ಸುಂಟಿಕೊಪ್ಪದಲ್ಲಿ ಕೊಡಗು ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನ; ಕನ್ನಡ ಭಾಷೆ ಅಭಿವೃದ್ಧಿಗೆ ಸಣ್ಣ ಸಣ್ಣ ಭಾಷೆಗಳ ಕೊಡುಗೆ ಅಪಾರ: ಅಬ್ದುಲ್ ರಶೀದ್

ಸುಂಟಿಕೊಪ್ಪದಲ್ಲಿ ಕೊಡಗು ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನ; ಕನ್ನಡ ಭಾಷೆ ಅಭಿವೃದ್ಧಿಗೆ ಸಣ್ಣ ಸಣ್ಣ ಭಾಷೆಗಳ ಕೊಡುಗೆ ಅಪಾರ: ಅಬ್ದುಲ್ ರಶೀದ್

ಮಡಿಕೇರಿ ಮೇ.29:-ಕೊಡಗನ್ನು ಕರ್ನಾಟಕದ ಕಾಶ್ಮೀರ ಎಂದು ಹೇಳುತ್ತಾರೆ. ಆದರೆ ಈ ಹೋಲಿಕೆ ಯಾಕೋ ಸರಿ ಬರುತ್ತಿಲ್ಲ ಎಂದು ಸಾಹಿತಿ ಅಬ್ದುಲ್ ರಶೀದ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಸುಂಟಿಕೊಪ್ಪದ ಎಸ್.ಎಸ್.ಇಂಟರ್‍ನ್ಯಾಷನಲ್ ಸಭಾಂಗಣದ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ಶುಕ್ರವಾರ ನಡೆದ ಕೊಡಗು ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   

ಕಾಶ್ಮೀರದ ಕಷ್ಟ ಕಾರ್ಪಣ್ಯಗಳ ಅರಿವು ಇರುವವರು ಮತ್ತು ಕೊಡಗಿನ ಚೆಲುವನ್ನು ಚೆನ್ನಾಗಿ ಬಲ್ಲವರು ಯಾರೂ ಸಹ ಈ ಹೋಲಿಕೆ ಸರಿಯಲ್ಲ ಎಂದು ಹೇಳುತ್ತಾರೆ. ಈ ನೆಲದ ಮಣ್ಣು, ಗಾಳಿ, ಇಲ್ಲಿನ ಗುಡಿಗಳು, ಭಗವತಿ, ಈಶ್ವರ, ಅಯ್ಯಪ್ಪ, ಕೊರತಿ, ಚಾಮುಂಡಿ, ದೇವರ ಕಲ್ಲುಗಳು, ದೇವರ ಕಾಡುಗಳು ಈ ಬಗ್ಗೆ ಪ್ರವಾಸಿಗರಲ್ಲಿ ಮಾಹಿತಿ ಇರಬೇಕು ಎಂದು ನುಡಿದರು. 

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಶ್ರಮಿಸಿದ ಲೇಖಕರ ದೊಡ್ಡ ಪಟ್ಟಿಯೇ ಇದೆ. ಪಂಜೆ ಮಂಗೇಶರಾಯರು ಕೊಡಗಿನಲ್ಲಿ ಶಾಲಾ ಇನ್ಸ್‍ಪೆಕ್ಟರ್ ಆಗಿದ್ದರು. ಭಾರತೀಸುತರು ಮಡಿಕೇರಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದು. ಜಿ.ಟಿ.ನಾರಾಯಣರಾಯರು ಗಣಿತ ಶಿಕ್ಷಕರಾಗಿದ್ದರು. ಬಿ.ಡಿ.ಗಣಪತಿ, ಐ.ಮಾ.ಮುತ್ತಣ್ಣ, ಕನ್ನಡದಲ್ಲಿ ಬಹಳಷ್ಟು ಬರೆದಿದ್ದಾರೆ. ಶಿವರಾಮ ಕಾರಂತರು, ಗುಂಡುಗುಟ್ಟಿಯ ಮಂಜುನಾಥಯ್ಯ ಅವರ ತೋಟದ ಮನೆಗೆ ಬಂದು ಕಾದಂಬರಿ ಬರೆಯುತ್ತಿದ್ದರು. ಹಾಗೆಯೇ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಮತ್ತು ಬೇಂದ್ರೆಯವರು ಕೊಡಗಿಗೆ ಬಂದು ಹಲವು ಕಥೆ ಕವನ ಬರೆದಿದ್ದಾರೆ ಎಂದರು. 

