ಪಳ್ಳಕೆರೆಯಲ್ಲಿ ಕಾಡಾನೆ ಹಾವಳಿ: ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಕಾರ್ಮಿಕರ ಆಕ್ರೋಶ
ಸಿದ್ದಾಪುರ, ಜೂನ್ 28: ಪಳ್ಳಕೆರೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾರ್ಮಿಕರ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರಗಳು ಕಳೆದರೂ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆದಿಲ್ಲ. ಕಾಫಿ ತೋಟದಲ್ಲೇ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, "ಸಂಜೆ ಮನೆಗೆ ವಾಪಸ್ ಹೋಗ್ತೇವೋ ಇಲ್ಲವೋ" ಎಂಬ ಭೀತಿಯಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದಾರೆ.
"ಕಾಡಾನೆಗಳಿಂದ ಪ್ರಾಣ ಹಾನಿ ಸಂಭವಿಸಿದರೆ ಅರಣ್ಯ ಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆ. ನಿಮ್ಮ ಪರಿಹಾರ ನಮಗೆ ಬೇಡ. ಹೋದ ಜೀವವನ್ನು ಮರಳಿ ಕೊಡಲು ಸಾಧ್ಯವೇ? ನಮಗೆ ಆನೆ ಹಾವಳಿಗೆ ಶಾಶ್ವತ ಪರಿಹಾರ ಬೇಕು" ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.
"ಸಾವು-ನೋವು ಬಡ ಜನರಿಗಷ್ಟೇ. ಅಧಿಕಾರದಲ್ಲಿರುವವರ ಮಕ್ಕಳು ಸುರಕ್ಷಿತವಾಗಿರುತ್ತಾರೆ. ಅದಕ್ಕೆ ಸಮಸ್ಯೆಯ ಗಂಭೀರತೆ ಅರಿತರೂ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರವೇ ಕೈಕಟ್ಟಿ ಕುಳಿತರೆ ನಮ್ಮ ಅಳಲನ್ನು ಯಾರ ಬಳಿ ಹೇಳಿಕೊಳ್ಳೋದು" ಎಂದು ಅವರು ನೋವು ತೋಡಿಕೊಂಡಿದ್ದಾರೆ.

