ಕ್ಷೇತ್ರ ಪುನರ್ವಿಂಗಡಣೆ ನೆಪವಿಲ್ಲದೆ ಹಾಲಿ ಲೋಕಸಭಾ ಸ್ಥಾನಗಳಿಗೆ ಅನುಗುಣವಾಗಿಯೇ ಮಹಿಳಾ ಮೀಸಲಾತಿ ಜಾರಿ ಮಾಡಲಿ; ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ
ಮಡಿಕೇರಿ: ಬಿಜೆಪಿಗೆ ಮಹಿಳೆಯರ ಬಗ್ಗೆ ನೈಜ ಕಾಳಜಿ ಇದ್ದರೆ, ಕ್ಷೇತ್ರ ಪುನರ್ವಿಂಗಡಣೆ ನೆಪವಿಲ್ಲದೆ ಹಾಲಿ ಲೋಕಸಭಾ ಸ್ಥಾನಗಳಿಗೆ ಅನುಗುಣವಾಗಿಯೇ ಮಹಿಳಾ ಮೀಸಲಾತಿ ಜಾರಿ ಮಾಡಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಆಗ್ರಹಿಸಿದರು.
೨೦೨೩ರಲ್ಲಿ ಅಂಗೀಕಾರವಾದ ಮಸೂದೆಯನ್ನೇ ಯಥಾವತ್ತಾಗಿ ಜಾರಿಗೆ ತರುವಂತೆ ಒತ್ತಾಯಿಸಿದ ಅವರು, ಮಹಿಳೆಯರು ಶಾಸನಸಭೆಗೆ ಬರುವುದು ಬಿಜೆಪಿಗೆ ಬೇಕಿಲ್ಲ. ಪಂಚರಾಜ್ಯ ಚುನಾವಣೆ ಲೆಕ್ಕಾಚಾರಕ್ಕಾಗಿ ಮಸೂದೆ ಮಂಡಿಸಿದ್ದಾರೆ. ಪಂಚಾಯತ್ ರಾಜ್ನಲ್ಲಿ ಶೇ.೫೦ರಷ್ಟು ಮಹಿಳಾ ಮೀಸಲಾತಿ ತಂದಿದ್ದು ಕಾಂಗ್ರೆಸ್.
ಮೊದಲ ಮಹಿಳಾ ಪ್ರಧಾನಿ, ರಾಷ್ಟ್ರಪತಿ ಎಲ್ಲವನ್ನೂ ನೀಡಿದ್ದು ನಮ್ಮ ಪಕ್ಷ. ಬಿಜೆಪಿ ಮಹಿಳೆಯರಿಗೆ ಒಂದೂ ಕಾರ್ಯಕ್ರಮ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದ ಅವರು, ಈ ಸಂಬಂಧ ಮಹಿಳಾ ಕಾಂಗ್ರೆಸ್ನಿಂದ ೧೦ ಲಕ್ಷ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ, ಮೋದಿಗೆ ಹೆಣ್ಣುಮಕ್ಕಳ ಮೇಲೆ ಪ್ರೀತಿಯಿದ್ದರೆ ಮಹಿಳಾ ಮಸೂದೆಯನ್ನು ಪ್ರತ್ಯೇಕವಾಗಿ ಮಂಡಿಸುತ್ತಿದ್ದರು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ, ಪ್ರಮುಖರಾದ ರೂಪಾ ಭೀಮಯ್ಯ, ಶೀಲಾ ಡಿಸೋಜಾ, ಜೆ.ಫಿಲೋಮಿನಾ ಇದ್ದರು.