ಪಾಳುಬಿಟ್ಟಿದ್ದ ಭತ್ತದ ಗದ್ದೆಗೆ ಮರುಜೀವ ತುಂಬಿದ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಕೃಷಿಕ ಪ್ರವೀಣ್ ಕುಶಾಲಪ್ಪ

ಮಡಿಕೇರಿ:ಪಾಳುಬಿಟ್ಟಿದ್ದ ಭತ್ತದ ಗದ್ದೆಯನ್ನು ಗುತ್ತಿಗೆ ಪಡೆದುಕೊಂಡು ಯಂತ್ರದ ಮೂಲಕ ನಾಟಿ ಮಾಡುವ ಮೂಲಕ ದಕ್ಷಿಣ ಕೊಡಗಿನಲ್ಲಿ ಕೃಷಿಕರೋರ್ವರು ಗಮನ ಸೆಳೆದಿದ್ದಾರೆ.ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಚೀನಿವಾಡ ಎಂಬಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಯಂತ್ರದ ಮೂಲಕ ಭತ್ತದ ಕೃಷಿಯಲ್ಲಿ ಕೃಷಿಕ ಮತ್ರಂಡ ಪ್ರವೀಣ್ ಕುಶಾಲಪ್ಪ ಎಂಬುವರು ತೊಡಗಿದ್ದಾರೆ. ಮಲಚ್ಚೀರ ರವಿ ಹಾಗೂ ಮುತ್ತಪ್ಪ ಎಂಬುವರಿಗೆ ಸೇರಿದ ಪಾಳು ಬಿಟ್ಟಿದ್ದ ಸುಮಾರು 15 ಏಕರೆ ಭತ್ತದ ಗದ್ದೆಯನ್ನು ಮತ್ರಂಡ ಪ್ರವೀಣ್ ಕುಶಾಲಪ್ಪ ಅವರು ಗುತ್ತಿಗೆಗೆ ಪಡೆದು, ಮಂಡ್ಯದ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ಅಲ್ಲಿಯೇ ತಯಾರಿಸಿದ ಆರ್.ಎನ್.ಆರ್ ಎಂಬ ಭತ್ತದ ಸಸಿ ಮಡಿಗಳನ್ನು ಹಾಗೂ ಭತ್ತದ ನಾಟಿ ಮಾಡುವ ಯಂತ್ರವನ್ನು ತರಿಸಿ ಭತ್ತದ ನಾಟಿ ಮಾಡುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕೃಷಿ ತಜ್ಞರು, ಯಂತ್ರದ ಮೂಲಕ ಭತ್ತದ ನಾಟಿಕಾರ್ಯ ಮಾಡುವ ಮೂಲಕ ಪಾಳುಬಿಟ್ಟಿದ್ದ ಭತ್ತದ ಗದ್ದೆಗೆ ಮರುಜೀವ ನೀಡುತ್ತಿರುವ ಕೃಷಿಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕೊಡಗು ಕೃಷಿ ವಿಜ್ಞಾನ ವೇದಿಕೆ ಮಾಜಿ ಅಧ್ಯಕ್ಷ ಡಾ. ಚೆಪ್ಪುಡಿರ ಕುಶಾಲಪ್ಪ ಅವರು, ಪ್ರವೀಣ್ ಅವರ ಪ್ರಯತ್ನಕ್ಕೆ ಕೃಷಿ ಇಲಾಖೆ, ಅರಣ್ಯ ಮಹಾ ವಿದ್ಯಾಲಯ ಮತ್ತು ಅಗ್ರಿಕಲ್ಚರ್ ಸೈನ್ಸ್ ಆಫ್ ಫೋರಂ ಕೊಡಗು ಸಂಸ್ಥೆ ಕೈಜೋಡಿಸಿದೆ. ರೈತರು ಸದಾ ಕಾರ್ಮಿಕರ ಸಮಸ್ಯೆಗಳು ಇದೆ ಎಂದು ಹೇಳುತ್ತಾರೆ. ಆದರೆ ಪ್ರವೀಣ್ ಅವರು ಮಂಡ್ಯದ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ಅಲ್ಲಿಯೇ ತಯಾರಿಸಿದ ಆರ್ ಎನ್ ಆರ್ ಎಂಬ ಭತ್ತದ ಸಸಿ ಮಡಿಗಳನ್ನು ಹಾಗೂ ಭತ್ತದ ನಾಟಿ ಮಾಡುವ ಯಂತ್ರವನ್ನು ತರಿಸಿ ಬೇಗೂರಿನಂತ ಕುಗ್ರಾಮದಲ್ಲಿ ಕೃಷಿ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ. ಜಿಲ್ಲೆಯ ರೈತರು ಕೃಷಿ ಇಲಾಖೆ, ಸಂಘ ಸಂಸ್ಥೆಗಳು ಹಾಗೂ ಯಂತ್ರೋಪಕರಣಗಳ ಸಹಾಯದಿಂದ ಪಾಳು