ಮನುಷ್ಯ ಮಾತ್ರ ಅಲ್ಲ, ಸಕಲ ಜೀವರಾಶಿಗೆ ಉತ್ತಮವಾದ ವಾತಾವರಣದಲ್ಲಿ ಜೀವಿಸಲು ಪರಿಸರದ ಸಂರಕ್ಷಣೆ ಅತ್ಯಗತ್ಯ: ಶಾಸಕ ಎಎಸ್ ಪೊನ್ನಣ್ಣ
ಪೊನ್ನಂಪೇಟೆ; ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಪೊನ್ನಂಪೇಟೆ ಜೂನಿಯರ್ ಕಾಲೇಜಿನಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಮೊದಲಿಗೆ ಶಾಸಕರು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಅರ್ಥಗರ್ಭಿತವಾದ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಆಧುನಿಕತೆಯ ಭರದಲ್ಲಿ ಸಾಗುತ್ತಿರುವ ಇಂದಿನ ಪ್ರಪಂಚದಲ್ಲಿ ಪರಿಸರದ ಸಂರಕ್ಷಣೆಗೆ ಅತ್ಯಂತ ಮಹತ್ವ ಬಂದಿದೆ. ಮನುಷ್ಯ ಮಾತ್ರ ಅಲ್ಲ ಸಕಲ ಜೀವರಾಶಿಗೆ ಉತ್ತಮವಾದ ವಾತಾವರಣದಲ್ಲಿ ಜೀವಿಸಲು ಪರಿಸರದ ಸಂರಕ್ಷಣೆ ಅತ್ಯಂತ ಪ್ರಾಮುಖ್ಯತೆ ಹೊಂದಿದೆ. ಆದ್ದರಿಂದ ಭವಿಷ್ಯದ ನಮ್ಮ ನಾಡು ಹಾಗೂ ಪ್ರಪಂಚದ ಉಳಿವಿಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯತ್ತ ಗಮನಹರಿಸಬೇಕೆಂದು ಕರೆ ನೀಡಿದರು. ಉಸಿರಾಡಲು ಶುದ್ಧವಾದ ಗಾಳಿ ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಶುಚಿತ್ವ ಕಾಪಾಡಲು ಪ್ರತಿಯೊಬ್ಬರು ಜವಾಬ್ದಾರಿ ವಹಿಸಿಕೊಳ್ಳಬೇಕು.
ಶುಚಿತ್ವ ಇರುವ ಸಮಾಜ ಸ್ವಸ್ಥ ಸಮಾಜ ವಾಗಿರುತ್ತದೆ ಎಂದು ಮಾನ್ಯ ಶಾಸಕರು ತಿಳಿಹೇಳಿದರು. ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರು ಆಲಿರ ರಶೀದ್, ಹಿರಿಯರು ಮುಕಳೇರ ಕುಶಾಲಪ್ಪ, ಎರ್ಮು ಹಾಜಿ, ರಾಜು, ಪಕ್ಷದ ಮುಖಂಡರು ಸಾಜಿ ಅಚ್ಚುತನ್, ತಿತೀರ ಮಂದಣ್ಣ, ಹ್ಯಾರೀಶ್, ಸದಲಿ, ತಹಶೀಲ್ದಾರ್ ಸಂಜನಾ, ಅರಣ್ಯ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