‘ಕುವೆಂಪು ಅವರ ಕವಿತೆಯ ಪೂವಮ್ಮ ಕೊಡಗಿನವರಾಗಿದ್ದು, ಈ ಎಲ್ಲರ ಪುಸ್ತಕಗಳ ಮರುಮುದ್ರಣ ಆಗಬೇಕು. ಅವರ ಬದುಕು, ಬರಹಗಳ ಕುರಿತು ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು. ಕೊಡಗಿನ ಆದಿವಾಸಿಗಳ ಸಂಗೀತದ ಒಂದು ಆಡಿಯೋ ಲೈಬ್ರರಿ, ಜಾಲತಾಣಗಳು, ಸಾಮಾಜಿಕ ಮಾಧ್ಯಮಗಳ ಡಿಟಿಟಲ್ ಚಾನಲ್‍ಗಳು ಇವೆಲ್ಲವೂ ಕನ್ನಡ ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು.’ 

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಲ್ಲಿ ಹಾಗೂ ಶಿಕ್ಷಣಕ್ಕೆ ಒತ್ತು ನೀಡುವಲ್ಲಿ ಸರ್ಕಾರದ ಶಿಕ್ಷಣ ನೀತಿಯಲ್ಲಿ ಶಾಲಾ ಗ್ರಂಥಾಲಯಗಳ ಪಾತ್ರ ಪ್ರಮುಖವಾಗಿದೆ. ಪುಸ್ತಕಗಳನ್ನು ಕಪಾಟಿನಲ್ಲಿ ಭದ್ರವಾಗಿ ಬಚ್ಚಿಡಲು ನೋಡುವುದಕ್ಕಿಂತ ಪುಸ್ತಕ ಕಳವಾದರು ಸರಿಯೇ. ಮಕ್ಕಳ ತಲೆಯೊಳಗೆ ಒಳ್ಳೆಯ ಓದಿನ ಭೂತ ಹೊಕ್ಕು ಬಿಡಲಿ ಎಂಬ ದೂರಾಲೋಚನೆ ಇರಬೇಕು ಎಂದರು. 

ಕೊಡಗು ಜಿಲ್ಲೆಯಲ್ಲಿ ಸಾಂಸ್ಕøತಿಕ ನೀತಿ ಮತ್ತು ಶೈಕ್ಷಣಿಕ ಭಾಷಾ ಸೂತ್ರ ಬೇಕಿದೆ. ಕೊಡವ, ಅರೆಭಾಷೆ, ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬ, ಯರವ, ಮೇದ, ಅಡಿಯ, ಪಣಿಯ, ದೇವಸೋಲಿಗ, ಜೇನು ಮಲೆಕುಡಿಯ, ಪೂಮಲೆ ಕುಡಿಯ ಇತ್ಯಾದಿ ಭಾಷೆಗಳನ್ನು ಕೊಡಗಿನಲ್ಲಿ ಅಲ್ಲದೆ ಬೇರೆ ಎಲ್ಲೂ ಬಳಸಲು ಮತ್ತು ಉಳಿಸಲು ಸಾಧ್ಯವಿಲ್ಲ. ಕಲಿಕೆಯ ಭಾಷೆಯಾಗಿ ಈ ಭಾಷೆಯನ್ನು ಬಳಸುವುದು ಅಸಾಧ್ಯವಾದ ವಿಷಯ. ಆದರೆ ಈ ಭಾಷೆಗಳನ್ನು ಬಳಸುವ ಸಮುದಾಯದ ಮಕ್ಕಳಲ್ಲಿ ಈ ಭಾಷೆಗಳ ಕುರಿತ ಕುತೂಹಲ ಆಸಕ್ತಿ ಮತ್ತು ಹೆಮ್ಮೆಯನ್ನು ಮೂಡಿಸುವ ಕೆಲಸ ಆಗಬೇಕು ಎಂದರು. 

ಕೊಡಗಿನ ಶಾಲೆಗಳಲ್ಲಿ ಅದರಲ್ಲೂ ಆದಿವಾಸಿ ಮಕ್ಕಳು ಕಲಿಯುವ ಆಶ್ರಮ ಶಾಲೆಗಳಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ ಈ ಭಾಷೆಗಳ ಮಾಹಿತಿ ಮತ್ತು ಕಲಿಕೆ ಕೊಡಿಸಬೇಕು. ಕನ್ನಡ ಭಾಷೆ ಇಷ್ಟು ಶ್ರೀಮಂತವಾಗಿ ಬೆಳೆಯಲು ಕರ್ನಾಟಕದ ತುಂಬಾ ತುಂಬಿರುವ ಇಂತಹ ಸಣ್ಣ ಪುಟ್ಟ ಭಾಷೆಗಳು ಎಂದರೆ ತಪ್ಪಾಗಲಾರದು ಎಂದರು. 