ಬಿಟ್ಟ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಬೇಕು ಎಂದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಆರ್. ಎನ್ ಕೆಂಚರೆಡ್ಡಿ ಅವರು ಮಾತನಾಡಿ, ಇತ್ತಿಚಿನ ವರ್ಷಗಳಲ್ಲಿ ಭತ್ತದ ಕೃಷಿ ಬಹಳ ಕಡಿಮೆಯಾಗಿದೆ. ಸಮರ್ಪಕವಾದ ರೀತಿಯಲ್ಲಿ ಭತ್ತದ ಕೃಷಿಯನ್ನು ಮಾಡಿದಾಗ ಲಾಭದಾಯಕವಾಗಿರುತ್ತದೆ. ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಯಂತ್ರಿಕೃತ ಕೃಷಿಯ ಮೊರೆ ಹೋಗುವುದರಿಂದ ಭತ್ತದ ಬೇಸಾಯದ ಖರ್ಚು ವೆಚ್ಚ ಕಡಿಮೆಯಾಗುತ್ತದೆ ಹಾಗೂ ಉತ್ತಮ ಫಸಲು ದೊರೆಯುತ್ತದೆ. ಭತ್ತದ ಕೃಷಿ ಕೇವಲ ಆಹಾರಕ್ಕಾಗಿ ಅಲ್ಲದೆ ಜಲಮೂಲಗಳ ಸಂರಕ್ಷಣೆಗಾಗಿಯೂ ಮಾಡಬೇಕಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾಕ್ಟರ್ ವೀರೇಂದ್ರ ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಭತ್ತದ ಬೆಳೆ ಬೆಳೆಯುವುದು ಕಡಿಮೆಯಾಗಿದೆ. ವಿಶೇಷವಾಗಿ ಪ್ರವೀಣ್ ಅವರು ಪಾಳು ಬಿಟ್ಟಿರುವ ಗದ್ದೆಗಳನ್ನು ಗುತ್ತಿಗೆಗೆ ಪಡೆದುಕೊಂಡು ಯಾಂತ್ರಿಕೃತ ಕೃಷಿಯ ಮೂಲಕ ಆರ್ ಎನ್ ಆರ್ ಎಂಬ ಭತ್ತದ ತಳಿಯನ್ನು ಹೊಸದಾಗಿ ತಂದು ನಾಟಿ ಮಾಡಿಸುತ್ತಿದ್ದಾರೆ. ಈ ತಳಿಯನ್ನು ತೆಲಂಗಾಣ ಸೋನಾ ಎಂದು ಕೂಡ ಕರೆಯುತ್ತಾರೆ ಸೋನಾ ಮಸೂರಿ ಅಕ್ಕಿಯಂತೆ ಇರುವ ಈ ತಳಿಯು ಬೆಂಕಿ ರೋಗವನ್ನು ತಡೆದುಕೊಂಡು ಕಡಿಮೆ ಅವಧಿಯಲ್ಲಿ ಅಂದರೇ 115 ರಿಂದ 120 ದಿನಗಳಲ್ಲಿ ಬೆಳೆಯುತ್ತದೆ. ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ. ಚಂದ್ರಶೇಖರ ಅವರು ಮಾತನಾಡಿ, ಕಳೆದ ಹತ್ತು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ 50 ಹೆಕ್ಟೇರ್ ಭತ್ತದ ಕೃಷಿ ಕಾಣಸಿಗುತ್ತಿತ್ತು ಆದರೆ ಕಳೆದ 5 ವರ್ಷಗಳಿಂದ ಕೇವಲ 20 ರಿಂದ 30 ಹೆಕ್ಟೇರ್ ಭತ್ತದ ಕೃಷಿ ಭೂಮಿ ಕಾಣಸಿಗುತ್ತದೆ ಕಾರಣ ಕಾರ್ಮಿಕರ ಸಮಸ್ಯೆ, ಹೆಚ್ಚಾಗಿ ಮಳೆ ಬೀಳುವುದು ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಭತ್ತದ ಕೃಷಿ ಕಡಿಮೆಯಾಗುತ್ತಿದೆ. ಭತ್ತ ಬೆಳೆಯುವ ಕೃಷಿ ಭೂಮಿ ಹೆಚ್ಚಾಗಬೇಕೆಂಬ ರೈತರ ಕೂಗಿಗೆ ಓಗೊಟ್ಟು ಕೃಷಿ ವಿಜ್ಞಾನ ಕೇಂದ್ರ, ಅರಣ್ಯ ಮಹಾವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರ ಒಟ್ಟಾಗಿ ಸುಮಾರು 200 ಹೆಕ್ಟೇರ್ ಭತ್ತ ಬೆಳೆಯುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಮಂಡ್ಯ ಜಿಲ್ಲೆಯ ಕೃಷಿ ವಿಶ್ವ ವಿದ್ಯಾಲಯದ ವಲಯ ಕೃಷಿ ಸಂಶೋಧನ ಕೇಂದ್ರದ ಕ್ರಿಯಾಬದ್ದ ತಳಿ ವಿಜ್ಞಾನಿ ಎಚ್. ವಿ. ಮನೋಜ್ ಕುಮಾರ್ ಅವರು ಮಾತನಾಡಿ, ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಮೊದಲ ಬಾರಿಗೆ ಯಾಂತ್ರಿಕೃತ ಕೃಷಿ ಬೇಸಾಯವನ್ನು ಆರಂಭಿಸಿದ್ದೇವೆ. ಕಾರ್ಮಿಕರ ಸಮಸ್ಯೆಯನ್ನು ನೀಗಿಸಲು ರೈತರು ಯಾಂತ್ರಿಕೃತ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಆರ್ ಏನ್ ಆರ್ ತಳಿಯು ಅತ್ಯಧಿಕ ಇಳುವರಿಯನ್ನು ನೀಡುತ್ತದೆ. ಈ ಯಂತ್ರದ ಮುಖಾಂತರ ಒಂದು ದಿನಕ್ಕೆ ನಾಲ್ಕು ಎಕರೆ ಭತ್ತದ ನಾಟಿಯನ್ನು ಮಾಡಬಹುದು. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿರುವಂತೆ ಇಲ್ಲಿಯೂ ಕೂಡ ದಕ್ಷ ಯಂತ್ರ ನಾಟಿ ಕೇಂದ್ರವನ್ನು ಸ್ಥಾಪಿಸಿ ಅತಿಹೆಚ್ಚಿನ ಭೂಮಿಯನ್ನು ಕೃಷಿಗೆ ಒಳಪಡುವಂತೆ ಮಾಡುವ ಉದ್ದೇಶ ಇದೆ ಎಂದರು.
ಗ್ರಾಮಸ್ಥ ಹಾಗೂ ಕೃಷಿಕ ಮತ್ರಂಡ ಪ್ರವೀಣ್ ಕುಶಾಲಪ್ಪ ಅವರು ಮಾತನಾಡಿ, ಹಲವಾರು ವರ್ಷಗಳಿಂದ ಭತ್ತದ ಕೃಷಿ ಮಾಡುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಕಾರ್ಮಿಕರ ಅಭಾವವಿದೆ. ಇದೇ ಪ್ರಥಮ ಬಾರಿಗೆ ಕೊಡಗಿನಲ್ಲಿ ಮಂಡ್ಯ ಜಿಲ್ಲೆಯ ಕೃಷಿ ವಿಜ್ಞಾನಿಗಳೊಂದಿದೆ ಮೇಕನೈಸಲ್ ಕೃಷಿ ಮಾಡಲಾಗುತ್ತಿದ್ದು, ವನ್ಯ ಪ್ರಾಣಿಗಳಿಂದ ಕೃಷಿ ಫಸಲು ನಷ್ಟವಾಗದಂತೆ ತಡೆಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಂಡಲ್ಲಿ ಹಲವಾರು ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಗದ್ದೆಯ ಮಾಲೀಕರಾದ ಮಲಚೀರ ರವಿ, ಮುತ್ತಪ್ಪ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕರಾದ ನಾಣಯ್ಯ, ಡಾಕ್ಟರ್ ಪ್ರಶಾಂತ್, ಡಾಕ್ಟರ್ ನಿಂಗರಾಜ್ ದಳವಾಯಿ, ಡಾಕ್ಟರ್ ಜಡೇ ಗೌಡ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಉಪ ಕೃಷಿ ನಿರ್ದೇಶಕ ಡಾಕ್ಟರ್ ಸೋಮಶೇಖರ್, ಸಹಾಯಕ ಕೃಷಿ ನಿರ್ದೇಶಕರಾದ ನಾಗೇಂದ್ರ, ಪರಮೇಶ್, ಕೃಷಿ ಅಧಿಕಾರಿ ಮೀರಾ, ಪೃಥ್ವಿ , ಮಂಡ್ಯ ಕೃಷಿ ವಿಶ್ವವಿದ್ಯಾನಿಲಯದ ನಿರ್ದೇಶಕ ಸಂಕೇತ್ ಅಶೋಕ್, ಯಂತ್ರ ಚಾಲಕ ಮಹೇಶ್, ಸಹಾಯಕರಾದ ಚಂದನ್, ಪ್ರಮೋದ್, ಶಶಾಂಕ್ ಇದ್ದರು.
ವಿಶೇಷ ವರದಿ: ಚಂಪಾ ಗಗನ, ಪೊನ್ನಂಪೇಟೆ.