ಮೇ 16 ಮತ್ತು 17ರಂದು ಜಿಲ್ಲಾ ಕುಲಾಲ (ಕುಂಬಾರ)ರ ಬೃಹತ್ ಸಮಾವೇಶ ಹಾಗೂ ಕ್ರೀಡೋತ್ಸವ
ಮಡಿಕೇರಿ: ಕೊಡಗು ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ನೇತೃತ್ವದಲ್ಲಿ ಬೃಹತ್ ಸಮಾವೇಶ ಹಾಗೂ ಕ್ರೀಡೋತ್ಸವ ಮೇ ೧೬,೧೭ರಂದು ಮಡಿಕೇರಿ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ಅಧ್ಯಕ್ಷ ಕೆ.ಕೆ.ದಾಮೋದರ್ ತಿಳಿಸಿದರು.
ಜಿಲ್ಲೆಯ ಮೂಲೆಮೂಲೆಗಳಿಂದ ೫೦೦೦ಕ್ಕೂ ಹೆಚ್ಚು ಕುಲಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ ಎಂದ ಅವರು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಡಾ.ಮಂತರ್ ಗೌಡ, ಎ.ಎಸ್.ಪೊನ್ನಣ್ಣ, ಚಿತ್ರನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಆಗಮಿಸಲಿದ್ದಾರೆ ಎಂದರು.
ಮೇ೧೬ರಂದು ಬೆಳಿಗ್ಗೆ ೭ಗಂಟೆಗೆ ಓಂಕಾರೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಕ್ರೀಡಾ ಜ್ಯೋತಿ ತಂದು ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಗುವುದು. ಕ್ರಿಕೆಟ್, ಹಗ್ಗಜಗ್ಗಾಟ, ಸಂಗೀತ ಕುರ್ಚಿ ಸೇರಿ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಮೇ೧೭ರಂದು ಸಮಾರೋಪ ಸಮಾರಂಭದಲ್ಲಿ ಸಂಘದ ಪ್ರಭಾರ ಅಧ್ಯಕ್ಷ ಲಯನ್ ದಾಮೋದರ್.ಕೆ.ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಕುಂಬಾರ ನಿಗಮ ಅಧ್ಯಕ್ಷ ಡಾ.ಶ್ರೀನಿವಾಸ್ ವೇಲು ಸೇರಿ ಇತರ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ಉಪಾಧ್ಯಕ್ಷ ಸುರೇಶ್, ಖಜಾಂಚಿ ಕೆ.ಎಸ್.ಗಿರೀಶ್, ನಿದೇರ್ಶಕರಾದ ರಾಮಚಂದ್ರ, ಕೆ.ವೈ.ಅಶ್ವತ್ ಇದ್ದರು.