ಶಾಂತಿಯುತ ಸಭೆ,ಮೆರವಣಿಗೆ ಅನುಮತಿಗಾಗಿ 1500 ರೂ ಪಾವತಿಸುವ ಸರ್ಕಾರದ ಆದೇಶ ಹಾಸ್ಯಾಸ್ಪದ: ವಿರಾಜಪೇಟೆ ನಾಗರಿಕ ಸಮಿತಿ
ವಿರಾಜಪೇಟೆ: ಮೆರವಣಿಗೆ, ಸಭೆಗಳು ಮತ್ತು ಹೋರಾಟಗಳು ಮಾಡುವುದಕ್ಕೆ ಸಂವಿಧಾನದಲ್ಲಿ ಹಕ್ಕು ನೀಡಲಾಗಿದೆ. ಆದರೆ ಇಂದಿನ ಪ್ರಸ್ತುತ ಸರ್ಕಾರದ ಖಾಜಾನೆಯಲ್ಲಿ ಹಣ ಖಾಲಿಯಾಗಿರುವುದು ಖಾತ್ರಿಯಾಗಿದೆ. ಹಣ ತುಂಬಿಸಲು ಸಾರ್ವಜನಿಕರ ಮೇಲೆ ವಿವಿಧ ರೂಪದಲ್ಲಿ ಹೊರೆಯಾಗಿಸುತ್ತಿರುವುದು ಹೊಸ ವರಸೆಯಾಗಿದೆ ಎಂದು ನಾಗರಿಕ ಸಮಿತಿ ವಿರಾಜಪೇಟೆ ಆರೋಪಿಸಿದೆ. ನಾಗರಿಕ ಸಮಿತಿ ವಿರಾಜಪೇಟೆ ವತಿಯಿಂದ ತಮ್ಮ ಗೃಹ ಕಛೇರಿಯಲ್ಲಿ ಸರ್ಕಾರದ ಆದೇಶವಾದ ಶಾಂತಿಯುತ ಸಭೆ, ಮೆರವಣಿಗೆಗಾಗಿ ಅನುಮತಿಗಾಗಿ 1500 ರೂ ಬಗ್ಗೆ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.
ಈ ಸಂದರ್ಭ ಮಾತನಾಡಿದ,ನಾಗರಿಕ ಸಮಿತಿಯ ಸಂಚಾಲಕರಾದ ಡಾ. ಇ.ಆರ್. ದುರ್ಗಪ್ರಸಾದ್ ಅವರು, ವಿರಾಜಪೇಟೆ ನಗರದಲ್ಲಿ ಮುಂದಿನ ದಿನಗಳಲ್ಲಿ ಇತಿಹಾಸ ಪ್ರಸಿದ್ದ ಗೌರಿ-ಗಣೇಶೋತ್ಸವ ಆಚರಣೆಗಳು ನಡೆಯಲಿದೆ. ಸಮಿತಿಗಳು ವಿವಿಧ ಇಲಾಖೆಗಳಿಂದ ಅನುಮತಿಗಾಗಿ ನಿರಾಕ್ಷೇಪಣಾ ಪತ್ರ ಕೋರಿ ಆರ್ಜಿ ಸಲ್ಲಿಸುತಿದ್ದಾರೆ. ಈ ಸಂದರ್ಭದಲ್ಲಿ ಆರಕ್ಷಕ ಠಾಣೆಯ ಸಿಬ್ಬಂದಿಗಳು ಅರ್ಜಿಯೊಂದಿಗೆ 1500 ರೂ ನೀಡುವಂತೆ ಸಮಿತಿ ಸದಸ್ಯರಿಗೆ ತಿಳಿಸುತಿದ್ದಾರೆ. ಈ ಹಿಂದೆ ಧ್ವನಿವರ್ಧಕ ಅಳವಡಿಸಲು 180 ರೂ ನೀಡುವ ಪರಿಪಾಠವಿತ್ತು. ಅದರೆ ಪ್ರಸ್ತುತ ಸರ್ಕಾರವು ಧಾರ್ಮಿಕ ಉತ್ಸವ, ಮದುವೆ, ಧರ್ಮದ ಮೆರವಣಿಗೆ ಹೀಗೆ ಹಲವು ವಿಷಯಗಳಿಗೆ ಶುಲ್ಕ ವಿಧಿಸಿರುವುದು ಹಾಸ್ಯಸ್ಪದವಾಗಿದೆ. ಮುಂದೊಂದದು ದಿನ ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡಲು ಶುಲ್ಕ ವಿಧಿಸಬಹದು ಈ ಸರ್ಕಾರ ಎಂದು ವ್ಯಂಗ್ಯವಾಡಿದರು.
