ಕಾವೇರಿ ದಾಟಿದ ಕಾಡಾನೆಗಳ ಹಿಂಡು: ಗುಹ್ಯ ಗ್ರಾಮ ಕಾಫಿ ತೋಟಗಳಲ್ಲಿ ಅಟ್ಟಹಾಸ
ಸಿದ್ದಾಪುರ:- ಆಹಾರ ಅರಸಿ ಕಾಡಿನಿಂದ ಹೊರಬಂದ ಕಾಡಾನೆಗಳ ಹಿಂಡು ಕಾವೇರಿ ನದಿಯನ್ನು ದಾಟಿ ಗುಹ್ಯ ಗ್ರಾಮದ ಕಾಫಿ ತೋಟಗಳಿಗೆ ನುಗ್ಗಿ ಅಟ್ಟಹಾಸ ಮೆರೆದಿದೆ.
ಮರಿಗಳೊಂದಿಗೆ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ಹಾಡಗಲಿನಲ್ಲೇ ರಾಜಾರೋಷವಾಗಿ ನದಿ ದಾಟಿ ಬಂದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೀನ್ ಕೊಳ್ಳಿ ಅರಣ್ಯ ಪ್ರದೇಶದಿಂದ ಅರೆಕಾಡು–ಬಳಂಜಿಗೆರೆ ಮಾರ್ಗವಾಗಿ ಕಾವೇರಿ ನದಿಯನ್ನು ದಾಟಿದ ಕಾಡಾನೆಗಳು, ಗುಹ್ಯ ಗ್ರಾಮದ ಕಾಫಿ ತೋಟಗಳಲ್ಲಿ ಬಿಡುಬಿಟ್ಟು ಅಪಾರ ಪ್ರಮಾಣದ ಕೃಷಿ ಪಸಲುಗಳನ್ನು ನಾಶಪಡಿಸುತ್ತಿವೆ.
ತೋಟಗಳಿಗೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಕಾಡಾನೆಗಳ ಹಿಂಡನ್ನು ಕಂಡು ಭಯಭೀತರಾಗಿ ಹಿಂದಿರುಗಿದ್ದಾರೆ. ಕಾಡಾನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.