ಸಿದ್ದಾಪುರ-ಮೈಸೂರು ಮುಖ್ಯರಸ್ತೆಯಲ್ಲಿ ಕಾಡಾನೆ ಸಂಚಾರ
ಸಿದ್ದಾಪುರ ;ಸಿದ್ದಾಪುರ–ಮೈಸೂರು ಮುಖ್ಯರಸ್ತೆಯ ಮಾಲ್ದಾರೆ ಸಮೀಪ ಶನಿವಾರ ಬೆಳಿಗ್ಗೆ ಕಾಡಾನೆಯೊಂದು ರಸ್ತೆ ದಾಟಿದ ಘಟನೆ ಸ್ಥಳೀಯರು ಹಾಗೂ ವಾಹನ ಸವಾರರಲ್ಲಿ ಆತಂಕಕ್ಕೆ ಕಾರಣವಾಯಿತು.
ಮಾಲ್ದಾರೆ ಭಾಗದ ಕಾಫಿ ತೋಟದ ಸೋಲಾರ್ ಬೇಲಿಯನ್ನು ಮುರಿದು ಬಂದ ಕಾಡಾನೆ ಅರಣ್ಯ ಪ್ರದೇಶದ ಕಡೆಗೆ ರಸ್ತೆ ದಾಟುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಇದೇ ವೇಳೆ ಕಾಡಾನೆ ತೋಟದಲ್ಲಿದ್ದ ಸಿಲ್ವರ್ ಮರವನ್ನು ಮುರಿದು ವಿದ್ಯುತ್ ಕಂಬದ ಮೇಲೆ ತಳ್ಳಿಹಾಕಿರುವುದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎನ್ನಲಾಗಿದೆ.
ಬೆಳಗಿನ ವೇಳೆಯಲ್ಲಿ ನಡೆದ ಈ ಘಟನೆಯಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಿದರು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