ಸರ್ಕಾರದ ಅಧಿಕೃತ ಜ್ಞಾಪನ ಪತ್ರ ಸಂಖೆಯ ಬಿಯುಡಿ 06/32/2023-24 ವಿಷಯ ಧ್ವನಿವರ್ಧಕ, ಶಾಂತಿಯುತ ಸಭೆ ವಸತಿ ಮತ್ತು ವಸತಿಯೇತರ ಇತ್ಯಾದಿಗಳಿಗಾಗಿ ನಿರಾಕ್ಷೇಪಣಾ ಪತ್ರ ನೀಡಲು ಶುಲ್ಕ ಪರಿಷ್ಕರಣೆ ಮಾಡುವ ಬಗ್ಗೆ. ಪತ್ರದಲ್ಲಿ ನಿಯಮ ಕ್ರಮ ಸಂಖ್ಯೆ 02 ರಲ್ಲಿ ಉಲ್ಲೇಖವಾದಂತೆ ಶಾಂತಿಯುತ ಸಭೆ ಮತ್ತು ಮರೆವಣಿಗೆಗಾಗಿ ಅನುಮತಿ ಪ್ರಸ್ತುತ ದರ 500 ಅರ್ಥಿಕ ಇಲಾಖೆ ಸೂಚಿಸಿರುವ ದರ ಹೆಚ್ಚಳ ಮಾಡಿದ್ದು, ಇದು ಬರಿದಾದ ಬೊಕ್ಕಸವನ್ನು ತೆರಿಗೆ ಮೂಲಕ ತುಂಬಿಸುವ ಪ್ರಯತ್ನವಾಗಿದೆ. ಜನಸಮಾನ್ಯರ ಮೇಲೆ ಆರ್ಥಿಕ ಹೊರೆಯಾಗಿರುವುದರಿಂದ ಆದೇಶವನ್ನು ಕೈಬಿಡಬೇಕು ಎಂದು ನಾಗರಿಕ ಸಮಿತಿಯು ಸರ್ಕಾರವನ್ನು ಒತ್ತಾಯ ಮಾಡುತ್ತಿದೆ ಎಂದು ಹೇಳಿದರು.
ನಾಗರಿಕ ಸಮಿತಿಯ ಸಹ ಸದಸ್ಯರಾದ ವಕೀಲ ಸೋಮ ಲೋಕನಾಥ ಅವರು ಮಾತನಾಡಿ, ನಗರದಲ್ಲಿ ಮತ್ತು ಜಿಲ್ಲೆಯ ವಿವಿಧಡೆಗಳಲ್ಲಿ ಉತ್ಸವ ಆಚರಿಸುವ ಸಮಿತಿಗಳು ಆರ್ಥಿಕವಾಗಿ ಹಿಂದುಳಿದೆ. ಧರ್ಮ ಉಳಿಯಬೇಕು ಮತ್ತು ಸಂಸ್ಕಾರ, ಹಾಗೂ ಆಚರಣೆಗಳು ಚಿರಂಜಖವಿಯಾಗಿರಬೇಕು ಎನ್ನುವ ಆಶಾಯದೊಂದಿಗೆ ಉತ್ಸವ ಆಚರಣೆಯಾಗುತ್ತಿದೆ. ಆದರೆ ಧರ್ಮದಾಚರಣೆಗೂ ತೆರಿಗೆ ವಿಧಿಸಿರುವುದು ಸರ್ಕಾರವು ಸಂಪೂರ್ಣ ಆಚರಣೆಗೆ ವಿರುದ್ದವಾಗಿದೆ ಎಂಬುದಾಗಿ ಭಾಸವಾಗುತ್ತದೆ. ಮೆರವಣಿಗೆ ಮತ್ತು ಶಾಂತಿ ಸಭೆ ನಡೆಸಲು ಆರ್ಥಿಕ ಇಲಾಖೆಯು ಶುಲ್ಕ ವಿಧಿಸಿರುವುದು ಸಂವಿಧಾನ ವಿರುದ್ದವಾಗಿದೆ. ಪ್ರಸ್ತುತ ಸರ್ಕಾರವು ಹಿಂದೂ ಧರ್ಮ ಆಚರಣೆಯ ವಿರುದ್ದವಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು. ಸರ್ಕಾರವು ಹಲವು ಬಿಟ್ಟಿ ಭಾಗ್ಯಗಳನ್ನು ನೀಡುತ್ತಾ ಬೊಕ್ಕಸ ಬರಿದಾಗಿರುವುದರಿಂದ ತೆರಿಗೆಯ ವಿವಿಧ ಮಜಲುಗಳನ್ನು ಹುಡುಕುತ್ತಾ ಜನಸಮಾನ್ಯರ ಮೇಲೆ ಆರ್ಥಿಕ ಹೊರೆ ಹೊರಿಸಲು ಮುಂದಾಗಿರುವುದು ಶೋಚನೀಯ ಎಂದರು. ಜನಸಮಾನ್ಯರ ರಕ್ತ ಹಿಂಡುವ ಆದೇಶಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ನಾಗರಿಕ ಸಮಿತಿಯ ಮೂಲಕ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದು ಅವರು ಹೇಳಿದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