ಸುಂಟಿಕೊಪ್ಪ;ಆತ್ಮಹತ್ಯೆ ಶಂಕೆ, ಶವಸಂಸ್ಕಾರಕ್ಕೆ ಪೊಲೀಸರ ತಡೆ

ಸುಂಟಿಕೊಪ್ಪ;ಆತ್ಮಹತ್ಯೆ ಶಂಕೆ, ಶವಸಂಸ್ಕಾರಕ್ಕೆ ಪೊಲೀಸರ ತಡೆ

ಮಡಿಕೇರಿ: ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಅದನ್ನು ಸಹಜ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆ ನಡೆಸಲು ಮುಂದಾದ ಸಂದರ್ಭ ಪೊಲೀಸರ ಮಧ್ಯ - ಪ್ರವೇಶದಿಂದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದ - ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ - ದಾಖಲಾಗಿದೆ. 7ನೇ ಹೊಸಕೋಟೆ ತೊಂಡೂರು ಗ್ರಾಮದ ನಿವಾಸಿ ರಮೇಶ್ (55) ಎಂಬವರು ಭಾನುವಾರ ಮೃತಪಟ್ಟಿದ್ದರು. ಆದರೆ, ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತ್ತು.

ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಮೃತರ ಮನೆಗೆ ಧಾವಿಸಿದಾಗ, ಮೃತದೇಹವನ್ನು ಕುಶಾಲನಗರಕ್ಕೆ ತೆಗೆದುಕೊಂಡು - ಹೋಗಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಭಾನುವಾರ - ಸಂಜೆಯ ವೇಳೆಗೆ ಮೃತದೇಹವನ್ನು ಮರಳಿ ಮನೆಗೆ = ತರಲಾಗಿತ್ತು. ರಮೇಶ್ ಅವರಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು

ದೃಢೀಕರಿಸಿ ಮರಣೋತ್ತರ ಪರೀಕ್ಷೆ ನಡೆಸದೆಯೇ ಶವವನ್ನು ಮನೆಗೆ ತರಲಾಗಿತ್ತು ಎನ್ನಲಾಗಿದೆ. ಅಂತಿಮ ವಿಧಿವಿಧಾನಗಳನ್ನು ಮುಗಿಸಿ ಶವಯಾತ್ರೆಯು ಸ್ಮಶಾನದ ಕಡೆಗೆ ಸಾಗುತ್ತಿದ್ದಂತೆ, ಖಚಿತ ಮಾಹಿತಿ ಪಡೆದ ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಧಾವಿಸಿದರು.

ಬಳಿಕ ಮೃತ ರಮೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಹೀಗಿರುವಾಗ ಮರಣೋತ್ತರ ಪರೀಕ್ಷೆ ಮಾಡದೆ ಶವಸಂಸ್ಕಾರ ಮಾಡುವುದು ಕಾನೂನುಬಾಹಿರ ಹಾಗೂ ಅಪರಾಧವಾಗುತ್ತದೆ. ಆದ್ದರಿಂದ ಮರಣೋತ್ತರ ಪರೀಕ್ಷೆ ಮಾಡಿಸಲೇಬೇಕು. ಇದಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಲ್ಲಿದ್ದವರಿಗೆ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಎಚ್ಚರಿಕೆ ನೀಡಿದರು.

ನಂತರ ಶವವನ್ನು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಮೃತದೇಹವನ್ನು ವಾರಿಸುದಾರರಿಗೆ ಹಸ್ತಾಂತರಿಸಿದ್ದು, ಸೋಮವಾರ ತಡರಾತ್ರಿ ಶವಸಂಸ್ಕಾರ ನೆರವೇರಿತು.