸಕ ಎಎಸ್ ಪೊನ್ನಣ್ಣ

ತಿತಿಮತಿಯಲ್ಲಿ ಕ್ರೀಡೋತ್ಸವ; ಕ್ರೀಡೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನಕ್ಕೆ ಅತ್ಯಂತ ಅಗತ್ಯ;ಶಾಸಕ ಎಎಸ್ ಪೊನ್ನಣ್ಣ

ಸಿದ್ದಾಪುರ :- ಪೊನ್ನಂಪೇಟೆ ತಾಲೂಕು ತಿತಿಮತಿ ಗ್ರಾಮದಲ್ಲಿ ನಡೆಯುತ್ತಿರುವ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮುಖ್ಯ ಅತಿಥಿಯಾಗಿ ಭಾನುವಾರ ಭಾಗವಹಿಸಿದರು.

 ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಕ್ರೀಡೋತ್ಸವದಲ್ಲಿ ಕ್ರಿಕೆಟ್ ಪಂದ್ಯಗಳು ವಿಶೇಷ ಆಕರ್ಷಣೆಯಾಗಿವೆ. ವಿವಿಧ ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ನೀಡುತ್ತಿವೆ.

 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಕ್ರೀಡೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನಕ್ಕೆ ಅತ್ಯಂತ ಅಗತ್ಯವೆಂದು ಹೇಳಿದರು. ದೇಹಕ್ಕೆ ವ್ಯಾಯಾಮ ನೀಡುವ ಕ್ರೀಡೆ ಮಾನಸಿಕವಾಗಿ ಸಹ ಆರೋಗ್ಯವನ್ನು ವೃದ್ಧಿಸುವುದಲ್ಲದೆ, ಶಿಸ್ತಿನ ಗುಣಗಳನ್ನು ಬೆಳೆಸುತ್ತದೆ ಎಂದು ತಿಳಿಸಿದರು.

 ಕ್ರೀಡೆಯನ್ನು ಸದಾ ಸಕಾರಾತ್ಮಕ ಮನೋಭಾವದಿಂದ ಆಡಬೇಕು ಮತ್ತು ಅದರಿಂದ ಲಭಿಸುವ ಲಾಭವನ್ನು ವೈಯಕ್ತಿಕ ಜೀವನದ ಜೊತೆಗೆ ಸಮಾಜದ ಅಭಿವೃದ್ಧಿಗೂ ಬಳಸಬೇಕು ಎಂದು ಕರೆ ನೀಡಿದರು. ಕ್ರೀಡೆಯಿಂದ ದೊರೆಯುವ ಸದ್ಗುಣಗಳು ಸಮಾಜದ ಭವಿಷ್ಯ ನಿರ್ಮಾಣಕ್ಕೆ ಸಹಕಾರಿ ಆಗಲಿವೆ ಎಂದು ಅವರು ಅಭಿಪ್ರಾಯಪಟ್ಟರು. ಎಲ್ಲರೂ ಉತ್ತಮವಾಗಿ ಆಡುತ್ತಾ ಯಶಸ್ಸನ್ನು ಸಾಧಿಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ನವೀನ್, ಪಕ್ಷದ ಮುಖಂಡರಾದ ಜೋಕಿಮ್, ಮರ್ವಿನ್ ಲೋಬೊ, ಮೇಲ್ರಯ್ ಲೋಬೋ, ತೆರೇಸಾ ವಿಕ್ಟರ್, ಫಿಲೋಮೀನಾ, ಜೋನ್ಸನ್ ಪಿಂಟೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.