ಮನೆಯ ಮೇಲೆ ಕಾಡಾನೆ ದಾಳಿ

ಮನೆಯ ಮೇಲೆ ಕಾಡಾನೆ ದಾಳಿ

ಸಿದ್ದಾಪುರ:ಕಾಡಾನೆಯೊಂದು ಮಧ್ಯರಾತ್ರಿ ವೇಳೆ ಮನೆ ಒಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ಇತರೆ ವಸ್ತುಗಳನ್ನ ತುಳಿದು  ನಾಶ ಮಾಡುವುದರ ಮೂಲಕ ಹಾಡಿ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಮಾಡಿದ ಕಾಡಾನೆ ಹಾವಳಿಯಿಂದಾಗಿ ಚನ್ನಂಗಿ ಚಿಕ್ಕ ರೇಷ್ಮೆ ಹಾಡಿ ನಿವಾಸಿಗಳು ಭಯಭೀತರಾಗಿದ್ದಾರೆ.

ಕಾವೇರಿ ಎಂಬುವವರ ಮನೆ ಮೇಲೆ ದಾಳಿ ಮಾಡಿದ ಕಾಡಾನೆ ಬಾಗಿಲು ಮುರಿದು ಒಳನುಗ್ಗಿ ಅಕ್ಕಿ ಸೇರಿದಂತೆ ಆಹಾರ  ಪದಾರ್ಥಗಳನ್ನು  ತಿಂದು ಡ್ರಮ್ ,ಪಾತ್ರೆ,ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ  ಎಲ್ಇ.ಡಿ ಟಿವಿ ಇತರ ಉಪಕರಣಗಳನ್ನು ತುಳಿದು ನಾಶ ಪಡಿಸಿದೆ. ಭಾನುವಾರ ಬೆಳಗಿನ ಜಾವ ಮತ್ತೆ ಬಂದ ಕಾಡಾನೆ  ಮನೆಯ ಅಡುಗೆ ಕೊಣೆ ಮೇಲು ದಾಳಿ ಮಾಡಿ ಮೇಲ್ಚಾವಣಿಗೆ ಹಾಕಲಾಗಿದ್ದ ಸೀಟುಗಳನ್ನು ತುಳಿದು ನಾಶ ಮಾಡಿದೆ.

ತಪ್ಪಿದ ಅನಾಹುತ ಪ್ರಾಣ ಉಳಿಸಿಕೊಂಡ ಮನೆಯವರು:

ಈ ಹಿಂದೆ ಎರಡು ಬಾರಿ ದಾಳಿ ಮಾಡಿದ ಕಾಡಾನೆ ಹಾವಳಿಯಿಂದ ಭಯ ಬೀತರಾಗಿದ್ದ ಮನೆಯವರು ಸಮೀಪದಲ್ಲಿರುವ  ಸಂಬಂಧಿಕರ ಮನೆಯಲ್ಲಿ  ಮಲಗಲು ತೆರಳಿದ್ದರು.ಬೆಳಿಗ್ಗೆ ಬಂದು ನೋಡಿದ ಸಂದರ್ಭ  ಕಾಡಾನೆ ದಾಳಿ ಮಾಡಿ ಆಹಾರ ಸೇರಿದಂತೆ ಇತರ ವಸ್ತುಗಳನ್ನು ನಾಶಪಡಿಸಿರುವುದು ತಿಳಿದುಬಂದಿದೆ. ಈ ಹಿಂದೆಯೂ ಮನೆಯಲ್ಲಿ ಮಲಗಿದ್ದ ಸಂದರ್ಭ ಕಾಡಾನೆ ದಾಳಿಗೆ ಯತ್ನಿಸಿತ್ತು. ಮನೆಯಲ್ಲಿದ್ದವರು   ಕಿಡಚಿಕೊಂಡಾಗ ಆನೆ ಸ್ಥಳದಿಂದ ತೆರಳಿತು . ವಾರದಲ್ಲಿ ಎರಡು-ಮೂರು ದಿನ ಕಾಡಾನೆ  ಮನೆಯ ಬಳಿ ಬರಲು ಆರಂಭಿಸಿದಾಗ ಭಯಭೀತರಾದಕಾವೇರಿ ಹಾಗೂ ಅವರ ಮಗಳು ಸಮೀಪದ ಮನೆ ಒಂದರಲ್ಲಿ  ಮಲಗಲು ಹೋಗುತ್ತಿದ್ದರು. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ  ಮೇಕೆರಿರ ಅರುಣ್ ಕುಮಾರ್  ಭೇಟಿ ನೀಡಿ ಪರಿಶೀಲನೆ ನಡೆಸಿ.ಪಂಚಾಯಿತಿಯಿಂದ ಅಹಾರ ಕಿಟ್ ವಿತರಣೆ ಮಾಡಿದರು ಅರಣ್ಯ ಇಲಾಖೆ ಕೂಡಲೇ ಪರಿಹಾರ ನೀಡಿ ಕಾಡಾನೆ ಹಾವಳಿ ತಡೆಗಟ್ಟಬೇಕೆಂದು ಒತ್ತಾಯಿಸಿದರು.

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ  ಸಿದ್ದಪ್ಪ ಮಾತನಾಡಿ ನಿರಂತರವಾಗಿ ಕಾಡಾನೆ ದಾಳಿಯಿಂದ  ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದು ಇದರಿಂದ  ಭಯ ವಾತಾವರಣ ಸೃಷ್ಟಿಯಾಗಿದೆ ಅರಣ್ಯ ಇಲಾಖೆ ಸಿಬ್ಬಂದಿಗಳು  ಗಸ್ತು ತಿರುಗುವ ಮೂಲಕ  ಮನುಷ್ಯರ ಹಾಗೂ ಮನೆಗಳ ಮೇಲೆ ದಾಳಿ ಮಾಡುವ ಕಾಡಾನೆಯನ್ನು ಕೂಡಲೇ ಸೆರೆಹಿಡಿದು ಸ್ಥಳಾಂತರ ಮಾಡುವುದರೊಂದಿಗೆ  ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು. ಸ್ಥಳಕ್ಕೆ ಅರಣ್ಯ ಇಲಾಖೆ  ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.