ಅರೆಸೇನಾಪಡೆಯ ನಿವೃತ್ತ ಯೊಧರಿಗೆ ಕ್ಯಾಂಟೀನ್ ಹಾಗೂ ಸೈನಿಕ ಸ್ಮಾರಕ ಭವನ ನಿರ್ಮಾಣ ಮಾಡಲು ಸೂಕ್ತ ಜಾಗಕ್ಕೆ ಆಗ್ರಹ
ಕಣಿವೆ : ಕೊಡಗು ಜಿಲ್ಲೆಯಲ್ಲಿ ಇರುವ ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟಕ್ಕೆ ಸೂಕ್ತ ಸ್ಥಳಾವಕಾಶ ನೀಡಬೇಕೆಂದು ಆಗ್ರಹಿಸಿ ಯೋಧರ ಒಕ್ಕೂಟದ ವತಿಯಿಂದ ಕುಶಾಲನಗರದ ಪುರಸಭೆಗೆ ಮನವಿ ಸಲ್ಲಿಸಿ ಸಂಬಂಧಿಸಿದ ಸರ್ಕಾರಿ ಜಾಗವನ್ನು ಪುರಸಭೆಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಲಾಯಿತು. ನಿವೃತ್ತ ಯೋಧರ ಒಕ್ಕೂಟದ ಅಧ್ಯಕ್ಷರಾದ ಎಂ.ಜಿ.ಯತೀಶ್, ಸಂಚಾಲಕರಾದ ನೂರೇರಾ ಭೀಮಯ್ಯ ನೇತೃತ್ವದಲ್ಲಿ 20 ಕ್ಕೂ ಹೆಚ್ಚಿನ ಯೋಧರು ಪುರಸಭೆ ಕಛೇರಿಗೆ ಧಾವಿಸಿ ಒಕ್ಕೂಟದಿಂದ ಈಗಾಗಲೇ ಗುರುತಿಸಿರುವ ಜಾಗವನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕೆಂದು ಪುರಸಭೆಯ ಅಧಿಕಾರಿಗಳಿಗೆ ಕೋರಲಾಯಿತು. ಮುಳ್ಳುಸೋಗೆಯ ಸರ್ವೆ ನಂಬರ್ 11/1 ರಲ್ಲಿ 60 ಸೆಂಟು ಸರ್ಕಾರಿ ( ಪೈಸಾರಿ ) ಜಾಗವಿದ್ದು ಇದನ್ನು ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟಕ್ಕೆ ಹಸ್ತಾಂತರಿಸಬೇಕೆಂದು ಯೋಧರ ಒಕ್ಕೂಟ ಒತ್ತಾಯಿಸಿತು. ಕೊಡಗು ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಅರೆಸೇನಾಪಡೆಯ ಹಾಲೀ ಮತ್ತು ನಿವೃತ್ತ ಯೋಧರಿದ್ದಾರೆ. ಈವರೆಗೆ ನಮ್ಮ ಒಕ್ಕೂಟಕ್ಕೆ ಕೊಡಗು ಜಿಲ್ಲಾಡಳಿತ ಸೂಕ್ತ ಜಾಗವನ್ನು ನೀಡಿಲ್ಲ. ಅರೆಸೇನಾಪಡೆಯಲ್ಲಿ ಸೇವೆಗೆ ಸೇರಿದ ನಾವುಗಳು ದೇಶದ ವಿವಿಧ ಭಾಗಗಳ ಸೂಕ್ಷ್ಮ, ಅತಿ ಸೂಕ್ಷ್ಮ, ಭೌಗೋಳಿಕ ಪ್ರದೇಶಗಳಲ್ಲಿ ವಿಭಿನ್ನ ವಾತಾವರಣದಲ್ಲಿ ಗಡಿರಕ್ಷಣೆ, ಆಂತರಿಕ ಸುರಕ್ಷತೆ, ನಕ್ಸಲ್, ಉಗ್ರಪೀಡಿತ ಹಾಗೂ ಯುದ್ದಪೀಡಿತ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಜೀವದ ಹಂಗು ತೊರೆದು ಸೇವೆ ಗೈದ ನಮ್ಮನ್ನು ಸರ್ಕಾರ ಪರಿಗಣಿಸಿ ಸೂಕ್ತ ಸವಲತ್ತು ಒದಗಿಸಬೇಕು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರ್ಕಾರಿ ಜಾಗದ ಅಲಭ್ಯದ ಕಾರಣ ಕುಶಾಲನಗರದ ನಿವೃತ್ತ ಯೋಧ ಜಿ.ಕೆ.