ಗೋಣಿಕೊಪ್ಪ:ಎನ್ ಸಿ ಸಿ ಕೆಡೆಟ್ ಗಳಿಗೆ ಬಂದೂಕು ತರಬೇತಿ, ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಗಾರ

ಪೊನ್ನಂಪೇಟೆ : ಎನ್ ಸಿ ಸಿ 19 ಕರ್ನಾಟಕ ಬೆಟಾಲಿಯನ್ ಮಡಿಕೇರಿ ಇದರ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಜನರಲ್ ತಿಮ್ಮಯ್ಯ ಫೈರಿಂಗ್ ರೇಂಜ್ ನಲ್ಲಿ ಬಂದೂಕು ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು . ಬೆಟಾಲಿಯನ್ ನ ಸಿ ಓ ಹಾಗೂ ಕ್ಯಾಂಪ್ ಕಮಾಂಡರ್ ಕರ್ನಲ್ ರಜತ್ ಮುಕುಂದನ್ ಅವರ ನೇತೃತ್ವದಲ್ಲಿ ಏಕತೆ ಮತ್ತು ಶಿಸ್ತು ಎಂಬ ದೈಯದೊಂದಿಗೆ ನಡೆಯುತ್ತಿರುವ ಶಿಬಿರದಲ್ಲಿ ಕೊಡಗು ಹಾಗೂ ದಕ್ಷಿಣ ಕನ್ನಡದ ವಿವಿಧ ಕಾಲೇಜುಗಳಿಂದ 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಬಗ್ಗೆ ಕ್ಯಾಂಪ್ ಕಮಾಂಡರ್ ಕರ್ನಲ್ ರಜತ್ ಮುಕುಂದನ್ ಅವರು ಮಾತನಾಡಿಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಬಂದೂಕು ತರಬೇತಿ, ನಾಯಕತ್ವ, ವ್ಯಕ್ತಿತ್ವ ವಿಕಸನ ತರಬೇತಿ, ಕ್ರೀಡಾ ಮನೋಭಾವ, ಸಮಾಜ ಸೇವೆ, ಸ್ವಚ್ಛತಾ ಅಭಿಯಾನದ ಬಗ್ಗೆ ಅರಿವು, ರಕ್ತದಾನದ ಬಗ್ಗೆ ಜಾಗೃತಿ, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸೇನೆಗೆ ಸೇರ ಬಯಸುವ ಕೆಡೆಟ್ ಗಳಿಗೆ ಸಂಬಂಧಿಸಿದ ಮಾಹಿತಿ ಕಾರ್ಯಾಗಾರ ನಡೆಸಲಾಗುತ್ತದೆ.
ಯುದ್ಧ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭ ಸೇನೆಗೆ ಎನ್ ಸಿ ಸಿ ಕೆಡೆಟ್ ಆಗಿ ಯಾವ ರೀತಿಯ ಸಹಕಾರ ನೀಡಬಹುದು ಎಂಬುದರ ಬಗ್ಗೆ, ಅತಿವೃಷ್ಟಿ ಪ್ರವಾಹ, ಸುನಾಮಿಯಂತಹ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ ಇನ್ನಿತರ ವಿಷಯಗಳ ಬಗ್ಗೆ ಶಿಬಿರದಲ್ಲಿ ಮಾಹಿತಿ ನೀಡಲಾಗುತ್ತದೆ. ಕೆಡೆಟ್ ಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ವಿಜ್ ಇನ್ನಿತರ ಸ್ಪರ್ಧೆಗಳ ಜೊತೆಗೆ ಶಿಸ್ತು, ಸಮಯ ಪಾಲನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಲೆಫ್ಟ್ನೆಂಟ್ ಕರ್ನಲ್ ಶ್ರೀನಿವಾಸನ್, ಸುಬೇದಾರ್ ಮೇಜರ್ ಸಿಜು, ಸುಬೇದಾರ್ ಬುದ್ಧರಾಮ್, ಸಿ ಹೆಚ್ ಎಂ ದೀಪಕ್ ಗುರುಂಗ್, ಗರ್ಲ್ಸ್ ಕೆಡೆಟ್ ಇನ್ಸ್ಟ್ರಕ್ಟರ್ ಜೀನ ಇನ್ನಿತರರು ಕೆಡೆಟ್ ಗಳಿಗೆ ತರಬೇತಿ ನೀಡುತ್ತಿದ್ದು, ಈ ಸಂದರ್ಭ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ, ಮೇಜರ್ ರಾಘವ, ಎ ಎನ್ ಓ ಗಳಾದ ಲೆಫ್ಟಿ ನೆಂಟ್ ಡಾ. ಎಂ. ಅರ್. ಆಕ್ರಂ, ಭವಿತ, ಚೀಫ್ ಆಫೀಸರ್ ದಾಮೋದರ್, ಎನ್ ಸಿ ಸಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.