ಮಕ್ಕಂದೂರು ಪ್ರೌಢಶಾಲಾ ಮಕ್ಕಳಿಗೆ ಮಲೇರಿಯಾ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಕಾರ್ಯಕ್ರಮ

ಮಕ್ಕಂದೂರು ಪ್ರೌಢಶಾಲಾ ಮಕ್ಕಳಿಗೆ ಮಲೇರಿಯಾ ಹಾಗೂ ಸಾಂಕ್ರಾಮಿಕ ರೋಗಗಳ  ಕುರಿತು ಅರಿವು  ಕಾರ್ಯಕ್ರಮ

ಮಡಿಕೇರಿ :ಮಕ್ಕಂದೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಮಲೇರಿಯಾ ವಿರೋಧ ಮಾಸಾಚಾರಣೆ ಹಾಗೂ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಮುಂಜಾಗ್ರತ ಕ್ರಮಗಳ ಕುರಿತು ಆರೋಗ್ಯ ಅರಿವು ಮೂಡಿಸಲಾಯಿತು.

  ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ರವರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಮಾಹಿತಿ ನೀಡುತ್ತಾ ಮಲೇರಿಯಾ, ಡೆಂಗ್ಯೂ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆ ಕುರಿತು ತಿಳಿಸಿ ರೋಗ ಲಕ್ಷಣಗಳು ಮತ್ತು ಮಹತ್ವದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ರು. ಶಾಲಾ ಅಡಿಗೆ ಕೊಠಡಿ ಪರಿಸರ, ಪರಿಕರಗಳ ಸ್ವಚ್ಚತೆ, ಅಯೋಡಿನ್ ಯುಕ್ತ ಉಪ್ಪಿನ‌ ಮಹತ್ವ ಬಗ್ಗೆ ಹಾಗೂ ಮಕ್ಕಳಿಗೆ ಮನೆ ಮತ್ತು ಶಾಲೆ ಅವರಣದಲ್ಲಿ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಮೂಲದಲ್ಲಿ ಲಾರ್ವಾ ನಿರ್ಮೂಲನೆ ಮಾಡುವ ಮೂಲಕ ಡೆಂಗ್ಯೂನಂತ ಜ್ವರಗಳ ನಿಯಂತ್ರಿಸಲು ಮುಂದಾಗುವಂತೆ ಹಾಗೂ ಮನೆಯಲ್ಲಿ ಶೇಖರಿಸುವ ನೀರಿನ ತೊಟ್ಟಿ ಡ್ರಮ್ಮುಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಚಗೊಳಿಸಿ ಒಣಗಿಸಿ ನೀರು ತುಂಬಿಸುವುದು ಮತ್ತು ಮುಚ್ಚಳದಿಂದ ಮುಚ್ಚುವಂತೆ ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್ ಪಾಲಾಕ್ಷ ಮಾತನಾಡಿ 14 ವರ್ಷದಿಂದ 15 ವರ್ಷ ಒಳಪಟ್ಟ ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಪ್ಪಿಸಲು ಎಚ್ ಪಿ ವಿ ವ್ಯಾಕ್ಸಿನೇಷನ್ ನೀಡಿಸುವಂತೆ ಪೋಷಕರಿಗೆ ತಿಳಿಸಿದರು.ನೂರು ದಿನಗಳ ಟಿಬಿ ಕ್ಯಾಂಪೇನ್ ನ ಬಗ್ಗೆ ಮತ್ತು ನಶಮುಕ್ತ ಭಾರತ ಅಭಿಯಾನದ ಮಹತ್ವ ಹಾಗೂ ಇದೇ ತಿಂಗಳ 28ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮದಲ್ಲಿ 0-5 ವರ್ಷದ ಎಲ್ಲಾ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಆರೋಗ್ಯದ ಮಾಹಿತಿ ನೀಡಿದರು.

ಶಾಲಾ ಮುಖ್ಯ ಶಿಕ್ಷಕರಾದ ಹರೀಣಾಕ್ಷಿ.ಪಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾ ಶಿಕ್ಷಕರಾದ ವನಜಾಕ್ಷಿ, ಪೂರ್ಣಿಮಾ ಮತ್ತು ರತಿ ಕುಮಾರಿ, ಎಂ ಸಹನ‌ ರವರು ಹಾಜರಿದ್ದರು.