ದಿನೇಶ ಕುಮಾರ್ ಅವರ ಪ್ರಯತ್ನದಿಂದಾಗಿ ಮುಳ್ಳುಸೋಗೆಯಲ್ಲಿ ಗುರುತಿಸಿರುವ ಜಾಗವನ್ನು ಸಂಘಕ್ಕೆ ದೊರಕಿಸಬೇಕೆಂದು ಒಕ್ಕೂಟದ ಜಿಲ್ಲಾ ಸಂಚಾಲಕರಾದ ನೂರೇರಾ ಎಂ.ಎನ್.ಭೀಮಯ್ಯ ಒತ್ತಾಯಿಸಿದರು. ಕೊಡಗು ಜಿಲ್ಲೆಯಲ್ಲಿ ಇರುವ ಅರೆಸೇನಾಪಡೆಯ ಯೋಧರಿಗೆ ಕೇಂದ್ರ ಸರ್ಕಾರ ನೀಡುವ ಸೇನಾ ಕ್ಯಾಂಟೀನ್ ಕೋಟಾ ಹಾಗೂ ಮಿಲಿಟರಿ ಮದ್ಯವನ್ನು ಖರೀದಿಸಲು ದೂರದ ಬೆಂಗಳೂರಿಗೆ ಹೋಗಬೇಕಿರುವ ಕಾರಣ ಜಿಲ್ಲಾ ಕೇಂದ್ರದಲ್ಲಿ ನಮಗೆ ಅನುಕೂಲ ವಾಗುವ ಹಾಗೆ ಕ್ಯಾಂಟೀನ್ ತುರ್ತು ಅಗತ್ಯವಿದೆ. ಹಾಗೆಯೇ ಅರೆಸೇನಾಪಡೆಯ ಒಕ್ಕೂಟದ ಜಿಲ್ಲಾ ಕಛೇರಿ ಮಡಿಕೇರಿಯ ಮಹದೇವಪೇಟೆಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಾರಣ ಕುಶಾಲನಗರದಲ್ಲಿ ಇರುವ ಸರ್ಕಾರಿ ಜಾಗವನ್ನು ನೀಡಿದಲ್ಲಿ ಸ್ವಂತ ಕಛೇರಿ ಹಾಗೂ ಸೈನಿಕ ಸ್ಮಾರಕ ಭವನ ನಿರ್ಮಾಕ್ಕೆ ಅನುಕೂಲವಾಗಲಿದೆ ಎಂದು ಸಂಘದ ನಿರ್ದೇಶಕ ಜಿ.ಕೆ.ದಿನೇಶ್ ಕುಮಾರ್ ಒತ್ತಾಯಿಸಿದರು. ಹಾಗೆಯೇ ಗೊಂದಿಬಸವನಹಳ್ಳಿ ಗ್ರಾಮದ 18/4 ಹಾಗೂ 19/1 ರಲ್ಲಿ ಸುಮಾರು ನಾಲ್ಕು ಎಕರೆ ಜಾಗವನ್ನು ಗುರುತಿಸಲಾಗಿದ್ದು ಅಲ್ಲಿ ನಮ್ಮ ನಿವೃತ್ತ ಸೈನಿಕರಿಗೆ ನಿವೇಶನ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ದಿನೇಶ್ ಕುಮಾರ್ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಅರೆಸೇನಾಪಡೆಯ ನಿವೃತ್ತ ಯೋಧರು ಜಿಲ್ಲೆಯಲ್ಲಿ 80 ವರ್ಷ ದಾಟಿದವರು ಹಾಗೂ ಬಹಳಷ್ಟು ಮಂದಿ ವಿಧವಾ ಮಹಿಳೆಯರು ಕೂಡ ಇದ್ದೂ ಅವರು ಬೆಂಗಳೂರಿಗೆ ಹೋಗಿ ಸೇನಾ ಕೋಟಾದ ಪರಿಕರ ತರಲು ಕಷ್ಟಕರವಾದ್ದರಿಂದ ಸರ್ಕಾರ ನಮ್ಮ ಅಹವಾಲು ಪರಿಗಣಿಸಬೇಕೆಂದು ಒಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್ ಒತ್ತಾಯಿಸಿದರು. ಈ ಸಂದರ್ಭ ಕುಶಾಲನಗರ ಪುರಸಭೆ ಕಂದಾಯ ಅಧಿಕಾರಿ ರಾಮು, ಒಕ್ಕೂಟದ ಸಲಹೆಗಾರರೂ ಆದ ಡೆಪ್ಯೂಟಿ ಕಮಾಂಡೆಂಟ್ ಕೆ.ಎಸ್.ಆನಂದ್, ಪದಾಧಿಕಾರಿಗಳಾದ ಬಿ.ಎನ್.ರಾಜಶೇಖರ, ಬಿ.ಎಂ.ರವೀಂದ್ರ, ಎ.ಎ.ಮಂದಣ್ಣ, ಬಿ.ಯು.ಲೋಕೇಶ, ಸಿ.ಕೆ.ರಾಜನ್, ವಿನೋದ ಕುಮಾರ್, ಡಬ್ಲ್ಯೂ.ಎಂ.ಪೂಣಚ್ಚ, ತಿರುಪತಿ, ಎಂ.ಎನ್.ಗೋಪಾಲಕೃಷ್ಣ, ಬಿ.ಟಿ.ರೂಪ, ಮರ್ವಿನ್ ಕೊರಿಯಾ, ಬಿ.ವಿ.ಧನಂಜಯ ಇದ್ದರು.