ನರಿಯಂದಡ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ಹಾವಳಿ

ನರಿಯಂದಡ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ಹಾವಳಿ

ವರದಿ:ಝಕರಿಯ ನಾಪೋಕ್ಲು

 

ನಾಪೋಕ್ಲು :ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮರುಕಳಿಸಿದ್ದು ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳು ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟುಮಾಡಿದ್ದು ಕಾಡಾನೆ ಹಾವಳಿಯಿಂದ ಗ್ರಾಮದಲ್ಲಿ ಜನರು ಓಡಾಡಲು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ.ಜೀವ ಬಲಿ ಪಡೆಯುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತು ಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನರಿಯಂದಡ ಗ್ರಾಮದ ನಿವಾಸಿ ಪೊಕ್ಕುಳಂಡ್ರ ಧನೋಜ್ (ದಿವ್ಯ) ಎಂಬುವವರ ಹಾಗೂ ಈ ವ್ಯಾಪ್ತಿಯ ಪೋಕುಳಂಡ್ರ ಕುಟುಂಬಸ್ಥರ, ತೆರ್ಮೆಕಾಡು ಪೈಸಾರಿ ಭಾಗದ ತೋಟಗಳಿಗೆ ಒಂಟಿ ಸಲಗವೊಂದು ದಾಂದಲೆ ನಡೆಸಿ ಫಸಲು ಭರಿತ ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ.

 

 ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ತೋಟದಲ್ಲಿ ಒಂಟಿ ಸಲಗ ದಾಳಿ ನಡೆಸುತ್ತಿದ್ದು ಇದರಿಂದ ಫಸಲು ಭರಿತ ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿದೆ.ಅದರಂತೆ ತೋಟದಲ್ಲಿ ಬೆಳೆದ ಅಡಿಕೆ,ತೆಂಗು, ಬಾಳೆ ಇನ್ನಿತರ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ, ಆನೆ ತೋಟದಲ್ಲೇ ಬೀಡು ಬಿಟ್ಟಿದ್ದು ತೋಟಕ್ಕೆ ಕಾರ್ಮಿಕರು ತೆರಳಲು ಹಿಂದೇಟು ಹಾಕುತ್ತಿದ್ದಾರೆ ಜೀವ ಬಲಿ ಪಡೆಯುವ ಮುನ್ನ ಅರಣ್ಯ ಇಲಾಖೆ ಹೆಚ್ಚೆತ್ತು ಕೊಳ್ಳುವಂತೆ ಧನೋಜ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಕಳೆದ ಕೆಲವು ದಿನಗಳಿಂದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ, ಕೋಕೇರಿ,ಚೇಲಾವರ,ಗ್ರಾಮದಲ್ಲಿ ಕಾಡಾನೆಗಳ ಹಿಂಡು ಗ್ರಾಮದ ನಿವಾಸಿಗಳ ಮನೆಯಂಗಳಕ್ಕೆ ಲಗ್ಗೆ ಇಟ್ಟು ಜನರು ಭಯಭೀತರಾಗಿದ್ದರು. ಅಲ್ಲದೆ ಗ್ರಾಮಗಳ ತೋಟಗಳಿಗೆ ನುಸುಳಿದ ಕಾಡಾನೆಗಳ ಹಿಂಡು ತೋಟದಲ್ಲಿರುವ ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ಬೆಳೆಗಾರರು ಅಪಾರ ನಷ್ಟ ಅನುಭವಿಸುವಂತಾಗಿತ್ತು.ಗ್ರಾಮದ ನಿವಾಸಿ ಬೆಳೆಗಾರ ಶ್ಯಾನ್ ಬೊಗರ ಸುಮಂತ್ ಎಂಬುವವರ ಮನೆಯ ಸಮೀಪಕ್ಕೆ ಕಳೆದ ಎರಡು ದಿನಗಳ ಹಿಂದೆ 8 ಕ್ಕೂ ಅಧಿಕ ಆನೆ ಲಗ್ಗೆ ಇಟ್ಟು ಕಾಫಿ,ಅಡಿಕೆ, ಬಾಳೆ ತೆಂಗು ಇನ್ನಿತರ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿತ್ತು ಈ ವಿಚಾರ ಮಾಸುವ ಮುನ್ನವೇ ಮತ್ತೊಂದು ತೋಟಕ್ಕೆ ನುಸುಳಿ ಹಾನಿಪಡಿಸಿದೆ.

ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಇಲಾಖೆ ನಿರ್ಲಕ್ಷ್ಯ ವಹಿಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪ ಕೂಡ ಮಾಡಿದ್ದರು. ಇದೀಗ ಮತ್ತೆ ಕಾಡಾನೆಗಳ ಹಾವಳಿ ಗ್ರಾಮದ ಜನರ ನಿದ್ದೆಗೆಡಿಸಿದ್ದು ಜನರು ಓಡಾಡಲು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ.

ಇನ್ನಾದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು, ಅಥವಾ ಉನ್ನತ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅದರಂತೆ ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.