ಬಸ್ ತಂಗುದಾಣ - ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಟ್ಟ ದಾನಿ ಸಂಜು ಪೊನ್ನಪ್ಪಗೆ ಸನ್ಮಾನ
ಸುಂಟಿಕೊಪ್ಪ;ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಸಂಜು ಪೊನ್ನಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಕಂಬದ ವ್ಯವಸ್ಥೆ ಹಾಗೂ ಬಸ್ ತಂಗುದಾಣ ನಿರ್ಮಿಸಿಕೊಡುವ ಮೂಲಕ ಜನಸೇವೆಗೆ ಮಾದರಿಯಾಗಿದ್ದಾರೆ.
ಕೆದಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಏಳನೇ ಮೈಲಿನ ವಿಕ್ರಂ ಬಡಾವಣೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ವಿದ್ಯುತ್ ಕಂಬ ಇಲ್ಲದೇ ಆ ಭಾಗದ ನಿವಾಸಿಗಳಿಗೆ ರಾತ್ರಿ ವೇಳೆ ಸಂಚರಿಸಲು ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡ ಸಂಜು ಪೊನ್ನಪ್ಪ ಅವರು ಸೆಸ್ಕ್ ಇಲಾಖೆಯೊಂದಿಗೆ ಚರ್ಚಿಸಿ ಕೂಡಲೇ ರೂ. 40 ಸಾವಿರ ವೆಚ್ಚದಲ್ಲಿ ವಿದ್ಯುತ್ ಕಂಬ ಅಳವಡಿಸುವ ಮೂಲಕ ನಿವಾಸಿಗಳಿಗೆ ಬೆಳಕಾಗಿದ್ದಾರೆ.
ಅಲ್ಲದೇ ಕೆದಕಲ್ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಂದಾಜು ರೂ.60 ಸಾವಿರ ವೆಚ್ಚದಲ್ಲಿ ಕೆದಕಲ್ - ಹೊರೂರು ಭಾಗದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಸ್ ತಂಗುದಾಣ ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಂಜು ಪೊನ್ನಪ್ಪ ಅವರು, ಇದು ನನ್ನಿಂದ ಸಣ್ಣ ಸಹಾಯ ಅಷ್ಟೆ. ವಿದ್ಯುತ್ ಕಂಬ ಮತ್ತು ವಿದ್ಯುತ್ ಸಂಪರ್ಕ ಹಾಗೂ ಸಾರ್ವಜನಿಕರ ತಂಗುದಾಣಕ್ಕೆ ಅಂದಾಜು ರೂ. ಒಂದು ಲಕ್ಷ ವೆಚ್ಚವಾಗಿದೆ.
ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ತಂಗುದಾಣದ ನಿರ್ಮಾಣ ಮತ್ತು ವಿಕ್ರಂ ಬಡಾವಣೆಯ ನಿವಾಸಿಗಳು ಕತ್ತಲೆಯಲ್ಲಿ ತಿರುಗಾಡುತ್ತಿರುವುದನ್ನು ಗಮನಿಸಿ ವಿದ್ಯುತ್ ಕಂಬದ ವ್ಯವಸ್ಥೆ ಮಾಡಿದ್ದೇನೆ ಎಂದರು. ಸಂಜು ಪೊನ್ನಪ್ಪ ಅವರ ಸೇವೆಯನ್ನು ಸ್ಕರಿಸಿ ಕೆದಕಲ್ ಗ್ರಾಮದ ನಿವಾಸಿಗಳಾದ ಬಿ.ಆರ್.ಸಂತೋಷ್ (ದಿನು), ಸತೀಶ್ ಪೂಜಾರಿ, ಮೋಂತು ಡಿಸೋಜ, ಡಾಲು, ಮನು, ಬಾಲ, ಜೀವನ್ ಸೇರಿದಂತೆ ಇತರರು ಅವರನ್ನು ಸನ್ಮಾನಿಸಿ ಗೌರವಿಸಿದರು.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0
