ಆಗಸ್ಟ್ 01ಕ್ಕೆ ಎಲ್ಟು ಮುತ್ತಾ ಕನ್ನಡ ಚಿತ್ರ ಬಿಡುಗಡೆ
ಮಡಿಕೇರಿ: ಹೈ5 ಸ್ಟುಡಿಯೋಸ್ ಹಾಗೂ ಎಸಿಇ 22 ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಕನ್ನಡದ ಎಲ್ಟು ಮುತ್ತಾ ಕನ್ನಡ ಚಿತ್ರ ಆ.01ರಂದು ರಾಜ್ಯಾದಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಸತ್ಯ ಶ್ರೀನಿವಾಸನ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರವು ಸಂಪೂರ್ಣವಾಗಿ ಕೂರ್ಗ್ನಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ನಿರ್ದೇಶಕರ ಆರಂಭಿಕ ವರ್ಷಗಳಲ್ಲಿ ಅವರ ಮೇಲೆ ಆಳವಾದ ಪ್ರಭಾವ ಬೀರಿದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಈ ಕಥೆಯು ಎಲ್ಟು ಮತ್ತು ಮುತ್ತಾ ಎಂಬ ಎರಡು ಪ್ರಮುಖ ಪಾತ್ರಗಳ ಸುತ್ತ ಸುತ್ತುತ್ತದೆ. ಚಿತ್ರದ ಸಂಭಾಷಣೆಗಳನ್ನು ಶೌರ್ಯ ಪ್ರತಾಪ್ ಬರೆದಿದ್ದಾರೆ ಎಂದು ತಿಳಿಸಿದರು. ಚಿತ್ರದಲ್ಲಿ ಪ್ರಿಯಾಂಕಾ ಮಳಲಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಕಾಕ್ರೋಚ್ ಸುಧಿ, ನವೀನ್ ಡಿ ಪಡೀಲ್ ಮತ್ತು ಯಮುನಾ ಶ್ರೀನಿಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಪ್ರಸನ್ನ ಕೇಶವ ಸಂಗೀತ, ಮೆಯ್ಯಪ್ಪ ಭಾಸ್ಕರ್ ಛಾಯಾಗ್ರಹಣವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ನಟ ರಾ ಸೂರ್ಯ, ನಾಯಕ ನಟ ಶೌರ್ಯ ಪ್ರತಾಪ, ಸಹ ನಿರ್ಮಾಪಕ ಕೂಪದಿರ ಪವೀಂದ್ರ ಮುತ್ತಪ್ಪ, ನಟರಾದ ರುಹಾನ್ ಆರ್ಯ, ಧನು ದೇವಯ್ಯ ಇದ್ದರು.