ವಿರಾಜಪೇಟೆ:ಅಖಂಡ ಭಾರತ ಸಂಕಲ್ಪ ದಿನ ಪ್ರಯುಕ್ತ ಪಂಜಿನ ಮೆರವಣಿಗೆ
ವಿರಾಜಪೇಟೆ:ಅಖಂಡ ಭಾರತ ಸಂಕಲ್ಪ ದಿನ ಕರಾಳ ಅಂಗವಾಗಿ ವಿರಾಜಪೇಟೆ ನಗರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಪಂಜಿನ ಮೆರವಣಿಗೆ ನಡೆಯಿತು. ವಿರಾಜಪೇಟೆ ನಗರದ ತೆಲುಗರ ಬೀದಿ ಶ್ರೀ ದಕ್ಷಿಣ ಮಾರಿಯಮ್ಮ ದೇಗುಲದಿಂದ ಎಳು ಗಂಟೆಯ ವೇಳೆಗೆ ಮೆರವಣಿಗೆಯು ಆರಂಭವಾಯಿತು. ತೆಲುಗರ ಬೀದಿ, ಜೈನರ ಬೀದಿ, ಎಫ್. ಎಂ.ಸಿ. ರಸ್ತೆಯಲ್ಲಿ ಸಾಗಿ ಖಾಸಗಿ ಬಸ್ಸು ನಿಲ್ದಾಣ ಸುಣ್ಣದ ಬೀದಿ, ಗೊಣಿಕೊಪ್ಪ ರಸ್ತೆ, ಕೆ.ಎಸ್. ಆರ್.ಟಿ.ಸಿ ಬಸ್ಸು ನಿಲ್ದಾಣದ ಮಾರ್ಗವಾಗಿ ದೊಡ್ಡಟ್ಟಿ ಚೌಕಿ , ಮುಖ್ಯ ರಸ್ತೆ ಕಾರು ನಿಲ್ದಾಣದ ಮೂಲಕ ಮಹಿಳಾ ಸಮಾಜ ಸಭಾಂಗಣದಲ್ಲಿ ಶೋಭಯಾತ್ರೆಯು ಕೊನೆಗೊಂಡಿತು. ವಿರಾಜಪೇಟೆ ತಾಲ್ಲೂಕು ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ, ಸಿ.ಐ. ಅನೂಪ್ ಮಾದಪ್ಪ ಸೇರಿದಂತೆ ದಕ್ಷಿಣಾ ಕೊಡಗಿನ ವಿವಿಧ ಸ್ಥಳಗಳ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಕ್ಷಣಾ ವ್ಯವಸ್ಥೆ ಮಾಡಿದ್ದರು. ಹಿಂದೂ ಜಾಗರಣ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ವಿವಿಧ ಹಿಂದೂಪರ ಸಂಘಟಣೆಗಳ ಪ್ರಮುಖರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಾವಿರಕ್ಕೂ ಅಧಿಕ ಮಂದಿ ಹಿಂದೂ ಬಾಂದವರು ಮಹಿಳೆಯರು ,ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