ವಿರಾಜಪೇಟೆ; ಪ್ರಥಮ ಬಾರಿಗೆ ಏಪ್ರಿಲ್ 02ರಂದು ಅದ್ಧೂರಿ ಹನುಮ ಜಯಂತಿ

ವಿರಾಜಪೇಟೆ; ಪ್ರಥಮ ಬಾರಿಗೆ ಏಪ್ರಿಲ್ 02ರಂದು ಅದ್ಧೂರಿ ಹನುಮ ಜಯಂತಿ

ವಿರಾಜಪೇಟೆ: ವಿರಾಜಪೇಟೆಯಲ್ಲಿ ಪ್ರಥಮ ಬಾರಿಗೆ ಏಪ್ರಿಲ್ ೨ ರಂದು ಅದ್ದೂರಿ ಹನುಮ ಜಯಂತಿ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಸಂಬoಧ ವಿರಾಜಪೇಟೆ ನಗರದಲ್ಲಿ ಅದ್ದೂರಿ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹನುಮ ಜಯಂತಿ ಆಯೋಜನಾ ಸಮಿತಿಯ ಅಧ್ಯಕ್ಷ ಅಂಜಪರವoಡ ಅನಿಲ್ ಮಂದಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿಲ್ ಮಂದಣ್ಣ ಅವರು, ಅತ್ಯಂತ ವಿಜೃಂಬಣೆಯಿoದ ಹನುಮ ಜಯಂತಿಯನ್ನು ಆಚರಿಸಲು ಸಮಿತಿ ವತಿಯಿಂದ ತೀರ್ಮಾನಿಸಲಾಗಿದ್ದು, ಕಾರ್ಯಕ್ರಮಕ್ಕೆ ಮಂಗಳೂರಿನ ಗುರುಪುರದಲ್ಲಿರುವ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿಗಳು ಹಾಗೂ ಖ್ಯಾತ ವಾಗ್ಮಿಗಳಾದ ಶರಣ್ ಪಂಪ್‌ವೆಲ್ ಆಗಮಿಸಲಿದ್ದಾರೆ. ಹನುಮ ಜಯಂತಿ ಕಾರ್ಯಕ್ರಮ ಜಿಲ್ಲಾ ಮಟ್ಟದಾಗಿದ್ದು ಹನುಮ ಭಕ್ತರು, ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದರಲ್ಲದೆ ಏ.೨ರಂದು ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಬಾಲಾಂಜನೇಯ ದೇವಾಲಯದಿಂದ ಉತ್ಸವ ಮೂರ್ತಿಯೊಂದಿಗೆ ಶೋಭಾಯಾತ್ರೆ ಪ್ರಾರಂಭವಾಗಲಿದೆ.

 ಅಲ್ಲಿಂದ ಚಿಕ್ಕಪೇಟೆಯ ವೀರಾಂಜನೇಯ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ಬಳಿಕ ಅಲ್ಲಿಂದ ಶೋಭಾಯಾತ್ರೆ ಚರ್ಚ್ ಸ್ಟ್ರೀಟ್ ಮೂಲಕ ಬಂದು ಮಾರಿಯಮ್ಮ ದೇವಾಲಯದ ಬಳಿ ಸಂಗಮವಾಗಲಿದೆ. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಟ್ಟಣದ ಮುಖ್ಯ ಬೀದಿಯಲ್ಲಿ ಸಂಚರಿಸಿ ತಾಲೂಕು ಮೈದಾನದಲ್ಲಿ ಕೊನೆಗೊಳ್ಳಲಿದೆ. ತಾಲೂಕು ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಶೋಭಾಯಾತ್ರೆಯಲ್ಲಿ ಕೊಡಗಿನ ವಾದ್ಯ, ವಿವಿಧ ಸ್ತಭ್ದಚಿತ್ರಗಳು, ಬೆಳ್ಳಿ ರಥದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ, ಭಜನೆ ಕುಣಿತ, ಚಂಡೆಮೇಳ, ಸೇರಿದಂತೆ ಹುಲಿವೇಷದ ನರ್ತನ ಪ್ರದರ್ಶನಗೊಳ್ಳಲಿವೆ.

ಕಾರ್ಯಕ್ರಮದ ಬಳಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಸೇರಿ ಕಾರ್ಯಕ್ರಮ ಯಶ್ವಸಿಗೊಳಿಸಿಕೊಡಬೇಕೆಂದು ಹೇಳಿದರು. ವಿರಾಜಪೇಟೆ ನಗರದ ಹನುಮ ಜಯಂತಿ ಆಯೋಜನಾ ಸಮಿತಿಯ ಕಾರ್ಯದರ್ಶಿ ಕೂತಂಡ ಸಚಿನ್ ಹನುಮ ಜಯಂತಿಗೆ ಅಂದಾಜು ೭-೮ ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ. ಹನುಮ ಜಯಂತಿ ಆಚರಣೆ ಹೆಚ್ಚು ಗಮನ ಸೆಳೆಯುತ್ತಿದೆ. ಹಿಂದೂ ಸಂಗಮ ಕಾರ್ಯಕ್ರಮದಂತೆ ಹನುಮ ಜಯಂತಿಯಲ್ಲಿ ಕೂಡ ಹೆಚ್ಚಿನ ಮಂದಿ ಪಾಲ್ಗೊಳ್ಳುವ ಮೂಲಕ ರಾಜ್ಯಮಟ್ಟದಲ್ಲಿ ಖ್ಯಾತಿ ಗಳಿಸುವಂತಾಗಬೇಕಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಮಿತಿ ಸದಸ್ಯರಾದ ಬಿ.ಜಿ. ಸಾಯಿನಾಥ್ ನಾಯ್ಕ್ ಮಾತನಾಡಿ, ಹೆಚ್ಚಿನ ಜನ ಸೇರುವ ನಿರೀಕ್ಷೆಯಿದ್ದು ಆರಕ್ಷಕರು ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಭದ್ರತೆ ನೀಡಿದಂತೆ ಹನುಮ ಜಯಂತಿಗೂ ಹೆಚ್ಚಿನ ಭದ್ರತೆ ನೀಡಬೇಕು ಎಂದರು. ವಿರಾಜಪೇಟೆ ನಗರದ ಹನುಮ ಜಯಂತಿ ಆಯೋಜನಾ ಸಮಿತಿಯ ಸಾಮಾಜಿಕ ಜಾಲತಾಣದ ಶಿನೋಜ್, ಜಂಟಿ ಕಾರ್ಯದರ್ಶಿ ಪ್ರದೀಪ್ ರೈ, ಉಪಾಧ್ಯಕ್ಷರಾದ ಶಾನ್ ಚಂಗಪ್ಪ, ಹೇಮಂತ್, ಜಂಟಿ ಕಾರ್ಯದರ್ಶಿ ಶಶಿಕುಮಾರ್, ಸುಮೇಶ್, ಖಜಾಂಚಿ ಸುಮೇಶ್, ಸಮಿತಿಯ ಕಾನೂನು ಸಲಹೆಗಾರರಾದ ಪುಲಿಯಂಡ ಪೊನ್ನಣ್ಣ ಸೇರಿದಂತೆ ಇತರರು ಇದ್ದರು.