ಸುಂದರನಗರ: ರಸ್ತೆಗೆ ತ್ಯಾಜ್ಯ ನೀರು ಬಿಡುಗಡೆ, ಸಾರ್ವಜನಿಕರಿಂದಲೇ ಕ್ರಮ

ಸುಂದರನಗರ: ರಸ್ತೆಗೆ ತ್ಯಾಜ್ಯ ನೀರು ಬಿಡುಗಡೆ, ಸಾರ್ವಜನಿಕರಿಂದಲೇ ಕ್ರಮ

ಕುಶಾಲನಗರ,೦೨: ಕೂಡುಮಂಗಳೂರು ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ಕೋರೆರಸ್ತೆಯಲ್ಲಿ ಬಹು ಅಂತಸ್ತಿನ ಕಟ್ಟಡದ ತ್ಯಾಜ್ಯ ನೀರನ್ನು ರಸ್ತೆಗೆ ಬಿಡುತ್ತಿದ್ದ ಹಿನ್ನಲೆ ಸಾರ್ವಜನಿಕರೇ ಸಮಸ್ಯೆಗೆ ಕ್ರಮ ಕೈಗೊಂಡ ಘಟನೆ ನಡೆದಿದೆ.

 ಸುಂದರನಗರದ ಕೋರೆ ರಸ್ತೆಯಲ್ಲಿರುವ ಮೂರು ಅಂತಸ್ತಿನ ಕಟ್ಟಡದಿಂದ ಕಳೆದ ಎರಡು ತಿಂಗಳಿನಿಂದ ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಪಂಚಾಯಿತಿ ಗಮನಕ್ಕೆ ತಂದಿದ್ದರು.

 ಆನಂತರ ಪಂಚಾಯಿತಿಯಿಂದ ತ್ಯಾಜ್ಯ ನೀರು ಬರುವ ಪೈಪನ್ನು ಬಂದ್ ಮಾಡಲಾಗಿತ್ತು. ಆದರೂ ರಸ್ತೆಯಲ್ಲಿ ತ್ಯಾಜ್ಯ ನೀರು ಹರಿದು, ರಸ್ತೆ ಪೂರ್ತಿ ತ್ಯಾಜ್ಯ ನೀರಿನಿಂದ ತುಂಬಿತ್ತು. ರಸ್ತೆಯಲ್ಲಿ ಶಾಲಾ ಮಕ್ಕಳು, ಕಾರ್ಮಿಕರು, ರಸ್ತೆಯಲ್ಲಿ ತಿರುಗಾಡದಂತಾದ ಸಂದರ್ಭ ಸಾರ್ವಜನಿಕರು, ಗ್ರಾ.ಪಂ ಮಾಜಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಹಾಗೂ ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಪ್ರಕಾಶ್ ಅವರ ಗಮನಕ್ಕೆ ತಂದರು. ನಂತರ ಸ್ಥಳಕ್ಕಾಗಮಿಸಿದ ಇವರು, ಕೂಡಲೇ ಪಿಡಿಒ ಸ್ಥಳಕ್ಕೆ ಆಗಮಿಸುವಂತೆ ಪಟ್ಟುಹಿಡಿದರು.

