ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಮೂರ್ನಾಡು: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೂರ್ನಾಡಿನ ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಇಂದು ಬೆಳಿಗ್ಗೆ ಯೋಗಾಚರಣೆಯನ್ನು ಸಂಭ್ರಮ ಹಾಗೂ ಶಿಸ್ತಿನಿಂದ ಆಚರಿಸಲಾಯಿತು.

ಶಾಲೆಯ ಯೋಗ ಶಿಕ್ಷಕಿ ಶೋಭಾ ಎ.ಎಸ್. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಟ್ಟಾಗಿ ಯೋಗದ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರತಿಜ್ಞೆ ಸ್ವೀಕರಿಸಿದರು.

ಬಳಿಕ ಯೋಗ ಶಿಕ್ಷಕಿ ಶೋಭಾ ಎ.ಎಸ್. ಅವರು ಯೋಗದ ಮಹತ್ವ, ಆರೋಗ್ಯಕರ ಪ್ರಯೋಜನಗಳು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಯೋಗದ ಪಾತ್ರವನ್ನು ವಿವರಿಸಿದರು. ಶಾಲೆಯ ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಪ್ರಾಣಾಯಾಮ, ಧ್ಯಾನ ಹಾಗೂ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿದರು.

 ವಿದ್ಯಾರ್ಥಿಗಳು ಶಿಸ್ತು, ಏಕಾಗ್ರತೆ ಮತ್ತು ಆತ್ಮವಿಶ್ವಾಸದಿಂದ ಯೋಗ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಪಾತ್ರರಾದರು. ಶಿಕ್ಷಕವೃಂದವೂ ವಿದ್ಯಾರ್ಥಿಗಳೊಂದಿಗೆ ಸೇರಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.

ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ, ಮಾನಸಿಕ ನೆಮ್ಮದಿ, ದೈಹಿಕ ಕ್ಷಮತೆ ಹಾಗೂ ಯೋಗದ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶ ಯಶಸ್ವಿಯಾಯಿತು. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಎಲ್ಲರಲ್ಲೂ ಆರೋಗ್ಯದ ಮಹತ್ವ ಅರಿವು ಮೂಡಿಸಿ, "ಯೋಗವೇ ಆರೋಗ್ಯಕರ ಬದುಕಿನ ದಾರಿ" ಎಂಬ ಸಂದೇಶ ಸಾರಿತು.