ಈ ಪುಟ್ಟ ತೊರೆಗಳಿಂದ ಹರಿದು ಬರುವ ಭಾಷಾ ಹರವು ಕನ್ನಡವನ್ನು ಎತ್ತರಕ್ಕೆ ಕೊಂಡೊಯ್ಯುದಿದೆ. ಈ ಭಾಷೆಗಳು ಸೊರಗಿದರೆ, ಕನ್ನಡವು ಬಡವಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಕನ್ನಡ ಭಾಷೆ ಉಳಿಸುವುದೆಂದರೆ ಇಲ್ಲಿನ ಸಣ್ಣ ಪುಟ್ಟ ಭಾಷೆಗಳನ್ನು ಉಳಿಸುವುದು. ಅಳಿವಿನ ಅಂಚಿನಲ್ಲಿರುವ ಈ ಭಾಷೆಯನ್ನು ಆಡುವ ಜನರ ಜೀವವನ್ನು ಕಾಪಾಡುವುದು ಆಗಿದೆ ಎಂದರು. 

ಅಳಿವಿನತ್ತ ಸಾಗುತ್ತಿರುವ ಮೂಲ ನಿವಾಸಿಗಳ ಹಿತವನ್ನು ಕಾಪಾಡುವುದು ಅತ್ಯಗತ್ಯವಾಗಿದೆ ಎಂದರು. ಸಣ್ಣಪುಟ್ಟ ಭಾಷೆಯನ್ನು ಉಳಿಸುವಲ್ಲಿ ಆಧುನೀಕ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಅಪರೂಪದ ಕಲಾ ಮಾಧ್ಯಮಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಪ್ರಚುರ ಪಡಿಸುವ ಕೆಲಸ ಮಾಡಬಹುದಾಗಿದೆ ಎಂದರು. 

‘ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆ ಮತ್ತು ಸಹಭಾಳ್ವೆಯಿಂದ ಬದುಕಬೇಕು. ದೂರದಿಂದ ಮತ್ತು ಮೇಲೆ ಆಕಾಶದಿಂದ ನೋಡಿದರೆ ನಂದನವನದಂತೆ ಕಾಣುತ್ತಿರುವಂತೆ ಕೊಡಗಿನ ಕಾಡುಗಳ ಒಳಹೊಕ್ಕರೆ ಏನು ಕಾಣುತ್ತದೆ. ಪಕ್ಕದಲ್ಲಿರುವ ಹೆರೂರು ಹಾಡಿ, ಚಿಕ್ಲಿಹೊಳೆ ಕಾಡಿನ ಹಾಡಿಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಬದುಕು ಹೇಗಿದೆ. ಯಾಕೆ ಹಾಡಿಗಳಿಂದ ಒಬ್ಬ ಬರಹಗಾರ, ಒಬ್ಬ ಹಾಡುಗಾರ, ಒಬ್ಬ ಅಧಿಕಾರಿ, ಒಬ್ಬ ವಕೀಲ ಮೂಡಿ ಬರಲಿಲ್ಲ. ಯಾಕೆ ಮಕ್ಕಳು ಅಕ್ಷರದ ಇಂದ್ರಜಾಲದಿಂದ ವಂಚಿತರಾದರು ಎಂಬ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕಿದೆ ಎಂದರು.’ 