ನಂತರ ಪರಿಶೀಲಿಸಿದಾಗ ರಾತ್ರಿ ವೇಳೆ ನೀರಿನ ಪೈಪನ್ನು ತೆರೆದು ತ್ಯಾಜ್ಯ ನೀರು ರಸ್ತೆಗೆ ಬಿಡುತ್ತಿರುವುದು ಕಂಡು ಬಂತು. ಇದಕ್ಕೆ ಪಿಡಿಒ ಹಾಗೂ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಸ್ಥಳೀಯರು, ತ್ಯಾಜ್ಯ ನೀರು ಹರಿಯುವ ಪೈಪನ್ನು ಕಾಂಕ್ರೀಟ್ ಹಾಕಿ ಮುಚ್ಚಲಾಯಿತು. ಆನಂತರ ಅಕ್ಕಮವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಹೇಗೆ ವಿದ್ಯುತ್ ಸಂಪರ್ಕ ಕಲ್ಲಿಸಲಾಗಿದೆ ಎಂದು ಸಾರ್ವಜನಿಕರು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಮನೆಯ ಮಾಲೀಕರು ವಿದ್ಯುತ್ ಸಂಪರ್ಕಕ್ಕಾಗಲೀ, ಕಟ್ಟಡ ಪರವಾನಗೆಯಾಗಲೀ ತೆಗೆದುಕೊಂಡಿರುವುದಿಲ್ಲ. ಇದು ಅಕ್ರಮ ಕಟ್ಟಡವಾಗಿರುತ್ತದೆ. ಮನೆಯ ಮಾಲೀಕರು ಅನಗತ್ಯವಾಗಿ ಪಂಚಾಯಿತಿ ವಿರುದ್ಧ ಕೋರ್ಟ್ ನಲ್ಲಿ ಧಾವೆಯೂಡಿರುವ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಮಾಜಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು, ಚೆಸ್ಕಾಂ ನ‌ ಎಇಇ ಅವರಿಗೆ ಕರೆ ಮಾಡಿ ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು. ತಕ್ಷಣನೇ ಚೆಸ್ಕಾಂ ನಿಂದ ಸಂಪರ್ಕವನ್ನು ಕಡಿತಗೊಳಿಸದರು.

 ನಂತರ ಮಾತನಾಡಿದ ಕೆ.ಬಿ.ಶಂಶುದ್ಧೀನ್, ಇಂದು ಓರ್ವ ಬಡವ ಪಂಚಾಯಿತಿ ಅನುಮತಿ ಪಡೆಯದೇ ಮನೆ ನಿರ್ಮಿಸುವುದಕ್ಕಾಗಲೀ, ಮನೆ ರಿಪೇರಿ ಕೆಲಸಕ್ಕಾಗಲೀ ಕೈ ಹಾಕಿದರೆ ಅಧಿಕಾರಿಗಳು ಬಡವರನ್ನು ತಡೆಯುತ್ತಾರೆ. ಆದರೆ ಶ್ರೀಮಂತರು ಯಾವುದೇ ಅನುಮತಿ ಪಡೆಯದೇ, ರಾಜಾರೋಶವಾಗಿ ಮೂರಂತಸ್ತಿನ ಕಟ್ಟಡ ನಿರ್ಮಾಣ ಮಾಡಿದರೂ ಈ ಬಗ್ಗೆ ಕ್ರಮ ಕೈಗೊಳ್ಳಲು ಆಲೋಚಿಸುತ್ತಿರುತ್ತಾರೆ.

ಇದು ಯಾವ ನ್ಯಾಯ ಎಂದ ಅವರು, ಮನೆಯ ಮಾಲೀಕ ಲಂಚ ಕೊಟ್ಟು ಮನೆ ನಿರ್ಮಿಸಿರುವುದಾಗಿ ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಅಧಿಕಾರಿಗಳು ಇನ್ನು ಮುಂದಕ್ಕೂ ಮೌನವಹಿಸಿದರೆ ಸಾರ್ವಜನಿಕರೊಡನೆ ಅನಿರ್ಧಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಅಲ್ಲದೇ ಸ್ನಾನದ ನೀರು ಹಾಗೂ ಶೌಚಾಲಯದ ನೀರು ರಸ್ತೆಗೆ ಹರಿಯುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಕೂಡಲೇ ಈ ಬಗ್ಗೆ ಕ್ರಮ‌ಕೈಗೊಳ್ಳಬೇಕು ಎಂದರು. ಈ ಸಂದರ್ಭ ಪುರಸಭೆ ನಾಮ‌ನಿರ್ದೇಶಿತ ಸದಸ್ಯರಾದ ಪ್ರಕಾಶ್, ಸ್ಥಳೀಯ ಮುಖಂಡರಾದ ಸುಕುಮಾರ್, ಸುರೇಶ್, ಹರೀಶ್, ರಫೀಕ್ ಹಾಗೂ ಇನ್ನಿತರರು ಇದ್ದರು.