ಕೊಡಗಿನ ವನರಾಶಿಯೊಳಗೆ ಮುಸುಕು ಹೊದ್ದುಕೊಂಡು ನಿಟ್ಟುಸಿರು ಬಿಡುತ್ತಿರುವ ಗಿರಿಜನ ಹಾಡಿಗಳ ಒಳಗೆ ಯಾಕೆ ಸದ್ದಿಲ್ಲದೆ ಮತಾಂತರ ಕಾರ್ಯ ನಡೆಯುತ್ತಿದೆ. ಮದ್ಯ ವ್ಯಸನದಿಂದ ಬಿಡುಗಡೆ ಹೊಂದಲು ಮತಾಂತರಕ್ಕೆ ಮೊರೆ ಹೋಗುತ್ತಿರುವ ಕೊಡಗಿನ ಆದಿವಾಸಿ ಮೂಲ ನಿವಾಸಿಗರು ತಮ್ಮದೇ ಆದ ಆಚರಣೆ, ದೇವರು, ದೈವಗಳನ್ನು ಯಾಕೆ ಅಸಡ್ಡೆಯಿಂದ ನೋಡಲು ತೊಡಗಿದ್ದಾರೆ. ಜೀತ, ಹಸಿವು, ಅವಮಾನ, ಮದ್ಯಪಾನ ಮತ್ತು ಮತಾಂತರ ಹೀಗೆ ಒಂದಕ್ಕೆ ಒಂದು ಇವರ ಕೊರಳಿಗೆ ಸುತ್ತುಕೊಳ್ಳುತ್ತಿರುವ ಈ ಭಯಾನಕ ಸರಣಿಯ ಕೊಂಡಿಗಳನ್ನು ಕತ್ತರಿಸುವುದು ಹೇಗೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ ಎಂದು ಅಬ್ದುಲ್ ರಶೀದ್ ಅವರು ಪ್ರತಿಪಾದಿಸಿದರು. 

ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ.ತೀತಿರ ರೇಖಾ ವಸಂತ್ ಅವರು ಮಾತನಾಡಿ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ. ನಾಡು ನುಡಿ ಪ್ರತಿಯೊಬ್ಬರಲ್ಲೂ ಪ್ರೇಮ ಮತ್ತು ಅಭಿಮಾನ ಇರಬೇಕು ಎಂದರು. 

ಕವಿರಾಜ ಮಾರ್ಗ ಅವರು ಹೇಳಿರುವಂತೆ ಸಮಾಜ ಮತ್ತು ಧರ್ಮದಲ್ಲಿ ಸಹಿಷ್ಣುತೆ ಇರಬೇಕು. ಹಾಗಾದಾಗ ಮಾತ್ರ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು ಎಂದರು. 

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ಜಿಲ್ಲೆಯಲ್ಲಿ ಕನ್ನಡ ಭಾಷೆ, ಬರಹ, ಕವನ, ಹನಿಗವನ, ಪುಸ್ತಕ ಪ್ರಕಟ ಹೀಗೆ ಸಾಹಿತ್ಯ ಸಂಬಂಧ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ ಎಂದರು. 

17ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ 19 ದ್ವಾರಗಳನ್ನು ನಿರ್ಮಿಸಿ ಸ್ಥಳೀಯ ಕವಿಗಳು, ಸಾಹಿತಿಗಳು, ಬರಹಗಾರರು ಸೇರಿದಂತೆ ಕನ್ನಡ ಭಾಷೆಗೆ ದುಡಿದಿರುವವರ ಸ್ಮರಿಸುವ ಕಾರ್ಯ ಮಾಡಲಾಗಿದೆ. ವಿಚಾರ ಸಂಕಿರಣ, ಕವಿಗೋಷ್ಠಿ, ವಿಚಾರ ಮಂಡನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು. 

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಬಹುಭಾಷಿಕರು ವಾಸಿಸುವ ಸುಂಟಿಕೊಪ್ಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಚಾರ ಎಂದರು. 

ಇಂದಿನ ಯುವ ಪೀಳಿಗೆಗೆ ಕನ್ನಡ ಸಾಹಿತ್ಯದ ಮಹತ್ವವನ್ನು ತಿಳಿಸುವಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಲ್ಲಿ ಮೂರು ಸಾವಿರ ಮಂದಿ ಸದಸ್ಯರು ನೋಂದಣಿ ಮಾಡಿದ್ದು, ಎಲ್ಲರೂ ಸಾಹಿತ್ಯ ಸಮ್ಮೇಳನದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು. 

ಎಲ್ಲೆಡೆ ಪೂರ್ಣಮಯವಾದ ಕನ್ನಡ ವಾತಾವರಣ ನಿರ್ಮಾಣ ಮಾಡಬೇಕು. ನುಡಿ ಜಾತ್ರೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು. 

ಸಾಹಿತಿ ಎಂ.ಜಿ.ನಾಗರಾಜು ಅವರು ಮಾತನಾಡಿ ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಕೊಡಗಿನ ನೆಲಜಲ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. 

ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾದ ವಿ.ಪಿ.ಶಶಿಧರ ಅವರು ಮಾತನಾಡಿ ಕನ್ನಡತನ ಪ್ರತಿಯೊಬ್ಬರಲ್ಲೂ ಇರಬೇಕು. ಕನ್ನಡ ಒಂದು ಭಾಷೆಯಲ್ಲ ಅದೊಂದು ರೀತಿಯ ಬದುಕು ಮತ್ತು ಭಾವನೆ ಎಂದು ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್ ಅವರು ಮಾತನಾಡಿ ಕೊಡಗಿನ ಗೌರಮ್ಮ ಸುಂಟಿಕೊಪ್ಪ ಗ್ರಾಮದವರಾಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. 

ಇ.ಸುಲೇಮಾನ್ ಬರೆದಿರುವ ರಾಗವಿಲ್ಲದ ಕವಿತೆ, ಎಚ್.ಮಂಜುನಾಥ್ ಅವರು ಬರೆದಿರುವ ಮನುಷತ್ವದ ಸಾರ, ಜಯಪ್ರಕಾಶ್ ಪುತ್ತೂರು ಅವರು ಬರೆದಿರುವ ವ್ಯಕ್ತಿತ್ವ ವಿಕಸನದ ವಿಚಾರಧಾರೆ., ಡಾ.ಬೆಸೂರು ಮೋಹನ್ ಪಾಳೇಗಾರ್ ಅವರು ಬರೆದಿರುವ ಸ್ವಾತಂತ್ರ್ಯ ಕ್ರಾಂತಿಯ ಕಿಡಿ, ಗಣೇಶ್ ಶರ್ಮ ಅವರು ಬರೆದಿರುವ ಮಕ್ಕಳ ಕಥೆ, ಹೇಮಂತ್ ಪಾರೇರ ಅವರು ಬರೆದಿರುವ ಸ್ವಪ್ನದ ಹಕ್ಕಿ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಹಲವು ಗಣ್ಯರನ್ನು ಸನ್ಮಾನಿಸಲಾಯಿತು. 

ಪ್ರಮುಖರಾದ ವಿಶಾಲ್ ಶಿವಪ್ಪ, ಸಭಾಸ್ಟಿನ್, ಮುನೀರ್ ಅಹಮದ್, ರೇವತಿ ರಮೇಶ್, ಜಲಜಾಶೇಖರ್, ವಾಸುರೈ, ಕಡ್ಲೇರ ತುಳಸಿ ಮೋಹನ್, ಅಂಬೆಕಲ್ಲು ನವೀನ್, ಇಒ ಪರಮೇಶ್, ಕೆ.ಎಸ್.ನಾಗೇಶ್, ದಯಾಚಂಗಪ್ಪ, ನಿಜಾಮುದ್ದೀನ್, ನಾಸೀರ್, ಇತರರು ಇದ್ದರು. 

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಎ.ಲೋಕೇಶ್ ಕುಮಾರ್ ಸ್ವಾಗತಿಸಿದರು. ಸುನಿತಾ ಗಿರೀಶ್ ಮತ್ತು ಅನಿಲ್ ಕುಮಾರ್ ಮತ್ತು ವಿ.ಜಿ.ಲೋಕೇಶ್ ನಿರೂಪಿಸಿದರು. ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ನಾಡಗೀತೆ ಹಾಡಿದರು. 

ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಮುಖ್ಯ ರಸ್ತೆಗಾಗಿ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದವರೆಗೆ ನಡೆಯಿತು.

ಮೆರವಣಿಗೆಯಲ್ಲಿ ಮಂಗಳ ವಾದ್ಯ, ಚಂಡೆ ವಾದ್ಯ, ಕಳಸ ಹೊತ್ತ ಮಹಿಳೆಯರು, ಗೊಂಬೆಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ಬ್ಯಾಂಡ್ ಸೆಟ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಅಂಗನವಾಡಿ ಸಂಘಟನೆ, ಸ್ತ್ರೀಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ಸಂಘ ಸಂಸ್ಥೆಗಳ ಮತ್ತು ಸಮಾಜಗಳ ಪ್ರತಿನಿಧಿಗಳು, ಆಟೋ ಮತ್ತು ವಾಹನ ಚಾಲಕರ ಸಂಘದವರು, ಎನ್‍ಸಿಸಿ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡದೊಂದಿಗೆ ಮೆರವಣಿಗೆ ನಡೆಯಿತು. ಸೆಸ್ಕ್ ಇಲಾಖೆಯಿಂದ ನಿರ್ಮಿಸಲಾಗಿದ್ದ ಸ್ತಬ್ಧಚಿತ್ರಗಳು ಗಮನಸೆಳೆಯಿತು.